ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಜಾಗತಿಕ ಮಟ್ಟದಲ್ಲಿ ಪರಿಸರವನ್ನು ಉಳಿಸದಿದ್ದರೆ ಭವಿಷ್ಯದಲ್ಲಿ ಮನುಷ್ಯನ ಬದುಕಿಗೆ ಅಪಾಯ ತಪ್ಪಿದಲ್ಲ ಎಂದು ಕರ್ನಾಟಕ ವಸ್ತು ಪ್ರದರ್ಶನದ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಜಿಲ್ಲಾ ಬಿಜೆಪಿ ರೈತ ಮೊರ್ಚಾ ಜಿಲ್ಲಾಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ ಹೇಳಿದರು.
ಅವರು ಪಟ್ಟಣದ ವಾರ್ಡ್ 12 ಈಶ್ವರನಗರದಲ್ಲಿ ಬಿಜೆಪಿ ಪಕ್ಷದಿಂದ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಹನ್ನೊಂದು ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ಪಕ್ಷದದಿಂದ ಆರವತ್ತು ದಿನದ ಪರಿಸರ ಸ್ನೇಹಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚೆಗೆ ಪರಿಸರಕ್ಕೆ ಸಾಕಷ್ಟು ಹಾನಿಯುಂಟಾಗುತ್ತಿದೆ. ಪ್ರಕೃತಿ ಮೇಲೆ ಮಾನವನ ದಬ್ಬಾಳಿಕೆಯಿಂದಾಗಿ ಪ್ರಾಕೃತಿಕ ವಿಕೋಪ ಸಂಭವಿಸುತ್ತಿದೆ. ಪರಿಸರ ಉಳಿವಿಗೆ ಪ್ರತಿಯೊಬ್ಬರ ಕೊಡುಗೆ ಅನಿವಾರ್ಯವಾಗಿದೆ ಎಂದರು.
ಪರಿಸರ ಉಳಿವಿಗೆ ಗಿಡ ನೆಟ್ಟರಷ್ಟೆ ಸಾಲದು. ಅವುಗಳನ್ನು ನಿತ್ಯವೂ ಪೋಷಿಸಿ ಬೆಳೆಸಬೇಕು. ಮಕ್ಕಳಲ್ಲಿ ಪರಿಸರ ಆಸಕ್ತಿ ಮೂಡಿಸಬೇಕು. ಮನೆಯ ಸುತ್ತಮುತ್ತ ಸ್ವಚ್ಛತೆ ಕಾಯ್ದುಕೊಳ್ಳಬೇಕು. ಸರಿಯಾದ ರೀತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಆಗಬೇಕಿದೆ. ಮಳೆ ಕೊಯ್ಲು ಅಳವಡಿಕೆ ಮೂಲಕ ನೀರಿನ ಉಳಿತಾಯ ಸೇರಿದಂತೆ ಪರಿಸರಕ್ಕೆ ಪೂರಕ ಕಾರ್ಯಕ್ಕೆ ಮುಂದಾಗಬೇಕೆಂದು ಸಲಹೆ ನೀಡಿದರು.
ಹವಾಮಾನ ಬದಲಾವಣೆ ಭೂಮಿಗೆ ಎದುರಾಗಿರುವ ದೊಡ್ಡ ಸವಾಲು ಎಂಬುವುದು ಇತ್ತೀಚೆಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಅದನ್ನು ಎದುರಿಸಲು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಜಾಗತಿಕ ತಾಪಮಾನದ ಜೊತೆಗೇ ಪ್ಲಾಸ್ಟಿಕ್ ಪರಿಸರಕ್ಕೆ ಸವಾಲಾಗಿದೆ. ಈ ಸಂಬಂಧ ಕೆಲವು ಕ್ರಮಗಳನ್ನು ಕೈಗೊಂಡರೂ, ಪ್ಲಾಸ್ಟಿಕ್ನ ದುಷ್ಪರಿಣಾಮಗಳನ್ನು ಜನರು ಅರ್ಥೈಸಿಕೊಂಡಂತೆ ಕಾಣುತ್ತಿಲ್ಲ.
ಪ್ಲಾಸ್ಟಿಕ್ನಿಂದ ಭೂಮಾಲಿನ್ಯ, ಪರಿಸರದ ಅವನತಿ, ಜಲಚರಗಳ ಸಾವು, ಭೂಮಿಯ ಮೇಲಿನ ವನ್ಯಜೀವಿಗಳ ಸಾವು, ಮೈಕ್ರೋಪ್ಲಾಸ್ಟಿಕ್ಗಳ ಉತ್ಪಾದನೆ, ಆರ್ಥಿಕ ವೆಚ್ಚ, ರೋಗ ಹರಡುವಿಕೆ, ಅಂತರ್ಜಲ ಮಟ್ಟದ ಕುಸಿತ, ಗಿಡ-ಮರಗಳ ಬೆಳವಣಿಗೆಗೆ ಅಡ್ಡಿ, ಮಣ್ಣಿನ ಫಲವತ್ತತೆ ಕುಸಿತ, ನೀರಿನ ಹರಿಯುವಿಕೆಗೆ ತಡೆ, ರೋಗಗಳು ಹರಡುವಿಕೆ, ವಿಷಕಾರಿ ಅನಿಲ ಉತ್ಪಾದನೆ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತಿದೆ ಆದ್ದರಿಂದ ಪ್ರತಿಯೊಬ್ಬರು ತಮ್ಮ ಮನೆಗಳ ಸುತ್ತಮುತ್ತಲಿನಲ್ಲಿ ಗಿಡಿಗಳನ್ನು ನೆಟ್ಟು ಪೋಷಿಸಿ ಬೆಳೆಸಿ ಎಂದು ಮನವಿ ಮಾಡಿದರು.
ರಾಜ್ಯ ಬಿಜೆಪಿ ಅಲ್ಪಸಂಖ್ಯಾತರ ಕಾರ್ಯದರ್ಶಿ ಪ್ರಭಾಕರ್ ಜೈನ್, ಜಿಲ್ಲಾ ಬಿಜೆಪಿ ಮಾಜಿ ಉಪಾಧ್ಯಕ್ಷ ಹೊಸಳ್ಳಿ ವೆಂಕಟೇಶ್, ಮಂಡಲದ ಪ್ರಧಾನ ಕಾರ್ಯದರ್ಶಿ ಕೆ ಎಸ್ ಉಮಾಶಂಕರ್, ಜಿಲ್ಲಾ ಯುವ ಮೊರ್ಚಾ ಕಾರ್ಯದರ್ಶಿ ಅನಿಲ್ ಗೌಡ, ಎಸ್.ಸಿ.ಮೊರ್ಚಾ ಕಾರ್ಯದರ್ಶಿ ಅರಕೆರೆ ಮಧು, ತಾ.ಬಿಜೆಪಿ ವಕ್ತಾರ ಗೋಪಾಲ್ ರಾಜ್, ತಾ.ಮಂಡಳದ ಉಸ್ತುವಾರಿ ಮಾರ್ಕಂಡೇಯ, ನಗರ ಪ್ರ.ಕಾರ್ಯದರ್ಶಿ ಮಂಜೂಗೌಡ, ಬಿಜೆಪಿ ಮುಖಂಡ ಸತೀಶ್, ಓಬಿಸಿ ಮೊರ್ಚಾ ಕಾರ್ಯದರ್ಶಿ ರಾಜೇಶ್, ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷೆ ಸ್ವಪ್ನ ನಾಗೇಶ್, ಮಹಿಳಾ ಮೋರ್ಚಾ ಕಾರ್ಯದರ್ಶಿಗಳಾದ ನಾಗಶ್ರೀ ವೀಣಾ, ಮುಖಂಡರಾದ ಜಗದೀಶ್ ಪುನೀತ್, , ರೈತ ಮೋರ್ಚಾ ಅಧ್ಯಕ್ಷ ಶಂಭುಲಿಂಗಪ್ಪ, ಈಶ್ವರ್ ನಗರ ನಿವಾಸಿಗಳಾದ ಗಿರೀಶ್, ಜಗದೀಶ್, ಚೆನ್ನಪ್ಪ ಮಂಚೇಗೌಡ ಮೊದಲಾದವರು ಇದ್ದರು.