ಕೆ.ಆರ್.ನಗರ : ಮೂರು ದಶಕಗಳ ಕಾಲ ಕ್ಷೇತ್ರದಲ್ಲಿ ಸಾಮರಸ್ಯದ ರಾಜಕಾರಣ ಮಾಡಿ ಮನೆ ಮಾತಾಗಿದ್ದ ಮಾಜಿ ಸಚಿವ ದಿ.ಎಸ್.ನಂಜಪ್ಪನವರು ದೇಶದ ರಾಜಕೀಯ ನಾಯಕರಿಗೆ ಮಾದರಿ ಎಂದು ಮುಡಾ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ್ ಹೇಳಿದರು.
ಪಟ್ಟಣದ ಶ್ರೀರಾಮ ಬಡಾವಣೆಯಲ್ಲಿರುವ ಹೆಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ದಿ.ಎಸ್.ನಂಜಪ್ಪನವರ 12ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರಳ ಜೀವನ ನಡೆಸಿ ಬದುಕಿದ ಅಂತಹವರ ಸಂಖ್ಯೆ ಬಹಳ ವಿರಳ ಎಂದರು.
ತಮ್ಮ ರಾಜಕೀಯ ಜೀವನದುದ್ದಕ್ಕೂ ಕ್ಷೇತ್ರದ ಮತದಾರರನ್ನು ಗೌರವದಿಂದ ನಡೆಸಿಕೊಂಡ ಅವರು ಸುಳ್ಳು ಭರವಸೆಗಳನ್ನು ನೀಡದೆ ಕೊಟ್ಟ ಮಾತಿಗೆ ತಕ್ಕಂತೆ ನಡೆದ ದಿಟ್ಟ ರಾಜಕಾರಣಿ ಎಂದು ಕೊಂಡಾಡಿದ ಅವರು ಯುವ ರಾಜಕಾರಣಿಗಳು ಅವರ ತತ್ವ ಮತ್ತು ಆದರ್ಶಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.
ಜೆ.ಹೆಚ್.ಪಟೇಲ್ ಅವರ ಸಂಪುಟದಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾಗಿ ದಕ್ಷತೆಯಿಂದ ಕೆಲಸ ನಿರ್ವಹಿಸಿದ್ದ ದಿವಂಗತರು ತಮಗೆ ದೊರೆತ ಅಲ್ಪ ಅವಧಿಯ ಸಚಿವ ಸ್ಥಾನದ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳದೆ ಜನ ಸೇವೆಗಾಗಿ ಬಳಸಿದ ಧೀಮಂತ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ರಾಜಕೀಯ ಜೀವನದ ಜತೆಗೆ ಪಟ್ಟಣದಲ್ಲಿ 28 ವರ್ಷಗಳ ಹಿಂದೆ ನವ ನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಸ್ಥಾಪಿಸುವ ಮೂಲಕ ಸಹಕಾರ ಕ್ಷೇತ್ರಕ್ಕೆ ಕಾಲಿಟ್ಟು ಅಲ್ಲಿಯೂ ಯಶಸ್ವಿಯಾದ ಎಸ್.ನಂಜಪ್ಪನವರು ಬ್ಯಾಂಕ್ ಬೃಹದಾಕಾರವಾಗಿ ಬೆಳೆದು ಸಾವಿರಾರು ಗ್ರಾಹಕರಿಗೆ ಉತ್ತಮ ಸೇವೆ ನೀಡಿ ನೂರಾರು ಮಂದಿಗೆ ಉದ್ಯೋಗ ಕಲ್ಪಿಸಿ ರಾಜ್ಯ ಮಟ್ಟದಲ್ಲಿ ಹೆಸರು ಗಳಿಸಲು ಕಾರಣರಾಗಿದ್ದರು. ಇಂತಹ ಅಪೂರ್ವ ಸಾಧನೆ ಅವರಿಂದ ಮಾತ್ರ ಸಾಧ್ಯ ಎಂದು ನುಡಿದರು.

ಶಾಸಕ ಡಿ.ರವಿಶಂಕರ್, ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಮಾಜಿ ಸಚಿವ ಸಾ.ರಾ.ಮಹೇಶ್, ಜಿ.ಪಂ.ಮಾಜಿ ಸದಸ್ಯ ಅಮಿತ್.ವಿ.ದೇವರಹಟ್ಟಿ, ಮೈಸೂರು ಮಹಾ ನಗರ ಪಾಲಿಕೆ ಮಾಜಿ ಸದಸ್ಯ ಪಿ.ಪ್ರಶಾಂತ್ ಗೌಡ, ಜಿಲ್ಲಾ ಪತ್ರ ಬರಹಗಾರ ಮಿರ್ಲೆರಾಜೀವ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಎಂಸಿಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ಮಂಜುಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಳ್ಳಿಸೋಮು, ತಾಲೂಕು ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ವಡ್ಡರಕೊಪ್ಪಲುಶಿವರಾಮು, ವಕೀಲ ಅಂಕನಹಳ್ಳಿ ಎ.ತಿಮ್ಮಪ್ಪ, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್, ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೆಬ್ಬಾಳುಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷರಾದ ಡಿ.ಕಾಂತರಾಜು, ಗೀತಾಮಹೇಶ್, ಕೋಳಿಪ್ರಕಾಶ್, ಮತ್ತಿತರರು ಎಸ್.ನಂಜಪ್ಪನವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಮಾಜಿ ಸಚಿವ ಎಸ್.ನಂಜಪ್ಪನವರ ಧರ್ಮಪತ್ನಿ ಲಲಿತಮ್ಮನಂಜಪ್ಪ, ಪುತ್ರರಾದ ಕೆ.ಎನ್.ಬಸಂತ್, ಕೆ.ಎನ್.ದಿನೇಶ್, ನವ ನಗರ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷೆ ಸರೋಜನಾರಾಯಣ್, ಪ್ರಧಾನ ವ್ಯವಸ್ಥಾಪಕ ಸಿ.ಸುರೇಶ್, ಶಾಖಾ ವ್ಯವಸ್ಥಾಪಕ ಎಂ.ಪಿ.ಸುಹಾಸ್ ಸೇರಿದಂತೆ ಬ್ಯಾಂಕ್ ನ ನಿರ್ದೇಶಕರುಗಳು ಮತ್ತು ಸಿಬ್ಬಂದಿ ಹಾಜರಿದ್ದರು.



