ಬೆಂಗಳೂರು : ಚುನಾವಣಾ ಕರ್ತವ್ಯದಿಂದ ವೈದ್ಯರು, ನರ್ಸ್ ಗಳಿಗೆ ಹೈ ಕೋರ್ಟ್ ವಿನಾಯಿತಿ ನೀಡಿದೆ. ವೈದ್ಯರು, ನರ್ಸ್ಗಳು ಸೇರಿದಂತೆ ಫಾರ್ಮಸಿಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ಯಶವಂತಪುರದ ESI ಡಿಸ್ಪೆನ್ಸರಿಯ ಫಾರ್ಮಸಿ ಅಧಿಕಾರಿ ಕೆ.ಪ್ರದೀಪ್ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಬಿ.ಎಂ.ಸಂತೋಷ್, ವೈದ್ಯರು, ನರ್ಸ್ ಗಳು, ಫಾರ್ಮಸಿ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯದಿಂದ ವಿನಾಯ್ತಿ ನೀಡಲಾಗಿದೆ. ಆದರೂ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಫಾರ್ಮಸಿ ಅಧಿಕಾರಿಗಳಿಗೆ ಕಾನೂನು ಬಾಹಿರ ಆದೇಶ ಹೊರಡಿಸಿದ್ದು, ಚುನಾವಣಾ ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಅಕ್ಷೇಪಿಸಿದರು.
ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ವೈದ್ಯರು, ನರ್ಸ್ಗಳು ಮತ್ತು ಎಎನ್ಎಂ ಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸದಂತೆ ಚುನಾವಣಾ ಆಯೋಗವೇ ಆದೇಶಿಸಿದೆ. ಹೀಗಾಗಿ, ಅವರಿಗೆ ಸೇವೆಯಿಂದ ವಿನಾಯಿತಿ ನೀಡಬೇಕು ಎಂದು ಜಿಲ್ಲಾ ಚುನಾವಣಾ ಅಧಿಕಾರಿಗೆ ನಿರ್ದೇಶಿಸಿತು.