ಬೆಳಗಾವಿ: ರಾಜ್ಯ ಚಳಿಗಾಲದ ಅಧಿವೇಶನದ ಅವಧಿ ಒಂದು ವಾರ ವಿಸ್ತರಿಸಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ಅವರಿಗೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಪತ್ರ ಬರೆದಿದ್ದಾರೆ. ಡಿ. 8ರಿಂದ 19ರವರೆಗೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕಾರಣಾಂತರಗಳಿಂದ 10 ದಿನಗಳ ಅಧಿವೇನದಲ್ಲಿ 2 ದಿನದ ಅಧಿವೇಶನದ ಸಮಯ ಮೊಟುಕುಗೊಂಡಿದೆ. ಹೀಗಾಗಿ ಅಧಿವೇಶನ ಅವಧಿ ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನೂ ಈ ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಾಗಿರುವ ಬಹಳಷ್ಟು ವಿಷಯಗಳು ಬಾಕಿಯಿದ್ದು, ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ತಾವು ಪ್ರಸ್ತುತ ಅಧಿವೇಶನವನ್ನು ಇನ್ನೂ ಒಂದು ವಾರಗಳ ಕಾಲ ವಿಸ್ತರಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅದಲ್ಲದೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಿ.ಪಿ.ಪಿ. ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿಪಡಿಸಲು ಏಕಗವಾಕ್ಷಿ ಏಜೆನ್ಸಿ ವತಿಯಿಂದ ಅನುಮೋದನೆ ಪಡೆದು ಬೆಂಗಳೂರಿನ ಐಡೆಕ್ ಸಂಸ್ಥೆಯನ್ನು ವ್ಯವಹರಣಾ ಸಮಾಲೋಚಕರನ್ನಾಗಿ ನೇಮಿಸಲಾಗಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ತಿಳಿಸಿದರು. ಈ ಬಗ್ಗೆ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಶಾಸಕ ರಾಜೇಗೌಡ ಟಿ.ಟಿ ಅವರ ಪ್ರಶ್ನೆಗೆ ತೋಟಗಾರಿಕೆ ಸಚಿವರ ಪರವಾಗಿ ರಾಮಲಿಂಗಾರೆಡ್ಡಿ ಉತ್ತರ ನೀಡಿದರು.
ಇನ್ನೂ ಸ್ಪೈಸ್ ಪಾರ್ಕ್ ಅಭಿವೃದ್ಧಿಗೆ ಗುರುತಿಸಲಾಗಿದ್ದ ಜಾಗದ ಭೌತಿಕ ಪರಿಶೀಲನೆಯನ್ನು ಸಾಂಬಾರು ಮಂಡಳಿ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ ಹಾಗೂ ಕೈಗಾರಿಕೆ ಇಲಾಖೆಯ ಅಧಿಕಾರಿಗಳು ಕೈಗೊಂಡಾಗ, ಸದರಿ ಜಾಗವು ಸ್ಪೈಸ್ ಪಾರ್ಕ್ ನಿರ್ಮಾಣ ಮಾಡಲು ಸೂಕ್ತವಾಗದೇ ಇರುವ ಹಿನ್ನೆಲೆಯಲ್ಲಿ ಸೂಕ್ತವಾದ ಪರ್ಯಾಯ ಜಾಗವನ್ನು ನೀಡಲು ಕೋರಲಾಗಿತ್ತು. ಅದರಂತೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಗೋಣಿಬೀಡು ಹೋಬಳಿ ಬೆಟ್ಟದಮನೆ ಗ್ರಾಮದಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ ಉದ್ದೇಶಕ್ಕಾಗಿ ತೋಟಗಾರಿಕೆ ಇಲಾಖೆಗೆ ಭೂಮಿ ವರ್ಗಾಯಿಸಿ, ದಿನಾಂಕ 30-5-2025ರಂದು ಆದೇಶ ಹೊರಡಿಸಲಾಗಿದೆ.
ಜಮೀನಿನ ಹದ್ದುಬಸ್ತು ಗುರುತಿಸುವಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಪ್ರಸ್ತುತ ವ್ಯವಹರಣಾ ಸಮಾಲೋಚಕರನ್ನು ನೇಮಿಸಿ ವರದಿಯನ್ನು ಸಿದ್ದಪಡಿಸಲು ಸೂಚಿಸಲಾಗಿರುತ್ತದೆ. ವರದಿ ಬಂದ ಕೂಡಲೇ ಆದಷ್ಟು ಶೀಘ್ರವಾಗಿ ಸ್ಪೈಸ್ ಪಾರ್ಕ್ ಕಾರ್ಯಾರಂಭಗೊಳಿಸಲಾಗುವುದು ಎಂದು ಈ ವೇಳೆ ತಿಳಿಸಿದ್ದಾರೆ.



