ಬೆಂಗಳೂರು : ಈ ಬಾರಿ ಸಂಪುಟ ಪುನರ್ರಚನೆಯಾದಾಗ ನನಗೆ ಸಚಿವ ಸ್ಥಾನ ಸಿಗುತ್ತದೆ ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಂಪುಟ ಪುನರ್ ರಚನೆ ಆದಾಗ ಸಚಿವ ಸ್ಥಾನ ನೀಡುವುದಾಗಿ ಎಲ್ಲಾ ನಾಯಕರು ಹೇಳಿದ್ದಾರೆ. ಯಾವಾಗ ವಿಸ್ತರಣೆ ಆಗುತ್ತದೋ ನನಗೆ ಗೊತ್ತಿಲ್ಲ. ವಿಸ್ತರಣೆಯಾದಾಗ ನನಗೆ ಸ್ಥಾನ ಸಿಗುವ ವಿಶ್ವಾಸವಿದೆ ಎಂದರು.
ನಾಯಕತ್ವ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೈಕಮಾಂಡ್ ಎಲ್ಲವನ್ನು ಇತ್ಯರ್ಥ ಮಾಡುತ್ತದೆ. ಹೈಕಮಾಂಡ್ ಶಕ್ತಿಯುತವಾಗಿದೆ. ಇಂತಹ ವಿಚಾರ ಬಂದಾಗ ಅದನ್ನು ಹೈಕಮಾಂಡ್ ನಿಭಾಯಿಸುತ್ತದೆ. ಇಕ್ಬಾಲ್ ಹುಸೇನ್ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. ಹಾಸನದಲ್ಲಿ ಜೆಡಿಎಸ್ ಸಮಾವೇಶ ವಿಚಾರಕ್ಕೆ ಮಾತನಾಡಿದ ಅವರ ಪಕ್ಷ ಸಂಘಟನೆಗೆ ಅವರು ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಜೊತೆ ಹೋಗುವುದಿಲ್ಲ ಎಂದು ದೇವೇಗೌಡರು ಹೇಳಿದ್ದರು. ಈಗ ಅವರ ಜೊತೆ ಇದ್ದಾರೆ. ಹೀಗಾಗಿ ಏನು ಅಂತ ನೋಡಬೇಕು ಎಂದು ಹೇಳಿದರು.
ಬಳ್ಳಾರಿ ಬ್ಯಾನರ್ ಘರ್ಷಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವಾಲ್ಮೀಕಿ ಪೋಸ್ಟರ್ ಹಾಕಿದರೆ ಬಿಜೆಪಿ ಅವರಿಗೆ ಏನ್ ಸಮಸ್ಯೆ? ಇದಕ್ಕೆ ಗಲಾಟೆ ಮಾಡುವುದು ಸರಿಯಲ್ಲ. ಬಿಜೆಪಿಯವರು ಮಾಡಿದ್ದು ತಪ್ಪು. ಆತ್ಮಗೌರವ ಇದ್ದರೆ ಈ ಘಟನೆ ಬಿಜೆಪಿ ಅವರು ಸಮರ್ಥಿಸಿಕೊಳ್ಳಬಾರದು ಎಂದು ಕಿಡಿಕಾರಿದರು. ವಾಲ್ಮೀಕಿ ಪೋಟೊ ಹಾಕಿದ್ರೆ ಏನ್ ತಪ್ಪು? ಫೈರಿಂಗ್ ಆಗಿದ್ದು ತನಿಖೆ ನಡೆಯುತ್ತಿದೆ. ಯಾರೇ ತಪ್ಪು ಮಾಡಿದರೂ ಕ್ರಮ ನಡೆಯಲಿ. ಬಿಜೆಪಿಯವರು ಮಾಡಿದ್ದು ತಪ್ಪು ಎಂದು ಸಿಟ್ಟು ಹೊರಹಾಕಿದರು.



