ಮೈಸೂರು : ಕೌಟುಂಬಿಕ ಕಲಹದಿಂದ ಬೇಸತ್ತು ಎಂ.ವಿ.ನಿಸರ್ಗ(೨೩) ಎಂಬ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಜೆಎಸ್ಎಸ್ ಆಸ್ಪತ್ರೆ ಮುಂಭಾಗದ ಬಡಾವಣೆಯೊಂದರಲ್ಲಿ ನಡೆದಿದೆ. ಮೂಲತಃ ಮಂಡ್ಯ ನಗರದ ಗುತ್ತಲು ಬಡಾವಣೆಯ ನಿಸರ್ಗ ಮೈಸೂರಿನಲ್ಲಿ ಎಂಕಾಂ ಪದವಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಇಲ್ಲಿನ ಚಿರು ಅಲಿಯಾಸ್ ಮಂಜು ಎಂಬ ಯುವಕನನ್ನು ಒಂದೂವರೆ ವರ್ಷದ ಹಿಂದೆ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರು. ಇವರಿಗೆ ೮ ತಿಂಗಳು ಒಂದು ಹೆಣ್ಣು ಮಗು ಸಹ ಇದೆ.
ಮದುವೆಯಾದ ನಂತರ ಪ್ರತಿದಿನ ಮನೆಯಲ್ಲಿ ಗಂಡ ಹೆಂಡತಿಯ ನಡುವೆ ಜಗಳ ನಡೆಯುತ್ತಿತ್ತು. ತಾನು ಮನೆಯವರ ಒಪ್ಪಿಗೆ ಇಲ್ಲದೆ ವಿವಾಹವಾಗಿದ್ದ ಕಾರಣ ನಿಸರ್ಗ ತನ್ನ ನೋವನ್ನು ಯಾರೊಂದಿಗೂ ಹೇಳಿಕೊಳ್ಳದೆ ಕಷ್ಟ ಅನುಭವಿಸುತ್ತಾ ಕೊನೆಗೆ ಕಿರುಕುಳ ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ನಿಸರ್ಗ ಪೋಷಕರು ತಿಳಿಸಿದರು. ಕೆಆರ್ ಠಾಣೆ ಪೊಲೀಸರು ನಿಸರ್ಗ ಪತಿ ಚಿರು ಅಲಿಯಾಸ್ ಮಂಜು ಮತ್ತು ಆತನ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.