ಮೈಸೂರು: ರಾಜ್ಯ ಸರ್ಕಾರ ಕೆಆರ್ಎಸ್ ಜಲಾಶಯದ ಬಳಿ ನಿರ್ಮಿಸಲು ಉದ್ದೇಶಿಸಿರುವ ಅಮ್ಯೂಸ್ಮೆಂಟ್ ಪಾರ್ಕ್ ಹಾಗೂ ಕಾವೇರಿ ಆರತಿ ಯೋಜನೆಗೆ ಕರ್ನಾಟಕ ರಾಜ್ಯ ರೈತಸಂಘ (ರೈತಬಣ) ಷರತ್ತುಬದ್ಧ ಬೆಂಬಲ ವ್ಯಕ್ತಪಡಿಸಿದೆ. ಸಂಘಟನೆಯ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಪತ್ರಿಕಾ ಹೇಳಿಕೆಯಲ್ಲಿ, “ಕಾವೇರಿ ತಾಯಿಯ ಆರತಿ ಪುಣ್ಯ ಕಾರ್ಯವಾಗಿದೆ. ಇದರಲ್ಲಿ ಮೌಢ್ಯವಿಲ್ಲ. ಪ್ರವಾಸೋದ್ಯಮ ವೃದ್ಧಿಯಾಗಲಿದ್ದು, ಸ್ಥಳೀಯ ರೈತರು, ವ್ಯಾಪಾರಿಗಳು, ಕೂಲಿಕಾರ್ಮಿಕರು ಆರ್ಥಿಕವಾಗಿ ಲಾಭಪಡೆಯುತ್ತಾರೆ” ಎಂದರು.
ಈ ಯೋಜನೆಗಳು ಮೈಸೂರು, ಮಂಡ್ಯ ಭಾಗದ ಜನಸಾಮಾನ್ಯರ ಆರ್ಥಿಕ ಪುನಶ್ಚೇತನಕ್ಕೆ ಕಾರಣವಾಗುತ್ತವೆ. “ಕಾವೇರಿಯ ನೀರಿನಿಂದ ರೈತರು ಕೃಷಿ ಮಾಡುತ್ತಿದ್ದಾರೆ, ಇಡೀ ದೇಶದ ಜನರು ಕುಡಿಯುವ ನೀರಾಗಿ ಉಪಯೋಗಿಸುತ್ತಿದ್ದಾರೆ. ಕಾವೇರಿಗೆ ಪ್ರತಿಯೊಬ್ಬನಿಗೂ ಭಕ್ತಿ ಇರಬೇಕು,” ಎಂದಿದ್ದಾರೆ.
ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣದ ಮೊದಲು ಜಲಾಶಯದ ಭದ್ರತೆ ಕುರಿತು ತಜ್ಞರ ಅಭಿಪ್ರಾಯ ಪಡೆದು ನಂತರ ಕಾಮಗಾರಿ ಆರಂಭಿಸಬೇಕು. ಅಲ್ಲದೆ, ಪಾರ್ಕಿನಲ್ಲಿ ಸೃಜಿಸಬಹುದಾದ ಎಲ್ಲ ಉದ್ಯೋಗಗಳು ಮಂಡ್ಯ, ಮೈಸೂರು ಹಾಗೂ ಕೊಡಗು ಜಿಲ್ಲೆಗಳ ನಿರುದ್ಯೋಗಿ ಯುವಕ-ಯುವತಿಯರಿಗೆ ನೀಡಬೇಕು ಎಂಬುದಾಗಿ ಕೃಷ್ಣೇಗೌಡ ಒತ್ತಾಯಿಸಿದರು.
ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆಯಿಂದ ಪ್ರವಾಸೋದ್ಯಮ ಪುಷ್ಟಿಯಾಗುವ ಮೂಲಕ ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದ್ದು, ಈ ಭಾಗದ ರೈತಾಪಿ ಕುಟುಂಬಗಳಿಗೆ ಹೊಸ ಆರ್ಥಿಕ ಆಶಾಕಿರಣ ನೀಡಲಿದೆ ಎಂದು ಹೇಳಿದ್ದಾರೆ.