ಹೆಚ್. ಡಿ. ಕೋಟೆ : ಕರ್ನಾಟಕ ರಾಜ್ಯದಲ್ಲೇ ಮೊದಲ ಬಾರಿಗೆ ಹವಾಮಾನ ಬದಲಾವಣೆಯಿಂದಾಗುತ್ತಿರುವ ದುಷ್ಪರಿಣಾಮಗಳನ್ನು ತಡೆಗಟ್ಟಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಯುವಕರು, ಮಹಿಳೆಯರು ಮತ್ತು ರೈತರ ನಡುವೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಹವಾಮಾನ ಕ್ರಿಯಾ ಆಂದೋಲನವನ್ನು ಸಂಘಟಿಸಲು , ತಾಲೂಕು ಮಟ್ಟದ ಸಮಿತಿಯನ್ನು ಹೆಚ್. ಡಿ. ಕೋಟೆ ತಾಲೂಕಿನಲ್ಲಿ ರಚಿಸಲಾಗಿದೆ.
ಹವಾಮಾನ ಕ್ರಿಯಾ ಅಭಿಯಾನ – ಕರ್ನಾಟಕ ದ ಭಾಗವಾಗಿ ಪೀಪಲ್ ಟ್ರೀ ಸಂಸ್ಥೆಯು ಆಯೋಜಿಸಿದ ಹವಾಮಾನ ಬದಲಾವಣೆ ಪರಿಣಾಮಗಳನ್ನು ತಡೆಗಟ್ಟುವಲ್ಲಿ ಸಮುದಾಯ ಕಾರ್ಯಕರ್ತರ ಪಾತ್ರ ಕುರಿತಾದ ತಾಲೂಕು ಮಟ್ಟದ ಕಾರ್ಯಾಗಾರದಲ್ಲಿ 30 ಜನರ ತಾಲೂಕು ಮಟ್ಟದ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ತಾಲೂಕು ಘಟಕದ ಅಧ್ಯಕ್ಷರಾಗಿ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಪತ್ರಕರ್ತರು ಹಾಗೂ ಅಣ್ಣೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಡತೊರೆ ಮಹೇಶ್, ಪ್ರಧಾನ ಕಾರ್ಯದರ್ಶಿಯಾಗಿ ಅಂತರಸಂತೆ ಗ್ರಾಮ ಪಂಚಾಯಿತಿ ಸದಸ್ಯೆ ರೇಖಾ ಗುರು ಸ್ವಾಮಿ, ಖಜಾಂಚಿಯಾಗಿ ಹೊಸಹೊಳಲು ಗ್ರಾಮ ಪಂಚಾಯಿತಿ ಸದಸ್ಯ ಟಿ.ಎನ್. ಮಂಜು, ಉಪಾಧ್ಯಕ್ಷರಾಗಿ ಮರಿಲಿಂಗಯ್ಯ, ಸಣ್ಣ ಸ್ವಾಮಿ ನಾಯಕ, ಗುರುಸ್ವಾಮಿ ಜಯಲಕ್ಷ್ಮಿ ಗೀತಾ, ಸಂಘಟನಾ ಕಾರ್ಯದರ್ಶಿಗಳಾಗಿ ರಮೇಶ್, ಕುಮಾರಿ , ಶ್ರೀನಿವಾಸ ,ಜಯ , ವೆಂಕಟೇಶ, ಸಮುದಾಯ ಸಂಘಟಕರಾಗಿ ಜಯಲಕ್ಷ್ಮಿ, ಸಂಜೀವ್ ಶೆಟ್ಟಿ ಸೇರಿದಂತೆ 30 ಜನರ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.

ಸಮಿತಿಯ ಮೂಲಕ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಹಳ್ಳಿಗಳಲ್ಲಿ ಹವಾಮಾನ ಕ್ರಿಯಾ ಸಮಿತಿಗಳನ್ನು ರಚಿಸಿ ಅರಣ್ಯ ಸಂರಕ್ಷಣೆ, ನೀರು, ಕೃಷಿ ಹಾಗೂ ಜೀವ ವಿವಿಧಗಳ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳುವ ಅಭಿಯಾನವನ್ನು ಆರಂಭಿಸಲು ನಿರ್ಣಯಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಹಾಗೂ ತರಬೇತಿಗಾರ ರಾಜ ಹುಣಸೂರು, ಪೀಪಲ್ ಟ್ರೀ ಸಂಸ್ಥೆಯ ಲತಾ ಮೇಡಂ, ಜವರೇಗೌಡ, ಸುರೇಶ್, ಬಸಪ್ಪ, ಚನ್ನಕೇಶವ , ರುದ್ರಪ್ಪ ಸೇರಿದಂತೆ ಸಮುದಾಯದ ಪ್ರತಿನಿಧಿಗಳು ಭಾಗವಹಿಸಿದ್ದರು.



                                    