ಬೆಂಗಳೂರು: ನಗರದ ಪಂಚತಾರಾ ಹೋಟೆಲ್ವೊಂದರಲ್ಲಿ ಉಳಿದುಕೊಂಡು ಬಿಲ್ ಪೇ ಮಾಡಲು ನಕಲಿ ಪೇಮೆಂಟ್ ಸ್ಕ್ರೀನ್ ಶಾಟ್ ತೋರಿಸಿ ವಂಚಿಸಲು ಯತ್ನಿಸಿದ ಆರೋಪಿಯನ್ನು ಇಲ್ಲಿನ ಹೈಗ್ರೌಂಡ್ಸ್ ಠಾಣಾ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ನಗರದ ಗಾಲ್ಫ್ ರಸ್ತೆಯಲ್ಲಿರುವ ಪಂಚತಾರಾ ಹೋಟೆಲ್ನ ಮ್ಯಾನೇಜರ್ ಶಮೀರ್ ದೇಸಾಯಿ ಎಂಬವರು ನೀಡಿದ ದೂರಿನ ಮೇರೆಗೆ ಕೋಲ್ಕತ್ತಾ ಮೂಲದ ಬೊರಡ ಸುನೀಲ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮಾ.೩೧ರಂದು ಆನ್ಲೈನ್ ಮೂಲಕ ಹೋಟೆಲ್ ರೂಮ್ ಬುಕ್ ಮಾಡಿದ್ದ. ಅಲ್ಲದೇ, ವಿಮಾನ ನಿಲ್ದಾಣದಿಂದ ಕರೆತರಲು ಬಿಎಂಡಬ್ಲ್ಯೂ ಕಾರು ಬೇಕು ಎಂದು ಸೂಚಿಸಿದ್ದ. ಈತನ ಮನವಿ ಮೇರೆಗೆ ವಿಮಾನ ನಿಲ್ದಾಣದಿಂದ ಹೋಟೆಲ್ನವರು ಕರೆತಂದಿದ್ದರು. ರೂಮಿನಲ್ಲಿ ಉಳಿದುಕೊಂಡ ಆರೋಪಿ ೧೭,೩೪೬ ರೂ. ಪಾವತಿಸಿರುವುದಾಗಿ ಹೋಟೆಲ್ ಸಿಬ್ಬಂದಿಗೆ ಪೇಮೆಂಟ್ ಮಾಡಿದ ನಕಲಿ ಸ್ಕ್ರೀನ್ ಶಾಟ್ ತೋರಿಸಿದ್ದಾನೆ. ಆದರೆ, ಹಣ ಸಂದಾಯ ಆಗದಿರುವ ಬಗ್ಗೆ ಸಿಬ್ಬಂದಿ ಪ್ರಶ್ನಿಸಿದಾಗ ತನ್ನ ಕಡೆಯಿಂದ ಹಣ ಪಾವತಿಯಾಗಿದೆ. ನಿಮ್ಮ ಕಡೆಯಿಂದ ಟೆಕ್ನಿಕಲ್ ಸಮಸ್ಯೆ ಇರಬಹುದು ಎಂದು ತಿಳಿಸಿದ್ದನಂತೆ.
ತಾಂತ್ರಿಕವಾಗಿ ತೊಂದರೆಯಾಗಿರಬಹುದು ಎಂದು ಭಾವಿಸಿದ ಸಿಬ್ಬಂದಿ ಸುಧೀರ್ ಗೆ ರೂಮಿಗೆ ಹೋಗಲು ಅನುವು ಮಾಡಿದ್ದರು. ಮರು ದಿನ ಸ್ಥಳೀಯವಾಗಿ ಓಡಾಡಲು ಬಿಎಂಡಬ್ಲ್ಯೂ ಕಾರು ಬೇಕು ಎಂದೂ ಕೂಡಾ ಸೂಚಿಸಿದ ಮೇರೆಗೆ ಹೋಟೆಲ್ನವರು ವ್ಯವಸ್ಥೆ ಮಾಡಿದ್ದರು. ಎ.೧ರಂದು ಓಡಾಡಿದ ಬಳಿಕ ಸಂಜೆ ನೇರವಾಗಿ ವಿಮಾನ ನಿಲ್ದಾಣಕ್ಕೆ ಡ್ರಾಪ್ ಮಾಡುವಂತೆ ಕಾರು ಚಾಲಕನಿಗೆ ಸೂಚಿಸಿದ್ದ. ಆದರೆ, ಹೋಟೆಲ್ನಿಂದ ತನಗೆ ಅನುಮತಿ ನೀಡಿಲ್ಲ ಎಂದು ನಿರಾಕರಿಸಿದ ಚಾಲಕ ಆರೋಪಿಯನ್ನು ಮರಳಿ ಹೋಟೆಲ್ ಬಳಿ ಕರೆತಂದಿದ್ದ. ಬಳಿಕ ಕಾರು ಹಾಗೂ ರೂಮ್ ಬಾಡಿಗೆ ಸೇರಿ ೮೦ ಸಾವಿರ ರೂ. ಪಾವತಿಸುವಂತೆ ಹೊಟೇಲ್ ಸಿಬ್ಬಂದಿ ಸೂಚಿಸಿದ್ದರು.
ಆರೋಪಿಗೆ ಬರುತ್ತಿದ್ದ ಕರೆಗಳ ಬಗ್ಗೆ ಪರಿಶೀಲಿಸಿದಾಗ ಸಿಕ್ಕಿಂ ಸ್ಪಾದಲ್ಲಿ ಉಳಿದುಕೊಳ್ಳಲು ನಕಲಿ ಐಡಿ ಕ್ರಿಯೇಟ್ ಮಾಡಿ ಹಣ ಕಟ್ಟದೇ ವಂಚಿಸಿರುವುದು ಗೊತ್ತಾಗಿದೆ. ಅಲ್ಲದೇ, ಸೇನಾ ಅಧಿಕಾರಿ ಹೆಸರಿನಲ್ಲಿಯೂ ವಂಚಿರುವ ಬಗ್ಗೆ ಕೋಲ್ಕತ್ತಾದ ಪ್ರಗತಿ ಮೈದಾನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿರುವುದಾಗಿ ತಿಳಿದುಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿದ್ದು, ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.