ಪ್ರಧಾನಿ ಮೋದಿ ಅವರು ವಿದೇಶಗಳಿಗೆ ಹೋದಾಗ ಮಹಾತ್ಮ ಗಾಂಧಿ ಅವರನ್ನು ಕೊಂಡಾಡುತ್ತಾರೆ. ಆದರೆ ತಮ್ಮದೇ ದೇಶದಲ್ಲಿ ಗಾಂಧಿ ಹೆಸರಿಗೆ ಅಪಚಾರ ಮಾಡುತ್ತಾರೆ. ಇದು ಹಿಪೊಕ್ರೆಸಿಯ ಒಂದು ಭಾಗ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಶುಕ್ರವಾರ ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಬಳಿಕ ಅವರು ಮಾತನಾಡುತ್ತಿದ್ದರು.
ಗಾಂಧೀಜಿಯವರು ಅಹಿಂಸಾ ಮಾರ್ಗದ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಪ್ರಪಂಚದಾದ್ಯಂತ ಬಾಪು ಅವರ ಜೀವನ ಮಾದರಿಯಾಗಿದೆ. ವಿವಿಧ ದೇಶಗಳು ಮಹಾತ್ಮ ಗಾಂಧಿಯವರ ಸ್ಮರಣಾರ್ಥವಾಗಿ ಪ್ರತಿಮೆಗಳನ್ನು ನಿರ್ಮಿಸಿ ಅವರನ್ನು ಶಾಂತಿ, ಮಾನವೀಯತೆ ಮತ್ತು ಅಹಿಂಸೆಯ ಸಂಕೇತವೆಂದು ಗೌರವಿಸುತ್ತಿವೆ. ಆದರೆ ಇಲ್ಲಿ ಮೋದೀಜಿಯವರ ಶಿಷ್ಯರು ಗಾಂಧಿ ಪ್ರತಿಮೆಗೆ ಬೆಂಕಿ, ಗುಂಡು ಹಾರಿಸಿ ಅವಮಾನಿಸುತ್ತಿರುವುದು ಖಂಡನೀಯ ಎಂದರು.
ಕೇಂದ್ರ ಬಿಜೆಪಿ ಸರಕಾರದ ಹೊಸ ಕಾಯ್ದೆಯು ಮನರೇಗಾ ಯೋಜನೆಯಲ್ಲಿದ್ದ ಗಾಂಧೀಜಿಯವರ ಪ್ರಧಾನ ಆಶಯವಾದ ಗ್ರಾಮ ಸ್ವರಾಜ್ಯದ ಕಲ್ಪನೆಯನ್ನು ದುರ್ಬಲಗೊಳಿಸಿದೆ. ಬಿಜೆಪಿ ನಿತ್ಯವೂ ಗಾಂಧಿ ಚಿಂತನೆಗಳನ್ನು ಕೊಲ್ಲುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್.ಪೂಜಾರಿ, ಮೂಡಾ ಅಧ್ಯಕ್ಷರಾದ ಸದಾಶಿವ್ ಉಳ್ಳಾಲ, ಎಸ್.ಅಪ್ಪಿ, ದಿನೇಶ್ ಮುಳೂರು ಮಾತನಾಡಿದರು. ಮಾಜಿ ಮೇಯರ್ ಕೆ.ಹರಿನಾಥ್, ಡಿಸಿಸಿ ಉಪಾಧ್ಯಕ್ಷರಾದ ಶುಭೋದಯ ಆಳ್ವ, ನೀರಜ್ ಚಂದ್ರಪಾಲ್, ಪ್ರಧಾನ ಕಾರ್ಯದರ್ಶಿಗಳಾದ ಟಿ.ಕೆ.ಸುಧೀರ್, ಶಬ್ಬೀರ್ ಸಿದ್ದಕಟ್ಟೆ, ಹುಸೈನ್, ಯೋಗೀಶ್ ಕುಮಾರ್, ಸಾರಿಕ ಪೂಜಾರಿ, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರಾದ ಇಬ್ರಾಹೀಂ ನವಾಝ್, ಜೋಕಿಂ ಡಿಸೋಜಾ, ಅಬ್ಬಾಸ್ ಅಲಿ, ಶೈಲಜಾ ಬಂಟ್ವಾಳ, ಸ್ಟ್ಯಾನಿ ತಾವ್ರೊ, ಸುಹಾನ್ ಆಳ್ವ, ಮುಖಂಡರಾದ ಸೌಹಾನ್ ಎಸ್ ಕೆ, ಸಿತಾರಾಮ ಶೆಟ್ಟಿ, ಬಿ.ಎಸ್.ಇಸ್ಮಾಯೀಲ್ ತಲಪಾಡಿ, ಲಕ್ಷ್ಮೀ ನಾಯರ್, ಸತೀಶ್ ಪೆಂಗಲ್, ಬಶೀರ್, ಜಾರ್ಜ್, ಸಬಿತಾ ಮಿಸ್ಕಿತ್, ಶಾಂತಲಾ ಗಟ್ಟಿ, ಅವಿತಾ, ಕ್ಲೆಟಾ, ಆಲ್ವಿನ್ ಪ್ರಕಾಶ್, ಕೃಷ್ಣ ಶೆಟ್ಟಿ, ಮೋಹನ್ ದಾಸ್ ಕೊಟ್ಟಾರಿ, ಟಿ.ಸಿ.ಗಣೇಶ್, ಸಮರ್ಥ್ ಭಟ್, ಫಯಾಝ್ ಅಮ್ಮೆಮ್ಮಾರ್, ಸನೋಬರ್ ಫಾತಿಮಾ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಶಂಶೀರ್ ಬುಡೋಳಿ



