ಬೆಂಗಳೂರು : ಕೇಂದ್ರ ಸರ್ಕಾರ ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆಯ ಸ್ಥಾನಮಾನ ಕೊಟ್ಟಿದೆ. ಬಿಜೆಪಿ ತುಂಬು ಹೃದಯದಿಂದ ಅದನ್ನು ಸ್ವಾಗತಿಸುತ್ತದೆ ಎಂದು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆಯ ಸ್ಥಾನಮಾನ ಕೊಟ್ಟಿದ್ದು, ಬಿಜೆಪಿ ತುಂಬು ಹೃದಯದಿಂದ ಅದನ್ನು ಸ್ವಾಗತಿಸುತ್ತದೆ. ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿಸಿದ್ದ ಗೀತೆ, ಬಂಗಾಳದ ಹೋರಾಟದ ರಣಗೀತೆಯಾಗಿತ್ತು ಎಂದು ಹೇಳಿದರು.
ವಂದೇ ಮಾತರಂ ಗೀತೆ ರಚನೆ ಮಾಡಿದ್ದು ಬಂಕಿಮ್ ಚಂದ್ರ ಚಟರ್ಜಿ ಅವರು. 1896ರಲ್ಲಿ ಮಹಾನ್ ಸಾಹಿತಿ ರವೀಂದ್ರನಾಥ ಠಾಗೂರ್ ಗೀತೆ ಹಾಡಿದರು. ಕ್ರಾಂತಿ ಗೀತೆಯಾಗಿತ್ತು ವಂದೇ ಮಾತರಂ. ದೇಶದ ಐಕ್ಯತೆ, ಸ್ವಾತಂತ್ರ್ಯ ತಂದು ಕೊಟ್ಟಿದ್ದು, ಯುವಕರಲ್ಲಿ ಸ್ಪೂರ್ತಿ ನಿಡೀದ್ದು ವಂದೇ ಮಾತರಂ. ಹಾಗಾಗಿ ಕೇಂದ್ರ ಸರ್ಕಾರ ರಾಷ್ಟ್ರ ಗೀತೆಗೆ ಸರಿಸಮಾನವಾಗಿ ಗೌರವ ಕೊಡಬೇಕೆಂದು ಈ ಆದೇಶ ಮಾಡಿದೆ ಎಂದರು.
ಬಳಿಕ ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಚಿನ್ನ ಮತ್ತು ಹಣ ಕಳವು ವಿಚಾರದ ಕುರಿತು ಮಾತನಾಡಿದ ಅವರು, ವಿಧಾನಸೌಧದಲ್ಲಿ 300 ಗ್ರಾಂ ಚಿನ್ನ ಸಿಕ್ಕಿದೆ. ಇಷ್ಟು ದೊಡ್ಡ ಪ್ರಮಾಣದ ಚಿನ್ನ ಹೇಗೆ ಸಿಕಿತು? ಯಾರಿಗೆ ಕೊಡಲು ಬಂದಿದ್ದರು? ಹಣವನ್ನು ಕೊಡುವ ಬದಲು, ಚಿನ್ನ ಕೊಡಲು ಬಂದಿದ್ದರಾ? ಎಂದು ಪ್ರಶ್ನಿಸಿದರು.
ಹಣದ ಬದಲು ಚಿನ್ನದ ಮೂಲಕ ಲಂಚ ಪಡೆಯುವಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಬೈರತಿ ಸುರೇಶ್ ಇರಲಿ, ಯಾರೇ ಇರಲಿ ತನಿಖೆ ಆಗಬೇಕು. ಇದರಲ್ಲಿ ಸಿಲುಕಿದ ಸಚಿವರು ರಾಜೀನಾಮೆ ಕೊಡಬೇಕು. ಇದು ಭ್ರಷ್ಟಾಚಾರದ ಮತ್ತೊಂದು ಮುಖವಾಗಿದೆ. ಕರ್ನಾಟಕ ಸರ್ಕಾರ ಭ್ರಷ್ಟಾಚಾರದಲ್ಲಿ ಸಿಲುಕಿರುವ ಮತ್ತೊಂದು ಉದಾಹರಣೆ ಎಂದರು. ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸಕ್ಕೆ ಪ್ರತಿಕ್ರಿಯಿಸಿ, ಸಿಎಂ ಕಡೆಯವರು ಯಾರ ಜೊತೆ ಯಾವ ದೇಶಕ್ಕೆ, ಡಿಕೆಶಿ ಕಡೆಯವರು ಯಾವ ಕಡೆ ಪ್ರವಾಸ ಹೋಗುತ್ತಿದ್ದಾರೆ ಗೊತ್ತಿಲ್ಲ ಎಂದು ಹೇಳಿದರು.
ಬಜೆಟ್ ಅಧಿವೇಶನ ಮೊದಲು ಮತ್ತು ನಂತರ ಏನಾದರೂ ಆಗಬಹುದು. ರಾಜ್ಯದಲ್ಲಿ ಖಜಾನೆ ಖಾಲಿಯಾಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕರ್ನಾಟಕ ರಾಜ್ಯಕ್ಕೆ ಇದೇನು ಮರ್ಯಾದೆ ತಂದು ಕೊಡುತ್ತಿಲ್ಲ ಇನ್ನೂ ಮಧ್ಯದ ಲೈಸೆನ್ಸ್ ಶಾಸಕರಿಗೆ ಕೊಡುವುದನ್ನು ಮಾಡುತ್ತಿದ್ದಾರೆ. ಸಿಎಲ್-7 ಲೈಸೆನ್ಸ್ ಶಾಸಕರಿಗೆ ಕೊಡುವುದು, ವಿದೇಶಿ ಪ್ರವಾಸ ಕರೆದುಕೊಂಡು ಹೋಗುವುದು ನಡೆಯುತ್ತಿದೆ. ಇದೆಲ್ಲಾ ಅಧ:ಪತನದತ್ತ ಕರೆದುಕೊಂಡು ಹೋಗುತ್ತಿದೆ. ಇದರಿಂದ ಜನ ಬೇಸತ್ತು ಹೋಗಿದ್ದಾರೆ. ಜನ ಬೆಲೆ ಏರಿಕೆಯಿಂದ ರೋಸಿಹೋಗಿದ್ದಾರೆ ಎಂದು ಕಿಡಿಕಾರಿದರು.



