ಬೆಂಗಳೂರು: ಚಿನ್ನಾಭರಣ ಮತ್ತು ಹಣ ವಂಚನೆ ಆರೋಪದಲ್ಲಿ ಐಶ್ವರ್ಯಾ ಗೌಡ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ನಿರ್ಧಿಷ್ಟ ಕ್ರಮ ಕೈಗೊಂಡಿದೆ. ಐಶ್ವರ್ಯಾ ಅವರಿಗೆ ಸಂಬಂಧಿಸಿದಂತೆ 3.98 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಇಡಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಇದರಲ್ಲಿ ಸುಮಾರು 2.01 ಕೋಟಿ ರೂ. ಮೌಲ್ಯದ ಭೂಸ್ತಿರಾಸ್ತಿ ಮತ್ತು 1.97 ಕೋಟಿ ರೂ. ಮೌಲ್ಯದ ಚರಾಸ್ತಿಗಳು ಸೇರಿವೆ.
ಈ ಹಿಂದೆ ಏಪ್ರಿಲ್ 24ರಂದು, ಐಶ್ವರ್ಯಾ ಗೌಡ ಮತ್ತು ಅವರ ಪತಿ ಹರೀಶ್ ಅವರ ನಿವಾಸ ಮತ್ತು ಗೊರಗುಂಟೆಪಾಳ್ಯದಲ್ಲಿರುವ ಫ್ಲಾಟ್ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ತನಿಖೆಯಲ್ಲಿ, ಹೆಚ್ಚಿನ ಲಾಭ ನೀಡುವ ಹೆಸರು ಹೇಳಿ ಹಣ ಪಡೆದು ವಂಚನೆಯ ಆರೋಪ ಇಡಿಗೆ ಬಂದಿತ್ತು. ಆರೋಪಿಗಳು, ಹಣ ಪಡೆದ ಬಳಿಕ ಮರುಪಾವತಿ ಮಾಡದೇ, ಅದರ ಬದಲು ರಾಜಕೀಯ ಬೆಂಬಲವಿದೆ ಎಂದು ಬೆದರಿಕೆ ಹಾಕಿದ್ದದ್ದೂ ತಿಳಿದುಬಂದಿದೆ.
ಇಡಿಗೆ ಸಿಕ್ಕ ದಾಖಲೆಗಳಲ್ಲಿ ಅಕ್ರಮ ಹಣ ವರ್ಗಾವಣೆಯ ಪುರಾವೆಗಳೂ ಸೇರಿದ್ದು, ಈ ಹಿನ್ನೆಲೆಯಲ್ಲಿ ಆಸ್ತಿ ಮುಟ್ಟುಗೋಲು ಕ್ರಮ ಕೈಗೊಳ್ಳಲಾಗಿದೆ. ಆದ್ರೂ, ಬೆಂಗಳೂರು ಸೆಷನ್ಸ್ ನ್ಯಾಯಾಲಯ ಐಶ್ವರ್ಯಾ ಗೌಡ ಅವರಿಗೆ ಐದು ಲಕ್ಷ ಶ್ಯೂರಿಟಿ ಬಾಂಡ್ ಮೇಲೆ ಷರತ್ತುಬದ್ಧ ಜಾಮೀನು ನೀಡಿದೆ.