ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲಿನಲ್ಲಿರುವ ಚಿತ್ರನಟಿ ರನ್ಯಾ ರಾವ್ ಅವರಿಗೆ ಸಂಕಷ್ಟ ತಪ್ಪಿದ್ದಲ್ಲ. ಇದೀಗ ಆದಾಯ ತೆರಿಗೆ ಇಲಾಖೆ ಅವರ ಬೆನ್ನ ಹಿಂದೆ ಬಿದ್ದಿದೆ. ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆದಿರುವ ಆದಾಯ ತೆರಿಗೆ ಇಲಾಖೆ ಜೈಲಿನಲ್ಲೇ ರನ್ಯಾ ರಾವ್ ಅವರ ವಿಚಾರಣೆ ನಡೆಸಲು ಮುಂದಾಗಿದೆ.
ಜೂನ್ 11 ರಿಂದ 13 ರವರೆಗೆ ಬೆಳಗ್ಗೆ 10ರಿಂದ 5 ಗಂಟೆಯವರೆಗೆ ಪ್ರಶ್ನಿಸಲು ಅನುಮತಿ ನೀಡಲಾಗಿದೆ. ಐಟಿ ಇಲಾಖೆಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ರನ್ಯಾ ರಾವ್ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ಐಟಿ ಇಲಾಖೆ ಸಹಾಯಕ ನಿರ್ದೇಶಕರು ಕಳೆದ ವಾರ ಚಿನ್ನ ಕಳ್ಳ ಸಾಗಣೆಯಲ್ಲಿ ಗಳಿಸಿದ ಆದಾಯ ಕುರಿತು ರನ್ಯಾ ರಾವ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. 33 ವರ್ಷದ ರನ್ಯಾ ರಾವ್ ಅವರನ್ನು ಮಾರ್ಚ್ 3 ರಂದು 12.56 ಕೋಟಿ ರೂ. ಮೌಲ್ಯದ 14.2 ಚಿನ್ನವನ್ನು ಕಳ್ಳಸಾಗಣೆ ಮಾಡುವಾಗ ಬಂಧಿಸಲಾಗಿತ್ತು. ಈ ಕೃತ್ಯಕ್ಕೆ ವಿರಣೆ ನೀಡಲಾಗದ ಮೂಲಗಳ ನಗದನ್ನು ಬಳಸಲಾಗಿದ್ದು, ಮೂರು ದಿನಗಳ ಕಾಲ ಆಕೆಯ ವಿಚಾರಣೆ ಮಾಡಲು ನಿರ್ಧರಿಸಲಾಗಿದೆ.
ಕಸ್ಟಮ್ಸ್ ಕಾಯಿದೆ ಮತ್ತು ಆದಾಯ ತೆರಿಗೆ ಕಾಯಿದೆ ಎರಡೂ ಬೇರೆ ಬೇರೆಯಾಗಿದ್ದು, ಐಟಿ ಕಾಯಿದೆ ಅಡಿಯಲ್ಲಿ ಹೇಳಿಕೆ ನೀಡಲು ಅಸಾಧ್ಯ. ಅಲ್ಲದೆ ಸಂವಿಧಾನದ 22 ನೇ ಕಾಯಿದೆಗೂ ವಿರುದ್ಧವಾಗಿದೆ ಎಂದು ರನ್ಯಾ ಪರ ವಕೀಲ ಬಿಎಸ್ ಗಿರೀಶ್ ವಾದಿಸಿದ್ದರು. ಐಟಿ ಇಲಾಖೆಯ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್, ದುಬೈನಿಂದ ಚಿನ್ನವನ್ನು ಕಳ್ಳ ಸಾಗಣೆ ಮಾಡಿಕೊಂಡು ಬಂದು ಭಾರಿ ಮೊತ್ತದ ನಗದು ಚಲಾವಣೆಯಾಗಿದೆ. ಆದ್ದರಿಂದ ಅವರನ್ನು ವಿಚಾರಣೆ ನಡೆಸಬೇಕಾಗಿದೆ ಎಂದು ವಾದಿಸಿದ್ದರು.