ಮೈಸೂರು : ಮನುಷ್ಯರು ಮತ್ತು ಪ್ರಾಣಿಗಳ ಮೇಲೆ ವ್ಯಾಘ್ರನ ಅಟ್ಟಹಾಸಕ್ಕೆ ಮೈಸೂರು ಭಾಗದ ಕಾಡಂಚಿನ ಗ್ರಾಮಗಳಲ್ಲಿ ಜನರು ಬೆಚ್ಚಿ ಬಿದ್ದಿದ್ದರು. ಈ ಹಿನ್ನಲೆ ಮನೆಯಿಂದ ಹೊರ ಬರಲು ಭಯಪಡಬೇಕಾದ ಸ್ಥಿತಿ ಎದುರಾಗಿತ್ತು. ಮಾನವ-ಕಾಡು ಪ್ರಾಣಿ ಸಂಘರ್ಷ ಹೆಚ್ಚಿದ ಬೆನ್ನಲ್ಲೇ ಎಚ್ಚೆತ್ತ ಅರಣ್ಯ ಇಲಾಖೆ ಕೇವಲ 40 ದಿನಗಳ ಅವಧಿಯಲ್ಲಿ 22 ಹುಲಿಗಳನ್ನು ಸೆರೆ ಹಿಡಿದಿದ್ದು, ಆ ಮೂಲಕ ಗ್ರಾಮಗಳಲ್ಲಿನ ನಿವಾಸಿಗಳು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.
ಸದ್ಯ ಅರಣ್ಯ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ 22 ಹುಲಿಗಳನ್ನು ಸೆರೆ ಹಿಡಿದಿದ್ದು, ಆ ಪೈಕಿ ಮರಿ ಹುಲಿಗಳೇ ಹೆಚ್ಚಿವೆ. ಎಲ್ಲವೂ ಆರೋಗ್ಯವಾಗಿದ್ದು, ಇವುಗಳನ್ನು ಮೈಸೂರಿನ ಕೂರ್ಗಳ್ಳಿಯಲ್ಲಿರುವ ಪ್ರಾಣಿಗಳ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದೆ. ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಇವುಗಳನ್ನು ಕಾಡಿನಲ್ಲಿ ಸುರಕ್ಷಿತ ಸ್ಥಳಕ್ಕೆ ಬಿಡಬೇಕಾ? ಅಥವಾ ಪುನರ್ವಸತಿ ಕೇಂದ್ರದಲ್ಲೇ ಆರೈಕೆ ಮಾಡಬೇಕಾ? ಎನ್ನುವ ನಿರ್ಧಾರವನ್ನು ಅಧಿಕಾರಿಗಳು ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಹುಲಿಗಳ ದಾಳಿ ಪ್ರಕರಣಗಳು ಹೆಚ್ಚಿದ್ದ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಹೊಸ ಯೋಜನೆ ರೂಪಿಸಿತ್ತು. ಆ ಯೋಜನೆಗನುಗುಣವಾಗಿ ಸುಂದರ್ಬನ್ಸ್ ಮಾದರಿಯಂತೆ ರೈತರು ಮತ್ತು ದನಗಾಹಿಗಳಿಗೆ ಮುಖವಾಡಗಳನ್ನು ವಿತರಿಸಿತ್ತು. ಹುಲಿಗಳು ಹಿಂಬದಿಯಿಂದ ದಾಳಿ ಮಾಡುವುದನ್ನು ತಡೆಯಲು ಈ ಮುಖವಾಡಗಳು ಸಹಾಯಕವಾಗಲಿವೆ ಎಂದಿದ್ದ ಇಲಾಖೆ, ಸುಮಾರು 10,000 ಮುಖವಾಡಗಳನ್ನು ವಿವಿಧ ಗ್ರಾಮಗಳಲ್ಲಿ ವಿತರಿಸಿತ್ತು. ಜೊತೆಗೆ ಕಾಡು ಪ್ರಾಣಿಗಳೊಂದಿಗೆ ಹೇಗೆ ವರ್ತಿಸಬೇಕು ಎಂಬ ಬಗ್ಗೆಯೂ ಜಾಗೃತಿ ಮೂಡಿಸುವ ಕೆಲಸ ಮಾಡಿತ್ತು. ಇದರ ನಡು ನಡುವೆಯೇ ಹುಲಿಗಳ ಸೆರೆಗೂ ಕಾರ್ಯಾಚರಣೆ ನಡೆದಿದ್ದು ಈವರೆಗೆ 22 ಹುಲಿಗಳನ್ನು ಇಲಾಖೆ ಯಶಸ್ವಿಯಾಗಿ ಸೆರೆ ಹಿಡಿದಿದೆ ಎಂದು ತಿಳಿದು ಬಂದಿದೆ.
ಇನ್ನೂ ಹುಲಿಗಳ ಸೆರೆಯಿಂದಾಗಿ ಕಾಡಂಚಿನ ಗ್ರಾಮಗಳ ಜನರು ಕೊಂಚ ನಿರಾಳರಾಗಿದ್ದು, ಮತ್ತೊಂದೆಡೆ ಹುಲಿ ಸಮಸ್ಯೆಯಿಂದ ಬಂದ್ ಮಾಡಲಾಗಿದ್ದ ಕಾಡಿನ ಸಫಾರಿಯನ್ನು ಮತ್ತೆ ಆರಂಭಿಸಬೇಕೆಂದು ಮೈಸೂರು ಜಿಲ್ಲಾ ಸಂಘ ಸಂಸ್ಥೆಗಳ ಒಕ್ಕೂಟ ಒತ್ತಾಯಿಸಿದೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ದಾಳಿ ಪ್ರಕರಣಗಳು ಗಣನೀಯವಾಗಿ ಹೆಚ್ಚಾದ ಬೆನ್ನಲ್ಲೇ, ಹುಲಿ ಸೆರೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ತುರ್ತು ಕ್ರಮಕ್ಕೆ ಮುಂದಾಗಿತ್ತು. ಸಿಬ್ಬಂದಿಯನ್ನು ಕೂಂಬಿಂಗ್ಗೆ ಬಳಸಿಕೊಳ್ಳುವ ಸಲುವಾಗಿ ಬಂಡೀಪುರ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸಫಾರಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿತ್ತು ಎನ್ನಲಾಗಿದೆ.



