ಬೆಂಗಳೂರು : ರಾಜ್ಯ ಸರ್ಕಾರ ವಾಹನ ಸವಾರರಿಗೆ ಶೇ.50ರಷ್ಟು ದಂಡ ಪಾವತಿಸಲು ಅವಕಾಶ ನೀಡಿದ ಬೆನ್ನಲ್ಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ ಒಂದೇ ವಾರದಲ್ಲಿ 5.98 ಕೋಟಿ ರೂ. ದಂಡ ಸಂಗ್ರಹವಾಗಿದೆ.
ಸಾರಿಗೆ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸರ್ಕಾರ ಅನುಮೋದಿಸಿ, ನ.21ರಿಂದ ಡಿ.12ರವರೆಗೂ ದಂಡದ ಕೇವಲ ಶೇ.50ರಷ್ಟನ್ನು ಪಾವತಿಸಲು ರಿಯಾಯಿತಿ ಆದೇ ಶ ಹೊರಡಿಸಿತ್ತು.
ಅದರಂತೆ ನ.21ರಿಂದ 27ರವರೆಗೆ ಕೇವಲ ಒಂದೇ ವಾರದ ಅವಧಿಯಲ್ಲಿ 5,98,28,800 ರೂ. ದಂಡ ಪಾವತಿಯಾಗಿದ್ದು, 2,25,511 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಇತ್ಯರ್ಥಗೊಂಡಿವೆ.
ಈಗಾಗಲೇ ಜನರಿಂದ ಉತ್ತಮ ಸ್ಪಂದನೆ ದೊರಕಿದ್ದು, ಡಿ.12ರವರೆಗೆ 50% ದಂಡ ಪಾವತಿಗೆ ಅವಕಾಶವಿದೆ. ಆನ್ಲೈನ್ ಪೇಮೆಂಟ್ಗಳಾದ ಕೆಎಸ್ಪಿ, ಬಿಟಿಪಿ, ಬೆಂಗಳೂರು ಒನ್, ಕರ್ನಾಟಕ ಒನ್, ಟ್ರಾಫಿಕ್ ಪೊಲೀಸರ ಬಳಿಯೂ ತಮ್ಮ ದಂಡದ ರಿಯಾಯಿತಿ ಮೊತ್ತವನ್ನು ಜನ ಪಾವತಿಸಬಹುದು.
ಡಿ.12ರ ಬಳಿಕ ಪೂರ್ಣ ಪ್ರಮಾಣದಲ್ಲಿ ದಂಡ ಪಾವತಿಸಬೇಕಾಗುತ್ತದೆ. ಇದಕ್ಕೂ ಮುನ್ನ ಆ.23ರಿಂದ ಸೆ.12ರವರೆಗೂ ದಂಡದ ಶೇ.50ರಷ್ಟನ್ನು ಪಾವತಿಸಲು ಅವಕಾಶ ನೀಡಿತ್ತು. ಈ ವೇಳೆ ಬೆಂಗಳೂರು ಒಂದರಲ್ಲೇ 55 ಕೋಟಿ ರೂ.ಗೂ ಹೆಚ್ಚು ದಂಡ ಸಂಗ್ರಹವಾಗಿತ್ತು.



