Monday, June 2, 2025
Google search engine

Homeರಾಜ್ಯಸುದ್ದಿಜಾಲಕಾರ್ಮಿಕರಿಗೆ ನೀಡುವ ಸರ್ಕಾರಿ ಸೌಲಭ್ಯಗಳು ಕೇವಲ ದಾಖಲೆಗಳಲ್ಲಿ ಇರಬಾರದು: ನ್ಯಾಯಾಧೀಶ ಆನಂದ್

ಕಾರ್ಮಿಕರಿಗೆ ನೀಡುವ ಸರ್ಕಾರಿ ಸೌಲಭ್ಯಗಳು ಕೇವಲ ದಾಖಲೆಗಳಲ್ಲಿ ಇರಬಾರದು: ನ್ಯಾಯಾಧೀಶ ಆನಂದ್

ಮಂಡ್ಯ:  ಸರ್ಕಾರದಿಂದ ಕಾರ್ಮಿಕರಿಗೆ ನೀಡಲಾಗುವ ಸರ್ಕಾರಿ ಸೌಲಭ್ಯಗಳು ಕೇವಲ ದಾಖಲೆಯಲ್ಲಿ ಇರಬಾರದು, ಅವು ಕಾರ್ಮಿಕರ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಆನಂದ್ ಎಂ ಅವರು ಹೇಳಿದರು.

ಶನಿವಾರ ನಗರದ ಮೈಸೂರು ಸಕ್ಕರೆ ಕಾರ್ಖಾನೆ ಕಂಪನಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರ್ಮಿಕ ಇಲಾಖೆ, ಅಮೃತ ಅಲಯನ್ಸ್ ಸಂಸ್ಥೆ ಮತ್ತು ಮೈಸೂರು ಸಕ್ಕರೆ ಕಂಪನಿ ನಿಯಮಿತ ಇವರುಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮ – 2025 ಹಾಗೂ ಡಯಾ ಕೇರ್ ವತಿಯಿಂದ ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡ ಉಚಿತ ತಪಾಸಣೆ ಪರೀಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಮಿಕರು ದೇಶದ ಶಕ್ತಿ, ಕಾರ್ಮಿಕರು ಇಲ್ಲದಿದ್ದರೆ ದೇಶದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗುತ್ತಿತ್ತು. ಭಾರತದಲ್ಲಿ ದೊಡ್ಡ ದೊಡ್ಡ ರಸ್ತೆಗಳು ಹಾಗೂ ಕಟ್ಟಡಗಳು ನಿರ್ಮಾಣ ಮಾಡಲು ಸಾಧ್ಯವಾಗಿದ್ದು ಕಾರ್ಮಿಕ ಸೇವೆಯಿಂದ. ಕಾರ್ಮಿಕರು ತಮ್ಮ ಸೌಲಭ್ಯಗಳ ಕುರಿತು ತಿಳಿದಿರಬೇಕು, ಕಾರ್ಮಿಕರು ತಮ್ಮ ಹಕ್ಕುಗಳನ್ನು ಕೇಳಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಮಿಕ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು, ಕಾರ್ಮಿಕರಿಗೆ ಸರ್ಕಾರ ರೂಪಿಸಿರುವ ಯೋಜನೆಗಳು ಕಾರ್ಮಿಕರಿಗೆ ತಲುಪಿಸಿದಾಗ ಮಾತ್ರ ಯಶಸ್ಸು ಸಾಧಿಸಿದಂತಾಗುತ್ತದೆ, ಕಾರ್ಮಿಲರಿಗೆ ನೀಡಲಾಗುವ ಸ್ಮಾರ್ಟ್ ಕಾರ್ಡುಗಳ ಕುರಿತು ಹೆಚ್ಚು ಕಾರ್ಮಿಕರಿಗೆ ತಿಳಿದಿಲ್ಲ, ಅಧಿಕಾರಿಗಳು ಸ್ಮಾರ್ಟ್ ಕಾರ್ಡ್ ಮಾಡಿಸಲು ಬೇಕಿರುವ ದಾಖಲೆಗಳನ್ನು ಸರಳೀಕರಣ ಗೊಳಿಸಬೇಕು ಆಗ ಕಾರ್ಮಿಕರು ಮುಂದೆ ಬಂದು ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳುತ್ತಾರೆ ಎಂದು ತಿಳಿಸಿದರು.

ಕಾರ್ಖಾನೆಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ನ್ಯಾಯಾಲಯ ಪ್ರತಿ ಕಾರ್ಖಾನೆಗಳಲ್ಲಿ ಇಂಟರ್ನಲ್ ಕಮಿಟಿ ರಚಿಸಲು ಸೂಚಿಸಿದೆ,
ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ಕಮಿಟಿಯನ್ನು ಕಾರ್ಖಾನೆಗಳಲ್ಲಿ ರಚಿಸಲಾಗಿದೆಯೆ ಎಂದು ಖಾತ್ರಿಪಡಿಸಿಕೊಂಡು ಜಾಗೃತಿ ಮೂಡಿಸಬೇಕು. ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಮಾಲೀಕರನ್ನಾಗಿ ಮಾಡಿ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಡಾ. ಎಂ. ಸವಿತಾ ಅವರು ಮಾತನಾಡಿ ಕಾರ್ಮಿಕರಿಗೆ ಕಾನೂನು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಕಾರ್ಮಿಕ ವೇತನ ಪಾವತಿ ಕಾಯ್ದೆಯಲ್ಲಿ ಯಾವುದೇ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಕಂಪನಿಯು ಮಾಸಿಕ ವೇತನವನ್ನು 10 ನೇ ತಾರೀಖಿನೊಳಗೆ ನೀಡಬೇಕು, ಕನಿಷ್ಠ ವೇತನ ಕಾಯ್ದೆಯಲ್ಲಿ ಸರ್ಕಾರ ಜೀವನ ನಡೆಸುವ ನಿಗದಿಪಡಿಸಿರುವ ವೇತನಕ್ಕಿಂತ ಕಡಿಮೆ ವೇತನ ನೀಡಬಾರದು ಎಂದು ತಿಳಿಸಿದರು.

ಯಾವುದೇ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರುವ ಕಾರ್ಮಿಕನನ್ನು ನಿಬಂಧನೆಗೊಳಪಡಿಸಿ ಕೆಲಸಕ್ಕೆ ಸೇರಿಸಿಕೊಂಡಿರುವ ಆರ್ಡರ್ ಪತ್ರ ನೀಡಬೇಕು. ಕಡ್ಡಾಯವಾಗಿ ವಾರದಲ್ಲಿ ಒಂದು ದಿನ ರಜೆ ನೀಡಬೇಕು ಪ್ರತಿ ಕಂಪನಿಯು ಹಬ್ಬಗಳಿಗೆ ವರ್ಷದಲ್ಲಿ 10 ದಿನ ರಜೆಯನ್ನು ನೀಡಬೇಕು ಅಥವಾ ರಜೆ ದಿನಗಳಲ್ಲಿ ಕೆಲಸ ಮಾಡಿಸಿಕೊಂಡರೆ ಪರ್ಯಾಯ ದಿನ ರಜೆ ನೀಡಬೇಕು ಇಲ್ಲದಿದ್ದರೆ ಕೆಲಸ ಮಾಡಿಸಿಕೊಂಡ ರಜೆಯ ದಿನದಂದು ವೇತನದ ಎರಡು ಪಟ್ಟು ಹಣ ಪಾವತಿ ಮಾಡಬೇಕು ಎಂದರು.

ಯಾವುದೇ ಸಂಸ್ಥೆ ಹಾಗೂ ಕಾರ್ಖಾನೆಯೂ ಮಾಡಿದ ಲಾಭದಲ್ಲಿ ಶೇ 8.3 ರಿಂದ 20 ಬೋನಸ್ ನೀಡಬೇಕು. ದಿನದಲ್ಲಿ 8 ಗಂಟೆಗಳು ಮಾತ್ರ ಕೆಲಸ ಮಾಡಿಸಿಕೊಳ್ಳಬೇಕು,
ಮಹಿಳಾ ಕಾರ್ಮಿಕರಿಗೆ ಹೆರಿಗೆಯ ಸಂದರ್ಭದಲ್ಲಿ ಆರು ತಿಂಗಳ ಹೆರಿಗೆ ರಜೆ ನೀಡಬೇಕು ಹಾಗೂ ಆರು ತಿಂಗಳ ಸಂಪೂರ್ಣ ವೇತನವನ್ನು ಅವರ ಖಾತೆಗೆ ಜಮೆ ಮಾಡಬೇಕು, ಹಾಗೂ ಯಾವುದೇ ಕಾರಣಕ್ಕೂ ಅವರನ್ನು ಕೆಲಸದಿಂದ ವಜಾ ಮಾಡುವಂತಿಲ್ಲ ಎಂದು ತಿಳಿಸಿದರು.

ದೇಶದಲ್ಲಿ ಅಸಂಘಟಿತ ಕಾರ್ಮಿಕರ ಸಂಖ್ಯೆ ಹೆಚ್ಚಿದ್ದು, ಕಾರ್ಮಿಕ ಇಲಾಖೆಯಲ್ಲಿ ಅನೇಕ ಯೋಜನೆಗಳು ಅಸಂಘಟಿತ ಕಾರ್ಮಿಕರಿಗಾಗಿ ರೂಪಿಸಲಾಗಿದೆ, ಇದನ್ನು ಕಾರ್ಮಿಕರು ಸಮರ್ಪಕವಾಗಿ ಬೆಳೆಸಿಕೊಳ್ಳಿ. ಹಾಗೂ ಕಾರ್ಮಿಕ ಇಲಾಖೆಯಿಂದ ಇ-ಶ್ರಾಮ್ ಕಾರ್ಡ್ ಹಾಗೂ ಸ್ಮಾರ್ಟ್ ಕಾರ್ಡ್ ಗಳನ್ನು ಅರ್ಹ ಕಾರ್ಮಿಕರಿಗೆ ನೀಡಲಾಗುತ್ತದೆ. ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಕರೆ ನೀಡಿದರು.

ನಂತರ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಆನಂದ್ ಕಾರ್ಮಿಕ ಕಿಟ್ ಗಳನ್ನು ಕಾರ್ಮಿಕರಿಗೆ ಸಾಂಕೇತಿಕವಾಗಿ ವಿತರಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಸಕ್ಕರೆ ಕಂಪನಿಯ ಪ್ರಧಾನ ವ್ಯವಸ್ಥಾಪಕ ಅಪ್ಪ ಸಾಹೇಬ ಪಾಟೀಲ್, ಅಮೃತಾ ಅಲಯನ್ಸ್ ಸಂಸ್ಥೆಯ ಎಂ . ಲೋಕೇಶ್, ಮೈ ಶುಗರ್ ಸಕ್ಕರೆ ಕಂಪನಿಯ ಮುಖ್ಯ ಆಡಳಿತಾಧಿಕಾರಿ ಮನುಜಶ್ರೀ ವೈ.ಸಿ, ಎಲ್ಲರಲ್ಲೂ ಒಂದಾಗು ಮಂಕುತಿಮ್ಮ ಟ್ರಸ್ಟ್ ನಾ ಸಂಸ್ಥಾಪಕ ಅಧ್ಯಕ್ಷ ಎಂ ವಿನಯ್ ಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular