ಚಾಮರಾಜನಗರ: ನಾಡಿನ ಹೆಸರಾಂತ ಕವಿಗಳು, ಬರಹಗಾರರು, ಅಂಕಣಕಾರರು , ಚಲನಚಿತ್ರ ಕಿರುತೆರೆ ಮೂಲಕ ಕನ್ನಡ ಸಾಹಿತ್ಯವನ್ನು ಉತ್ತುಂಗ ಶಿಖರಕ್ಕೆ ತೆಗೆದುಕೊಂಡು ಹೋಗಿದ್ದ ಹೆಚ್ ಎಸ್ ವೆಂಕಟೇಶ್ ಮೂರ್ತಿ ಅವರ ನಿಧನ ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಅಪಾರ ನಷ್ಟ ಉಂಟಾಗಿದೆ. ಕನ್ನಡ ಸಾಹಿತ್ಯವನ್ನು ತಮ್ಮ ಭಾವಗೀತೆಗಳು, ಪ್ರಬಂಧಗಳು ,ಕಾದಂಬರಿಗಳು, ಅನುವಾದ ,ವಿಮರ್ಶೆ, ನಾಟಕಗಳ ಮೂಲಕ ಮನೆ ಮನೆ ಮಾತಾಗಿದ್ದ ವೆಂಕಟೇಶ್ ಮೂರ್ತಿಯವರು ಕನ್ನಡದ ಅಮರ ಆಸ್ತಿಯೆಂದು ಜಿಲ್ಲಾ ಗಮಕ ಕಲಾಪರಿಷತ್ತಿನ ಅಧ್ಯಕ್ಷರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಳೆದ ಆರು ದಶಕಗಳಿಂದ ಸಾಹಿತ್ಯ, ಬೋಧನೆ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿ ಅಧ್ಯಯನ ಮತ್ತು ಬೋಧನೆಯ ಮೂಲಕ ಲಕ್ಷಾಂತರ ಕಾವ್ಯ ಪ್ರೇಮಿಗಳ ಹೃದಯವನ್ನು ತಟ್ಟಿ, ಸದಾಕಾಲ ಸ್ಪೂರ್ತಿಯನ್ನು ತುಂಬುವ ಮೂಲಕ ಸುಗಮ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಮಹತ್ವಪೂರ್ಣವಾದ ಭಾವಗೀತೆಗಳನ್ನು ನೀಡಿ ಮಾನವನ ಭಾವ ಸಂತೋಷವನ್ನುಂಟು ಮಾಡಿದ ಅವರ ಗೀತೆಗಳು ಸದಾ ಕಾಲ ನಿರಂತರವಾಗಿ ಜನಮಾನಸದಲ್ಲಿ ಉಳಿಯುತ್ತದೆ. ಬುದ್ಧ ಚರಣ ಮಹಾ ಕಾವ್ಯ ಜೊತೆಗೆ ನೂರಾರು ಭಾವಗೀತೆಗಳು ವಿಮರ್ಶಾ ಚಿಂತನೆಗಳು ,ಕಾದಂಬರಿ ಮಕ್ಕಳ ಸಾಹಿತ್ಯ ,ನಾಟಕ ಅನುವಾದ, ವಿಮರ್ಶೆ ಅಂಕಣಕಾರ ಚಿತ್ರ ಕಲಾವಿದ ಹೀಗೆ ಬಹುಮುಖ ಪ್ರತಿಭೆಯನ್ನು ಹೊಂದಿದ್ದ ಹಿರಿಯರು ,ಗೌರವಾನ್ವಿತರು, ಸರಳ ಸಜ್ಜನಿಕೆಯ ಭಾವಜೀವಿ ವೆಂಕಟೇಶ್ ಮೂರ್ತಿಯವರು ಗಮಕವಾಚನ ,ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರಭಾವದಿಂದ ತಮ್ಮ ಸಾಹಿತ್ಯ ಪ್ರಭೆಯನ್ನು ಉಜ್ವಲಗೊಳಿಸಿಕೊಂಡು ಕನ್ನಡ ಸಾಹಿತ್ಯಕ್ಕೆ ಸಾಧಕ ಗರಿಯನ್ನು ಮೂಡಿಸಿ ಮರೆಯಾಗಿರುವುದು ಕನ್ನಡ ಪ್ರಪಂಚಕ್ಕೆ ತುಂಬಲಾರದ ನಷ್ಟವಾಗಿದೆ. ಕೋಟಿ ಕೋಟಿ ಕನ್ನಡಿಗರು ಸದಾಕಾಲ ಇವರ ಭಾವಗೀತೆಗಳು ಮತ್ತು ಸಾಹಿತ್ಯದ ಅಧ್ಯಯನದ ಮೂಲಕ ಜೀವನ ಸ್ಪೂರ್ತಿಯನ್ನು ಪಡೆಯುವರು ಎಂದು ತಿಳಿಸಿದ್ದಾರೆ.