ಕಲಬುರಗಿ: ಚುನಾವಣೆಯಲ್ಲಿ ಹೇಳಿಕೊಳ್ಳಲು ಬಿಜೆಪಿ ಸರ್ಕಾರ ಯಾವುದೇ ಸಾಧನೆ ಮಾಡಿಲ್ಲ. ಮೋದಿ ಗ್ಯಾರಂಟಿ ಟಿವಿಯಲ್ಲಿದೆ, ನಮ್ಮ ಗ್ಯಾರಂಟಿ ಜನರ ಕೈಯಲ್ಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿದ್ದಾರೆ.
ಕಲಬುರಗಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದು ಹತ್ತು ವರ್ಷಗಳು ಕಳೆದರೂ ದೇವರು, ಧರ್ಮದ ಹೆಸರಿನಲ್ಲಿ ಚುನಾವಣೆ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಹೇಳಿಕೊಳ್ಳುವಂತಹ ಸ್ವಂತ ಸಾಧನೆಯೇ ಅವರ ಬಳಿ ಇಲ್ಲ. ಆದರೆ, ನಾವು ಗ್ಯಾಂರಟಿ ಯೋಜನೆಗಳ ದೀಪ ಇರಿಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜೋಡಿತ್ತಿನ ಮುಂದಾಳುತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ಮೋದಿ ಗ್ಯಾರಂಟಿ ಟಿವಿಯಲ್ಲಿದೆ, ನಮ್ಮ ಗ್ಯಾರಂಟಿ ಕೈಯಲ್ಲಿದೆ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ದಕ್ಷಿಣ ಭಾರತದಲ್ಲಿ ಮೋದಿ ಸುನಾಮಿ, ಬಿಜೆಪಿ ಪರವಾದ ಗಾಳಿ ಇದ್ದಿದ್ದರೇ ಬಿಜೆಪಿಯವರು ಕರ್ನಾಟಕ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿನ ಪ್ರಾದೇಶಿಕ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಂಡಿದ್ದು ಏಕೆ? ಶಕ್ತಿಯುತವಾದ ಪಕ್ಷಕ್ಕೆ ಸ್ವಂತ ಬಲದ ಮೇಲೆ ಗೆಲ್ಲುವ ವಿಶ್ವಾಸ ಇಲ್ಲವೇ ಮೋದಿ ಸುನಾಮಿ ಇದೆ ಎನ್ನುವವರು ದಕ್ಷಿಣ ಭಾರತದಲ್ಲಿ ಎಲ್ಲಿದೆ ತೋರಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿಯವರು ಒಂದೇ ಕುಟುಂಬ ಎನ್ನುತ್ತಿದ್ದಾರೆ. ವಾಟ್ಸಪ್ ಯೂನಿವರ್ಸಿಟಿ ಅವರು ಮೋದಿಗೆ ಅವರಿಗೆ ಭಾಷಣ ಬರೆದುಕೊಡುತ್ತಾರೆ. ಅತಿ ಹೆಚ್ಚು ಭ್ರಷ್ಟಾಚಾರ ಆಗಿರೋದು ಬಿಜೆಪಿ ಅವಧಿಯಲ್ಲಿ ಎಂಬುದನ್ನು ಬಿಜೆಪಿಯವರು ಮರೆತಿದ್ದಾರೆ. ಇವರದ್ದು ೪೦ ಪರ್ಸೆಂಟ್ ಸರ್ಕಾರ ಎನ್ನುವ ಕಾರಣಕ್ಕಾಗಿಯೇ ರಾಜ್ಯದ ಜನತೆ ಬಿಜೆಪಿಯವರನ್ನು ಕಿತ್ತೊಗೆದಿದ್ದಾರೆ ಎಂದು ಹೇಳಿದರು.