Monday, June 23, 2025
Google search engine

Homeರಾಜ್ಯಸುದ್ದಿಜಾಲಬೇಸಿಗೆ ಸಮಯದಲ್ಲಿನ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಆರೋಗ್ಯ ಶಿಕ್ಷಣ

ಬೇಸಿಗೆ ಸಮಯದಲ್ಲಿನ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಆರೋಗ್ಯ ಶಿಕ್ಷಣ

ರಾಮನಗರ: ಕಾಲರಾ ಒಂದು ಬ್ಯಾಕ್ಟೀರಿಯಾ ಸೋಂಕಾಗಿದ್ದು ಇದು ಕಲುಷಿತ ನೀರು ಮತ್ತು ಅನಾರೋಗ್ಯಕರ ಆಹಾರ ಪದ್ದತಿಯಿಂದ ಹರಡುವ ಸೋಂಕು. ಕಾಲರಾ ಸೋಂಕಿನ ಲಕ್ಷಣಗಳು ಆಹಾರ ಸೇವನೆಯ ನಂತರ ವಾಂತಿಯಾಗುವುದು, ಅತಿಯಾದ ನೀರಿನಿಂದ ಕೂಡಿದ ಬೇದಿ, ಅತಿಸಾರದ ಪರಿಣಾಮದಿಂದಾಗಿ ದೇಹದಲ್ಲಿ ನಿಶ್ಯಕ್ತಿ, ನಿರ್ಜಲೀಕರಣದಿಂದಾಗಿ ಬಾಯಿ, ಕಣ್ಣುಗಳು ಒಣಗುವುದು, ಮೂತ್ರ ವಿಸರ್ಜನೆ ಇಲ್ಲದಿರುವುದು, ವಿಪರೀತ ಬಾಯಾರಿಕೆ ಮತ್ತು ಸುಸ್ತು, ಅತಿಯಾದ ನಿದ್ದೆ, ತಲೆನೋವು, ಮಾಂಸಖಂಡಗಳ ಸೆಳೆತ, ಹೃದಯ ಬಡಿತ ಸಾಮಾನ್ಯಕಿಂತ ಹೆಚ್ಚಾಗುವುದ ಅಥವಾ ಕಡಿಮೆಯಾಗುವುದು, ದೇಹದ ತೂಕವು ಕಡಿಮೆಯಾಗುವುದು, ಇಂತಹ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಭೇಟಿನೀಡಿ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಸಂಪೂರ್ಣ ಗುಣಪಡಿಸಬಹುದು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತ. ಕೆ.ಜೆ ಅವರು ತಿಳಿಸಿದರು.

ಅವರು ಇಂದು ಗೊಲ್ಲರಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಜಿಲ್ಲಾ ಮಾಹಿತಿ ಶಿಕ್ಷಣ ಮತ್ತು ಸಂವಹನ ವಿಭಾಗ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಲಕ್ಷ್ಮೀಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದೊಂದಿಗೆ ಬೇಸಿಗೆ ಸಮಯದಲ್ಲಿನ ಮುನ್ನೆಚ್ಚರಿಕೆ ಕುರಿತು ಆಯೋಜಿಸಲಾಗಿದ್ದ ಆರೋಗ್ಯ ಶಿಕ್ಷಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾರ್ವಜನಿಕರು ಹಬ್ಬ, ಜಾತ್ರೆ, ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಕಾಲರಾ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳಾದ ಕುಡಿಯುವ ನೀರಿನ ಶುದ್ದತೆ ಬಗ್ಗೆ ಎಚ್ಚರ ವಹಿಸುವುದು. ಚೆನ್ನಾಗಿ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು, ಸೊಪ್ಪು ತರಕಾರಿಗಳನ್ನು ಶುದ್ದವಾದ ನೀರಿನಿಂದ ಸ್ವಚ್ಚಗೊಳಿಸಿದ ನಂತರ ಸೇವಿಸುವುದು, ಶೌಚಾಲಯವನ್ನು ಬಳಸಿದ ನಂತರ ಹಾಗೂ ಆಹಾರವನ್ನು ತಯಾರಿಸುವ, ಸೇವಿಸುವ ಮೊದಲು ಸಾಬೂನು ಬಳಸಿ ಕೈಯನ್ನು ಚೆನ್ನಾಗಿ ತೊಳೆಯುವುದು, ಮನೆ ಆಹಾರ ಸೇವನೆಗೆ ಆದ್ಯತೆ ನೀಡಿ, ಅಸುರಕ್ಷಿತವಾಗಿ ತಯಾರಿಸಿದ ಹೊರಗಿನ ಆಹಾರವನ್ನು ಸೇವಿಸುವ ಮುನ್ನ ಎಚ್ಚರ ವಹಿಸುವುದು, ದೇಹದಲ್ಲಿ ಬಳಲಿಕೆ ಕಂಡುಬಂದರೆ ಓ.ಆರ್.ಎಸ್, ಉಪ್ಪು ಬೆರೆಸಿದ ನಿಂಬೆ ಪಾನಕ, ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದರ ಬಗ್ಗೆ ಆರೋಗ್ಯ ಶಿಕ್ಷಣದ ಕುರಿತು ತಿಳಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಉಮಾ ಅವರು ಮಾತನಾಡಿ, ಬೇಸಿಗೆಯಲ್ಲಿ ಬಿಸಿ ಗಾಳಿಯ ಸಂದರ್ಭದಲ್ಲಿ ದೇಹದಲ್ಲಿ ನೀರಿನ ಅಂಶವು ಕಡಿಮೆಯಾದಲ್ಲಿ ಸೂರ್ಯಾಘಾತ ಸಾಧ್ಯತೆಯು ಅಧಿಕವಾಗಿರುತ್ತದೆ. ಸೂರ್ಯಾಘಾತದಿಂದ ರಕ್ಷಿಸಿಕೊಳ್ಳಲು ಮದ್ಯಾಹ್ನದ ಸಮಯದಲ್ಲಿ ಶ್ರಮದಾಯಕ ಕೆಲಸಗಳನ್ನು ಮಾಡದಿರುವುದು, ಹೆಚ್ಚು ಶುದ್ದ ನೀರನ್ನು ಕುಡಿಯುವುದು, ತಿಳಿ ಹತ್ತಿ ಬಟ್ಟೆಯನ್ನು ಧರಿಸುವುದು, ಸಕ್ಕರೆಯುಕ್ತ ಪಾನೀಯ / ಕಾರ್ಬೋನೇಟೆಡ್ ಪಾನೀಯಗಳನ್ನು ಕುಡಿಯದಿರುವುದು, ಓ.ಆರ್.ಎಸ್, ಎಳನೀರಿನ ಬಳಕೆ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿ ಡಾ. ಶ್ವೇತಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದಾಸಪ್ಪ, ಎಪಿಡೆಮೋಲಜಿಸ್ಟ್ ನಿವೇದಿತಾ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ, ಆರೋಗ್ಯ ನಿರೀಕ್ಷಣಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರು, ಸಾರ್ವಜನಿಕರು ಹಾಜರಿದ್ದರು.

RELATED ARTICLES
- Advertisment -
Google search engine

Most Popular