ಕಲಬುರಗಿ: ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಹಣ ಕೊಟ್ಟವರಿಗೆ ಮಾತ್ರ ಮನೆ ಹಂಚಿಕೆ ಆಗುತ್ತಿದೆ ಎಂಬ ಗಂಭೀರ ಆರೋಪದೊಂದಿಗೆ ಆಳಂದ ಶಾಸಕ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಸತಿ ಸಚಿವ ಝಮೀರ್ ಅಹ್ಮದ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಝ್ ಖಾನ್ ಎನ್ನಲಾದವರೊಂದಿಗೆ ಹಿಂದಿ ಭಾಷೆಯಲ್ಲಿ ನಡೆದ ಫೋನ್ ಸಂಭಾಷಣೆಯಲ್ಲಿ ಪಾಟೀಲ್, ದುಡ್ಡು ಕೊಟ್ಟು ಮನೆಗಳನ್ನು ಹಂಚಲಾಗುತ್ತಿದೆ, ಇದೇನು ದಂಧೆ ನಡೆಯುತ್ತಿದೆಯೇ?” ಎಂದು ಪ್ರಶ್ನಿಸಿದ್ದಾರೆ. “ನಾನು ಶಿಫಾರಸು ಮಾಡಿದವರಿಗೂ ಮನೆ ನೀಡಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಣ ಕೊಟ್ಟು ಮನೆ ಪಡೆದಿದ್ದಾರೆ” ಎಂಬುದಾಗಿ ದೂರಿದ್ದಾರೆ.
ಮತ್ತೊಂದೆಡೆ ಸರ್ಫರಾಝ್ ಖಾನ್, “ಯಾವ ಕ್ಷೇತ್ರದಲ್ಲಿ ಹೀಗೆ ಆಗುತ್ತಿದೆ ಹೇಳಿ, ಯಾರೇ ಆಗಲಿ ಜೈಲಿಗೆ ಕಳಿಸುತ್ತೇವೆ” ಎಂದು ಸ್ಪಂದಿಸಿದ್ದಾರೆ. ನನ್ನ ಪಕ್ಷ ಮತ್ತು ನಮ್ಮ ಸರಕಾರದ ವಿರುದ್ಧವೇ ಹೇಗೆ ಆರೋಪ ಮಾಡಲಿ? ಒಂದು ವೇಳೆ ನಾನು ಹೊರಗೆ ಬಾಯಿ ಬಿಟ್ಟರೆ ಸರಕಾರವೇ ನಡಗುತ್ತದೆ ಎಂದು ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ʼಆಳಂದ ತಾಲ್ಲೂಕು ವ್ಯಾಪ್ತಿಯ ಮುನ್ನಳ್ಳಿಯಲ್ಲಿ 200 ಮನೆ, ದರ್ಗಾ ಶಿರೂರ 100, ಧಂಗಾಪುರದಲ್ಲಿ 200, ಕವಲಗಾದಲ್ಲಿ 200, ಮಾಡಿಯಾಳದಲ್ಲಿ 200 ಮನೆ ಸೇರಿದಂತೆ ಒಟ್ಟು 950 ಮನೆಗಳನ್ನು ಲಂಚ ಪಡೆದು ಹಂಚಿಕೆ ಮಾಡಲಾಗಿದೆ. ಪಕ್ಕದ ಅಫಜಲಪುರ ಕ್ಷೇತ್ರದಲ್ಲಿಯೂ ಹಣ ಪಡೆದೇ ಮನೆಗಳನ್ನು ಹಂಚಿಕೆ ಮಾಡಲಾಗಿದೆʼ ಎಂದು ಆರೋಪಿಸಿದ್ದಾರೆ.
ಸರ್ಫರಾಝ್, “ನೀವು ಶಿಫಾರಸು ಮಾಡಿದವರ ಪಟ್ಟಿ ಕೊಡಿ, ಅವರಿಗೆ ಮಂಜೂರು ಮಾಡುತ್ತೇವೆ” ಎಂದು ಸಮಾಧಾನಕ್ಕೆ ಯತ್ನಿಸಿದರು. ಆದರೆ ಪಾಟೀಲ್, “ನಮ್ಮದೇ ಸರಕಾರದ ವಿರುದ್ಧ ಮಾತನಾಡುವಂತಾಗಿದೆ” ಎಂದು ಅಸಹನೆಯನ್ನು ವ್ಯಕ್ತಪಡಿಸಿದರು.