ಚಿಂತಾಮಣಿ: ನಗರದ ಹೊರವಲಯದಲ್ಲಿ ನಡೆದಿದ್ದ ಕಳ್ಳತನದ ಪ್ರಕರಣನ್ನು ಭೇಧಿಸಿರುವ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿ, ೪೭.೬೮ ಲಕ್ಷ ರೂ ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಹಿಂದುಪುರದ ಮಹೇಶ್, ಬೆಂಗಳೂರಿನ ಕಾಟನ್ ಪೇಟೆಯ ಜಾಲಿ ಮೊಹಲ್ಲಾದ ಮುದಾಸ್ಸಿರ್ ಪಾಷಾ, ತಾಲ್ಲೂಕಿನ ಚಿನ್ನಸಂದ್ರ ಗ್ರಾಮದ ಸಡುಲ್ತಾನ್ ಬಾಷಾ ಬಂಧಿತ ಆರೋಪಿಗಳು. ನಗರದ ಹೊರವಲಯದ ನಾಯನಹಳ್ಳಿ ಗ್ರಾಮದಲ್ಲಿ ವಿ.ಕೃಷ್ಣಾರೆಡ್ಡಿ ಕುಟುಂಬದವರು ಮನೆಯ ಬೀಗ ಹಾಕಿಕೊಂಡು ತೋಟದ ಕೆಲಸಕ್ಕೆ ಹೋಗಿದ್ದಾಗ, ಮಟ-ಮಟ ಮಧ್ಯಾಹ್ನದಲ್ಲೇ ಮನೆಯ ಬೀಗ ಮುರಿದು ೭.೫ ಲಕ್ಷ ಮೌಲ್ಯದ ಆಭರಣಗಳ ಕಳ್ಳತನದ ದೂರು ದಾಖಲಾಗಿತ್ತು.
ತಾಲ್ಲೂಕಿನ ಕಾಗತಿ ಗ್ರಾಮದಲ್ಲಿ ರಾಜಪ್ಪ ಎಂಬುವವರ ಮನೆಯಲ್ಲಿ ಬೀಗ ಮುರಿದು ಸುಮಾರು ೧ ಲಕ್ಷ ರೂ ಬೆಲೆ ಬಾಳುವ ಆಭರಣಗಳ ಕಳ್ಳತನವಾಗಿತ್ತು. ಹಾಡು ಹಗಲಲ್ಲೆ ನಡೆದಿದ್ದ ಕಳ್ಳತನದ ಪ್ರಕರಣಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದವು. ಈ ಪ್ರಕರಣಗಳ ಪತ್ತೆಗಾಗಿ ಜಿಲ್ಲಾ ಎಸ್ಪಿ ಕುಶಾಲ್ ಚೌಕ್ಸೆ ವಿಶೇಷ ತಂಡವನ್ನು ರಚಿಸಿದ್ದರು.
ಡಿವೈಎಸ್ಪಿ ಮುರಳೀಧರ್ ನೇತೃತ್ವದ ತಂಡದಲ್ಲಿ ಗ್ರಾಮಾಂತರ ಠಾಣೆಯ ಇನ್ಸ್ ಸ್ಪೆಕ್ಟರ್ ಶಿವರಾಜು, ಬಟ್ಲಹಳ್ಳಿ ಠಾಣೆಯ ಇನ್ಸ್ಪೆಕ್ಟರ್ಗಳಾದ ಪುನೀತ್, ನಂಜರಾಯ್, ಸಬ್ ಇನ್ಸ್ ಸ್ಪೆಕ್ಟರ್ ಮಮತ, ಇ.ನಾಗೇಂದ್ರಪ್ರಸಾದ್ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಯಾದ ದಿನೇಶ್, ವಿಶ್ವನಾಥ್, ಸಿದ್ದೇಶ್, ನರೇಶ್, ಕೃಷ್ಣಮೂರ್ತಿ, ಪ್ರವೀಣ್, ಶ್ರೀನಿವಾಸ್, ತಾಂತ್ರಿಕ ಸಿಬ್ಬಂದಿ ರವಿಕುಮಾರ್, ಮುನಿಕೃಷ್ಣ, ತಂಡದಲ್ಲಿದ್ದರು.
ಗ್ರಾಮಾಂತರ ಪೊಲೀಸ್ ಠಾಣೆಯ ಎರಡು ಪ್ರಕರಣಗಳು, ರಾಯಲಪಾಡು ಪೊಲೀಸ್ ಠಾಣೆ, ಕೆ.ಆರ್.ಪುರಂ ಪೊಲೀಸ್ ಠಾಣೆ, ಬೈಯಪ್ಪನಹಳ್ಳಿ ಪೊಲೀಸ್ ಠಾಣೆ, ಮುರುಡೇಶ್ವರ ಪೊಲೀಸ್ ಠಾಣೆ, ಹಾಗೂ ಅಂಕೋಲಾ ಪೊಲೀಸ್ ಠಾಣೆಗಳ ತಲಾ ಒಂದೊಂದು ಪ್ರಕರಣಗಳಲ್ಲಿ ಆರೋಪಿಗಳು ಭಾಗಿಯಾಗಿರುವುದಾಗಿ ವಿಚಾರಣೆಯಿಂದ ತಿಳಿದುಬಂದಿದೆ.
ವಿಶೇಷ ಪತ್ತೆದಾರಿ ತಂಡವು ಪ್ರಕರಣಗಳು ನಡೆದ ಸ್ಥಳಗಳಿಗೆ ಭೇಟಿ ನೀಡಿ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ, ವೈಜ್ಞಾನಿಕವಾಗಿ ತನಿಖೆ ಕೈಗೊಂಡು ಕಳ್ಳರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ
ಹಿಂದೆಯೂ ಸಹ ಮೂವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಕರಣಗಳನ್ನು ಶೀಘ್ರವಾಗಿ ಪತ್ತೆ ಮಾಡಿದ ತಂಡದ ಕಾರ್ಯವೈಖರಿಯ ಬಗ್ಗೆ ಪೊಲೀಸ್ ಎಸ್ಪಿ ಕುಶಾಲ್ ಚೌಕ್ಸೆ ಮತ್ತು ಹೆಚ್ಚುವರಿ ಎಸ್ಪಿ ರಾಜಾ ಇಮಾಮ್ ಖಾಸಿಮ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ