ತುಮಕೂರು: ಫೆ.7 ರಂದು ದೆಹಲಿಯಲ್ಲಿ ಪ್ರತಿಭಟನೆ ಮಾಡಲು ಹೊರಟಿದ್ದೀರಿ. ನೀವು ಎಷ್ಟು ಅನುದಾನ ಬಿಡುಗಡೆ ಮಾಡಿಸಿದ್ದೀರಿ ಶ್ವೇತಪತ್ರ ಹೊರಡಿಸಿ. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರಿಗೆ ಮಾಧ್ಯಮದ ಮುಖಾಂತರ ಬಹಿರಂಗ ಸವಾಲು ಹಾಕುತ್ತೇನೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರು.
ತುಮಕೂರಿನಲ್ಲಿ ಮಾತನಾಡಿದ ಅವರು, ಯಾವ ಉದ್ದೇಶಕ್ಕೆ, ಪುರುಷಾರ್ಥಕ್ಕೆ ಪ್ರತಿಭಟನೆ ಮಾಡ್ತಾ ಇದ್ದೀರಿ. ಮನಮಹೋನ್ ಸಿಂಗ್ 10 ವರ್ಷ ಪ್ರಧಾನಿಯಾಗಿದ್ದಾಗ ಎಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ಮೋದಿ ಪ್ರಧಾನಿ ಆದ ಮೇಲೆ ಎಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ನಾವು ಬಹಿರಂಗ ಚರ್ಚೆಗೆ ಸಿದ್ದ, ನಮ್ಮ ಸವಾಲನ್ನ ಸ್ವೀಕಾರ ಮಾಡಿ ಎಂದರು.
ಡಿ ಕೆ ಸುರೇಶ್ ಅವರು ದಕ್ಷಿಣದ ಹಣವನ್ನ ಬಳಸಿಕೊಂಡು ಉತ್ತರದವರಿಗೆ ಕೊಡ್ತಾರೆ ಅಂದಿದ್ದಾರೆ. ಈ ಮೂಲಕ ದೇಶ ಒಡೆಯುವ ಮಾತನಾಡಿದ್ದಾರೆ ಎಂದು ಕಿಡಿಕಾರಿದರು.
ಮಾಧ್ಯಮದಲ್ಲಿ, ಸಾರ್ವಜನಿಕವಾಗಿ ಇಡೀ ದೇಶದಲ್ಲಿ ಇದಕ್ಕೆ ಖಂಡನೆ ವ್ಯಕ್ತವಾಗಿದೆ. ರಾಜ್ಯಸಭೆ, ಲೋಕಸಭೆಯಲ್ಲಿ ಕೂಡ ಕಾಂಗ್ರೆಸ್ ಗೆ ಮುಜುಗರವಾಗಿದೆ. ಮತ್ತೊಂದು ಕಡೆ ಬಾಲಕೃಷ್ಣ ಅವರು ಮಂತ್ರಾಕ್ಷತೆ ಕೊಟ್ಟು ವೋಟ್ ಕೇಳ್ತಿದ್ದಾರೆ ಎಂದಿದ್ದಾರೆ. ಇದೆಲ್ಲ ಮುಜುಗರವನ್ನ ವಿಷಯಾಂತರಕ್ಕೆ ದೆಹಲಿಗೆ ಪ್ರತಿಭಟನೆ ಮಾಡಲು ಹೊರಟಿದ್ದಾರೆ ಎಂದು ಹರಿಹಾಯ್ದರು.
ದಾಖಲೆ ಸಮೇತ ಚರ್ಚೆಗೆ ಬರ್ತೀವಿ. ಮೋದಿ ಪ್ರಧಾನಿ ಆದ್ಮೇಲೆ ರೈಲ್ವೇಗೆ, ನೀರಾವರಿ, ರಾಷ್ಟ್ರೀಯ ಹೆದ್ದಾರಿಗಳಿಗೆ. ರೈತರಿಗೆ, ಜನಧನ್ ಖಾತೆಗಳಿಗೆ ಎಷ್ಟು ಅನುದಾನ ಕೊಟ್ಟಿದ್ದಾರೆ ಅನ್ನೋದರ ದಾಖಲೆ ಕೊಡ್ತೀವಿ. ರಾಜ್ಯದಲ್ಲಿ ನಿಮ್ಮ ಸರ್ಕಾರ ಬಂದು 9 ತಿಂಗಳು ಕಳೆದೋಗಿದೆ. ಎಲ್ರಿ, ಸರಕಾರನೇ ಇಲ್ಲ ಸತ್ತೋಗಿದೆ..ಬದುಕಿದೆಯಾ.? ಕುಂಕುಮ ಹಚ್ಚಿದ್ರೆ ಬೇಡ ಅಂತೀರಾ. ಕೇಸರಿ ಕಂಡರೆ ಆಗಲ್ಲ, ನಿಮಗೆ ಮಕ್ಮಲ್ ಟೋಪಿ ಇಷ್ಟ ಆಗುತ್ತೆ. ತೀರ್ಥ ಪ್ರಸಾದ ಬೇಕಾಗಿಲ್ಲ, ನಿಮಗೆ ಬೇಕಾಗಿರೋದು ಬಿರಿಯಾನಿ, ಬಾಡೂಟ. ನಮಗೆ ಸಿದ್ದರಾಮಯ್ಯ ಅವರ ಮೇಲೆ ಹಿಂದುಳಿದ ವರ್ಗದ ನಾಯಕರು ಅನ್ನೋ ಗೌರವವಿತ್ತು. ಸಿದ್ದರಾಮಯ್ಯ ಅವರ ತಂದೆ, ತಾಯಿ ಅವರಿಗೆ ರಾಮ ಅನ್ನೋ ಹೆಸರಿಟ್ಟಿದ್ದಾರೆ ಎಂದರು.
ಡಿಕೆಶಿ ತಂದೆ, ತಾಯಿ ಶಿವ ಅನ್ನೋ ಹೆಸರನ್ನ ಇಟ್ಟಿದ್ದಾರೆ. ಆದ್ರೆ ಇವರು ತಂದೆ, ತಾಯಿಗಳಿಗೆ ಅಪಮಾನ ಮಾಡ್ತಿದ್ದಾರೆ. ನಮ್ಮ ಧರ್ಮಕ್ಕೆ ಅಪಮಾನ ಮಾಡ್ತಿದ್ದಾರೆ. ಡಿಕೆ ಸುರೇಶ್ ಮೇಲೆ ದೇಶದ್ರೋಹದ ಕೇಸ್ ಹಾಕಬೇಕಿತ್ತು. ದೇಶ ಒಡೆದ ಕೀರ್ತಿ ಇರೋದು ಕಾಂಗ್ರೆಸ್ ನ ನೆಹರು ಕುಟುಂಬಕ್ಕೆ. ಒಂದು ಕಡೆ ರಾಹುಲ್ ಗಾಂಧಿ ಭಾರತ್ ಜೋಡೋ ಅಂತಾರೆ. ಆದ್ರೆ ದೇಶವನ್ನ ಒಡೆದಿದ್ದೆ ಅವರ ಕುಟುಂಬದವರು ಎಂದು ಆರೋಪಿಸಿದರು.
ದೇಶದ್ರೋಹದ ಕೆಲಸ ಆಗ್ತಿರೋದೇ ಕಾಂಗ್ರೆಸ್ ನಲ್ಲಿ. ಮಂಡ್ಯದಲ್ಲಿ ಮೊನ್ನೆ ಏನಾಯ್ತು, ಹನುಮ ಧ್ವಜವನ್ನ ಇಳಿಸ್ತೀರಿ. ಶಿವಾಜಿನಗರದಲ್ಲಿ, ಮೈಸೂರಿನ ಕೆಲವು ಕಡೆ ಹತ್ತಾರು ವರ್ಷದಿಂದ ಹಸಿರು ಧ್ವಜ ಹಾರಾಡ್ತಿದೆ. ಅವರ ಮೇಲೆ ಕೇಸ್ ಹಾಕಿದ್ದೀರಾ. ಮಹಿಳೆಯರ ಮೇಲೆ ಲಾಠಿ ಚಾರ್ಜ್ ಮಾಡ್ತೀರಿ. ಆ ಪ್ರದೇಶವನ್ನ ಪೋಲೀಸರ ಕಬ್ಜಾಗೆ ತೆಗೆದುಕೊಳ್ತೀರಿ. ರಾಷ್ಟ್ರಧ್ವಜ ಬೆಳಿಗ್ಗೆ 9ರಿಂದ 6 ಗಂಟೆವರೆಗೆ ಮಾತ್ರ ಇರೋದು. ಅವಧಿ ಮುಗಿದ ಮೇಲೆ ಹನುಮ ಧ್ವಜ ಹಾರಿಸಿದ್ರೆ ಏನು ತಪ್ಪು ಎಂದು ಪ್ರಶ್ನಿಸಿದರು.
ಮಾಗಡಿ ಶಾಸಕ ಬಾಲಕೃಷ್ಣ ಮಂತ್ರಾಕ್ಷತೆ ಕೊಟ್ಟು ಮತ ಕೇಳ್ತೀರಿ ಅಂತಾರೆ. ಅವರಿಗೆ ನಾಚಿಕೆ ಆಗಬೇಕು. ಚುನಾವಣೆಗೋಸ್ಕರ ಈ ಭರವಸೆಗಳು, ಚುನಾವಣೆ ಮುಗಿದ ಮೇಲೆ ಯಾವ ಭರವಸೆಯೂ ಇರಲ್ಲ. ನಾನು ಪವಿತ್ರವಾದ ಹನುಮನ ಮೂರ್ತಿ ಮುಂದೆ ಹೇಳ್ತಿನಿ. ಹನುಮನ ಶಾಪ, ರಾಮನ ಶಾಪ, ಕರಸೇವಕರ ಶಾಪ, ಮಹಿಳೆಯರ ಶಾಪದಿಂದ. ಲೋಕಸಭಾ ಚುನಾವಣೆಯ ಬಳಿಕ ಈ ಸರ್ಕಾರ ಪತನವಾಗುತ್ತೆ ಎಂದರು.
I. N. D. I. A ಕೂಟದಿಂದ ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್ ಹೊರಗಡೆ ಬಂದಿದ್ದಾರೆ. ಅವರೇ 40 ಸ್ಥಾನ ಬರಲ್ಲ ಅಂತಾ ಹೇಳಿದ್ದಾರೆ ಎಂದರು.
ಸಿ.ಟಿ.ರವಿ ಅವರು ರಾಷ್ಟ್ರಧ್ವಜವನ್ನ ತಾಲಿಬಾನ್ ಧ್ವಜಕ್ಕೆ ಹೋಲಿಸಿದ್ದಾರೆ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿ, ಅವರು ಹಾಗೆ ಹೇಳಿರುವ ಒಂದೇ ಒಂದು ವಿಡಿಯೋ ಕ್ಲಿಪ್ಲಿಂಗ್ ಇದ್ರೂ ನಾನು ರಾಜಕೀಯಕ್ಕೆ ನಿವೃತ್ತಿ ಹೇಳ್ತಿನಿ ಎಂದರು.
ಈ ಬಾರಿಯೂ ಮೋದಿ ಹೆಸರಿನಲ್ಲಿಯೇ ಚುನಾವಣೆಗೆ ಹೋಗ್ತೀರಾ ಅನ್ನೋ ವಿಚಾರ ಕುರಿತು ಮಾತನಾಡಿ, ಇನ್ನೇನು ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹೆಸರಿನಲ್ಲಿ ಹೋಗೋಕಾಗುತ್ತಾ. ರಾಹುಲ್ ಗಾಂಧಿ ಇನ್ನೂ ಪಪ್ಪು. ಮೋದಿ 10 ವರ್ಷ ಮಾಡಿರೋ ಒಳ್ಳೆಯ ಕೆಲಸ ಮಾಡಿದ್ದಾರೆ, ಅವರ ಹೆಸರಿನಲ್ಲಿಯೇ ಮತ ಕೇಳ್ತಾರೆ ಎಂದರು.
ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಬೇಕು ಅನ್ನೋ ಬೇಡಿಕೆ ಹೆಚ್ಚಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅಡ್ವಾಣಿಯವರು ಭೀಷ್ಮ, ರಥಯಾತ್ರೆ ಮುಖಾಂತರ ಅಯೋಧ್ಯೆ ರಾಮಮಂದಿರ ನಿರ್ಮಾಣವಾಗಿದೆ. ಅವರಿಗೆ ಗೌರವ ನೀಡುವ ಸಲುವಾಗಿ ಭಾರತ ರತ್ನ ನೀಡಲಾಗಿದೆ. ಸಿದ್ದಗಂಗಾ ಶ್ರೀಗಳ ಬಗ್ಗೆ ಅಪಾರ ಗೌರವವಿದೆ. ಇವರು ರಾಜಕೀಯಕ್ಕೋಸ್ಕರ ಸಿದ್ದಗಂಗಾ ಶ್ರೀಗಳ ಹೆಸರನ್ನ ಎಳೆದು ತಂದಿದ್ದಾರೆ. ಅವರಿಗೆ ಭಾರತ ರತ್ನ ಕೊಟ್ರೆ ಒಳ್ಳೆಯದು, ಅದನ್ನ ನಾವೇನು ವಿರೋಧಿಸ್ತೀವಾ? ಎಂದು ಕೇಳಿದರು.
ಸೋಮಣ್ಣ ತುಮಕೂರಿನಿಂದ ಸ್ಪರ್ಧಿಸ್ತಾರ ಅನ್ನೋ ವಿಚಾರವಾಗಿ ಮಾತನಾಡಿ, ಅವರು ಹಿರಿಯರು, ಅವರ ಬಗ್ಗೆ ಮಾತನಾಡುವಷ್ಟು ದೊಡ್ಡೋನಲ್ಲ. ಅವರು ಮತ್ತು ಹೈ ಕಮಾಂಡ್ ನಡುವೆ ಏನು ಮಾತುಕತೆ ನಡೆದಿದೆ ಗೊತ್ತಿಲ್ಲ ಎಂದರು.