ಮಂಗಳೂರಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳಿಗೆ ಹಣ ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಕುದ್ರೋಳಿಯ ಅಳಕೆ ಭಾಗದ ಶ್ರೇಯಾ ಸ್ವೀಟ್ಸ್ ಎದುರಿಗಿನ ಕಟ್ಟಡದಲ್ಲಿ ಮೊಕ್ಕಾಂ ಹೂಡಿರುವ ಮಹಾರಾಷ್ಟ್ರ ಮೂಲದ ‘ವೆಕ್ಸನ್’ ಹಾಗೂ ಬಿಎಂಪಿ ಎಂಬ ಹೆಸರಿನ ನೆಟ್ವರ್ಕಿಂಗ್ ಸಂಸ್ಥೆಯು ಇಂಟರರ್ನ್ಶಿಪ್ ಹೆಸರಿನಲ್ಲಿ ನೂರಾರು ಅಮಾಯಕ ವಿದ್ಯಾರ್ಥಿಗಳನ್ನು ಬಲೆಗೆ ಬೀಳಿಸಿಕೊಂಡು ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸ್ವಸ್ತಿಕ ಕಾಲೇಜಿನ ವಿದ್ಯಾರ್ಥಿಗಳು ಪತ್ರಿಕಾಗೋಷ್ಠಿ ನಡೆಸಿ ಕಂಪೆನಿ ವಿರುದ್ಧ ಗಂಭೀರವಾದ ಆರೋಪ ಮಾಡಿದ್ದಾರೆ.
ಚೈನ್ ಲಿಂಕ್ ಕಂಪೆನಿಯ ಅವ್ಯವಹಾರ ಕುರಿತು ಮಾತಾಡಿದ ಎಬಿವಿಪಿ ಬೆಂಬಲಿತ ಸರ್ವ ಕಾಲೇಜು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಮುಳಿಯ ಸಾತ್ವಿಕ್ ಅವರು, “ಪದವಿ ಓದುತ್ತಿರುವ ಅಥವಾ ಮುಗಿಸಿರುವ ಯುವ ಸಮೂಹಕ್ಕೆ ಮಾಸಿಕ 30,000 ರೂಪಾಯಿಗಳ ಆಕರ್ಷಕ ವೇತನದ ಆಮಿಷವೊಡ್ಡಿ ಈ ಸಂಸ್ಥೆ ಆಹ್ವಾನಿಸುತ್ತಿತ್ತು. ಆದರೆ, ಉದ್ಯೋಗದ ಆಸೆಯೊಂದಿಗೆ ಹೋದ ಪ್ರತಿ ವಿದ್ಯಾರ್ಥಿಗಳಿಂದಲೂ ಇಂಟರ್ನ್ಶಿಪ್ ಶುಲ್ಕದ ನೆಪದಲ್ಲಿ ಬರೋಬ್ಬರಿ 51,000 ರೂಪಾಯಿಗಳನ್ನು ಈ ಸಂಸ್ಥೆ ವಸೂಲಿ ಮಾಡಿದೆ“ ಎಂದು ಆರೋಪಿಸಿದರು.
ನೂರಾರು ವಿದ್ಯಾರ್ಥಿಗಳು ಈ ‘ವೆಕ್ಸನ್’ ಹಾಗೂ ಬಿಎಂಪಿ ಕಂಪನಿಯ ಹೆಸರಿನಲ್ಲಿ ನಡೆಯುತ್ತಿದ್ದ ದಂಧೆಗೆ ಬಲಿಯಾಗಿದ್ದಾರೆ. ಮಂಗಳೂರಿನಂತಹ ಪ್ರಬುದ್ಧ ನಗರದಲ್ಲಿ ಹೊರರಾಜ್ಯದ ಕಂಪನಿಯೊಂದು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಇಂತಹ “ಚೈನ್ ಲಿಂಕ್” ಮಾಫಿಯಾ ನಡೆಸುತ್ತಿರುವುದು ತೀವ್ರ ಆತಂಕಕಾರಿ. ಹೀಗಾಗಿ ನಮಗೆ ನ್ಯಾಯ ಸಿಗಬೇಕು. ಈ ಹಿನ್ನೆಲೆಯಲ್ಲಿ ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಕೃಷ್ಣ, ಪ್ರೀತೇಶ್, ಸಿಂಚನ, ಸಿಂಧು, ಎನ್ ಎಸ್ ಯುಐ ಸಂಘಟನೆಯ ಕ್ರಿಸ್ಟನ್ ಮಿನೆಜಸ್ ಉಪಸ್ಥಿತರಿದ್ದರು.



