ಹುಣಸೂರು: ಹುಣಸೂರಿನಲ್ಲಿ ಜಾನುವಾರುಗಳ ರಕ್ಷಣೆ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಜಾನುವಾರು ಸಾಗಿಸುತ್ತಿದ್ದ ವಾಹನವೊಂದನ್ನು ತಡೆದು ಹಣಕ್ಕಾಗಿ ಬೆದರಿಸಿ ದಂಧೆ ನಡೆಸುತ್ತಿದ್ದರು.
ಬಂಧಿತರಲ್ಲಿ ಬೆಂಗಳೂರು ಉತ್ತರಹಳ್ಳಿಯ ರಾಮಕೃಷ್ಣ, ಶಿವಕುಮಾರ್, ಲಿಂಗರಾಜು, ಕಿಶೋರ್, ಪ್ರೇಮಕುಮಾರ್, ಪುಷ್ಪಲತಾ ಹಾಗೂ ಕೆ.ಆರ್.ಪೇಟೆ ತಾಲೂಕಿನ ಸ್ವಾಮಿ ಎಂಬವರು ಸೇರಿದ್ದಾರೆ. ತಾಲೂಕಿನ ಕಟ್ಟೆಮಳಲವಾಡಿಯಲ್ಲಿ ಜಾನುವಾರು ಸಾಗಿಸುತ್ತಿದ್ದ ಚಾಲಕ ಕಿರಣ್ನ್ನು 25 ಸಾವಿರ ರೂಪಾಯಿಗೆ ಬೆದರಿಸಿದ ಈ ತಂಡ, ಕೊನೆಗೆ 20 ಸಾವಿರ ಕೊಟ್ಟರೆ ಬಿಡುತ್ತೇವೆ ಎಂದು ಒತ್ತಡ ಹೇರಿದೆ.
ಸ್ಥಳೀಯ ಜನತೆ ಈ ದುಷ್ಕೃತ್ಯವನ್ನು ಗಮನಿಸಿ ಆಕ್ರೋಶ ವ್ಯಕ್ತಪಡಿಸಿ 112ಕ್ಕೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಗಳನ್ನು ವಶಕ್ಕೆ ಪಡೆದರು. ವಿಚಾರಣೆ ವೇಳೆ ಇವರ ಬಲಾತ್ಕಾರ ಹಾಗೂ ಹಣ ದಂಧೆಯ ಬಗ್ಗೆ ಸತ್ಯ ಬಯಲಾಗಿದೆ.
ಇದೇ ತಂಡದವರು ಕೆ.ಆರ್.ನಗರದಲ್ಲೂ ಗ್ಯಾಸ್ ಅಂಗಡಿ ಮಾಲಿಕನಿಂದ 20 ಸಾವಿರ ರೂಪಾಯಿ ವಸೂಲಿಸಿದ್ದಾಗಿ ತಿಳಿದುಬಂದಿದೆ. ಈ ಹಿಂದೆ ಚಾಮರಾಜನಗರ ಹಾಗೂ ಬೆಂಗಳೂರಿನಲ್ಲಿ ಕೂಡ ಇವರ ವಿರುದ್ಧ ಪ್ರಕರಣ ದಾಖಲಾಗಿದೆ. ಈಗಾಗಿ ಪೊಲೀಸ್ ಇಲಾಖೆ ಇವರ ಮೇಲೂ ಗಂಭೀರ ತನಿಖೆ ಆರಂಭಿಸಿದೆ.