ಬೆಂಗಳೂರು: ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, “ನಾನು ಆರೋಗ್ಯದಿಂದ ಗಟ್ಟಿಮುಟ್ಟಾಗಿದ್ದೇನೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ,” ಎಂದು ಸ್ಪಷ್ಟಪಡಿಸಿದರು. ಬೆಂಗಳೂರು ಜೆ.ಪಿ.ಭವನದಲ್ಲಿ ನಡೆದ ಮಿಸ್ಡ್ ಕಾಲ್ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದಿನ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
“ನಾನು ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆ ಹಾಗೂ ಎರಡು ಬಾರಿ ಸ್ಟ್ರೋಕ್ ಅನುಭವಿಸಿದ್ದೇನೆ. ಆದರೆ ಭಗವಂತನ ಆಶೀರ್ವಾದದಿಂದ ಇನ್ನೂ ಹೋರಾಡುತ್ತೇನೆ. ಜನರಿಗಾಗಿ ಬದುಕು ಇರುತ್ತದೆ. ಈ ಬಾರಿ ಜನತಾದಳ ಮತ್ತೆ ಅಧಿಕಾರಕ್ಕೆ ಬರುತ್ತದೆ. ಬಿಜೆಪಿ ಜೊತೆಗಿನ ಮೈತ್ರಿ ಗಟ್ಟಿ ಆಗಿದೆ,” ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ಜೆಡಿಎಸ್ ಮುಗಿದಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತೀವ್ರ ವಾಗ್ದಾಳಿ ನಡೆಸಿದ ಅವರು, “ಸರ್ಕಾರ ಮುಖ್ಯಮಂತ್ರಿಯವರು ನಮ್ಮ ಕಡೆ ಬನ್ನಿ ಎಂದು ಹೇಳುತ್ತಾರೆ. ಆದರೆ ಇಲ್ಲಿ ಜನಸಾಗರ ನೋಡಿ, ಜನರ ಉತ್ತರ ಅವರಿಗೆ ಸಿಕ್ಕಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಗೊಂದಲವೇ ಇಲ್ಲ,” ಎಂದರು. ಕ್ಷೇತ್ರ ಬಲವರ್ಧನೆ ನನ್ನ ಜವಾಬ್ದಾರಿ ಎಂದೂ ಅವರು ಹೇಳಿದರು.
ಪಕ್ಷ ಸಂಘಟನೆ ಬಗ್ಗೆ ಮಾತನಾಡಿದ ಅವರು, “ನಾನೇನು ನಿಖಿಲ್ಗೆ ಸಂಘಟನೆ ಮಾಡು ಎಂದು ಹೇಳಿಲ್ಲ. ಆದರೂ ಯುವ ಘಟಕದ ರಾಜ್ಯಾಧ್ಯಕ್ಷನಾಗಿ ನಿಖಿಲ್ ತಮ್ಮ ಶ್ರಮದಿಂದ ಪಕ್ಷ ಕಟ್ಟುತ್ತಿದ್ದಾರೆ. ಈಗ ತಮ್ಮ ಕ್ಷೇತ್ರಗಳಿಗೆ ಅವರು ತಾವೇ ಬರುತ್ತಿದ್ದಾರೆ,” ಎಂದರು.
ಕಾಂಗ್ರೆಸ್ ನಾಯಕರ ಮೇಲೆ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, “ಡಿಕೆಶಿ ಅಥವಾ ಸಿದ್ದರಾಮಯ್ಯನ ಮನೆ ಮುಂದೆ ಬಡವರು ಹೋಗಲ್ಲ. ಆದರೆ ನನ್ನ ಮನೆಗೆ ಆಸ್ಪತ್ರೆ, ಉದ್ಯೋಗಕ್ಕಾಗಿ ಜನ ಬರುತ್ತಾರೆ. ನಾವೇ ನಿಜವಾದ ಜನಪಕ್ಷ,” ಎಂದರು.
ಕಾವೇರಿ ಆರತಿಗೆ 92 ಕೋಟಿ ರೂಪಾಯಿ ಖರ್ಚು ಮಾಡುವ ಈ ಸರ್ಕಾರ ಜನದ್ರೋಹಿ ಎಂದು ಕಿಡಿಕಾರಿದ ಅವರು, “ಇವರು ಸಾಯಿಲೇಔಟ್ ನೋಡಲಿ, ಬೆಂಗಳೂರನ್ನು ಸಿಂಗಾಪುರ ಮಾಡೋಕೆ ಇಲ್ಲ ಅಂತ ಗೊತ್ತಾಗುತ್ತೆ,” ಎಂದು ಟೀಕಿಸಿದರು. “ವಿಧಾನಸೌಧದಲ್ಲಿದ್ದರೆ ಚೆನ್ನಾಗಿತ್ತು, ಆದರೆ ಕೇಂದ್ರದಲ್ಲಿಯೂ ಜನರ ಹಿತಕ್ಕಾಗಿ ಹೋರಾಡುತ್ತೇನೆ,” ಎಂದರು.