ಮಂಡ್ಯ : ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಶ್ಚೇತನಕ್ಕೆ ನಾನು ಕೆಲಸ ಮಾಡುತ್ತಿದ್ದೇನೆ. ಆರಂಭಿಕ ಹಂತದಲ್ಲಿ ಕನಿಷ್ಠ 5,000 ಕೋಟಿ ರೂ. ಆದರೂ ಈ ಕಾರ್ಖಾನೆಗೆ ಹೂಡಿಕೆ ಮಾಡಲಾಗುವುದು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ನಡೆದ ವಿಜ್ಞಾತಂ ಉತ್ಸವ ಸಮಾರಂಭದಲ್ಲಿ ಖ್ಯಾತ ವಿಜ್ಞಾನಿ ಡಾ.ಎಂ.ಕೆ. ಸೂರಪ್ಪ ಅವರಿಗೆ ಶ್ರೀ ಆದಿಚುಂಚನಗಿರಿ ಕ್ಷೇತ್ರದಿಂದ ವಿಜ್ಞಾತಂ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಉಕ್ಕು ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ದೃಢವಾಗಿ ದುಡಿಮೆ ಮಾಡುತ್ತಿದ್ದೇನೆ. ಕಾರ್ಖಾನೆ ಪುನಶ್ಚೇತನಕ್ಕೆ ಸಂಬಂಧಿಸಿ ಅನೇಕ ರೀತಿಯ ತಾಂತ್ರಿಕ ಚರ್ಚೆಗಳು ಹಾಗೂ ಡಿಪಿಆರ್ (ವಿಸ್ತೃತ ಯೋಜನಾ ವರದಿ) ಕೆಲಸ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಎಚ್ಎಂಟಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಯೋಜನೆಯಿದೆ ಎಂದರು.
ಅಲ್ಲದೆ, ನಾನು ಪ್ರತಿನಿಧಿಸುವ ಮಂಡ್ಯ ಜಿಲ್ಲೆಯಲ್ಲಿ 2 ಕಾರ್ಖಾನೆಗಳನ್ನು ಸ್ಥಾಪಿಸಿ, ಜಿಲ್ಲೆಯ ಜನರ ಋಣ ತೀರಿಸುತ್ತೇನೆ ಎಂದರಲ್ಲದೆ, ಮಂಡ್ಯ ಜಿಲ್ಲೆಯು ಮತ್ತಷ್ಟು ಅಭಿವೃದ್ಧಿ ಹೊಂದಬೇಕಾಗಿದ್ದು, ಒಂದು ಸಾವಿರ ಕೋಟಿ ವೆಚ್ಚದಲ್ಲಿ ಕನಿಷ್ಠ ಎರಡು ಕೈಗಾರಿಕೆಗಳನ್ನು ತರಲು ತೀರ್ಮಾನಿಸಿದ್ದೇನೆ. ಶ್ರೀ ಕಾಲಭೈರವನ ಈ ಸನ್ನಿಧಿಯಲ್ಲಿ ನಿಂತು ಧೈರ್ಯದಿಂದ ಹೇಳುತ್ತಿದ್ದೇನೆ. ಹೇಳಿದ ಕೆಲಸವನ್ನು ತಪ್ಪದೇ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇನ್ನೂ ಜಿಲ್ಲೆಯ ಜನರ ಆಶೀರ್ವಾದ ನನ್ನ ಮೇಲಿದೆ. ಯಾವುದೇ ಕಾರಣಕ್ಕೂ ದ್ರೋಹ ಬಗೆಯದೆ ಕೆಲಸ ಮಾಡುತ್ತೇನೆ. ನನ್ನ ಕೆಲಸಗಳ ಬಗ್ಗೆ ಜಾಹೀರಾತು ಹಾಕಿಸಿ ಪ್ರಯೋಜನ ಪಡೆಯಲು ಬಯಸುವುದಿಲ್ಲ. ನನ್ನ ಕೆಲಸವನ್ನು ದೇವರು ನೋಡುತ್ತಾನೆ. ಭದ್ರಾವತಿ ಉಕ್ಕು ಕಾರ್ಖಾನೆ, ಎಚ್ಎಂಟಿ ಕಾರ್ಖಾನೆ ಶೀಘ್ರದಲ್ಲಿ ಪುನಶ್ಚೇತನಗೊಳಿಸಲಾಗುವುದು ಎಂದು ವಿಶ್ವಾಶ ವ್ಯಕ್ತಪಡಿಸಿದರು.



