ದುಬೈ : ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಹೊರಗೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾ ಕ್ರಿಕೆಟ್ ಮಂಡಳಿಯ ಮನವಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿರಸ್ಕರಿಸಿದ್ದು, ಎರಡೂ ಸಂಸ್ಥೆಗಳ ನಡುವಿನ ವರ್ಚುವಲ್ ಸಭೆಯಲ್ಲಿ ಈ ನಿರ್ಧಾರವನ್ನು ತಿಳಿಸಲಾಗಿದೆ.
ಬಾಂಗ್ಲಾದೇಶ ಟೂರ್ನಮೆಂಟ್ಗಾಗಿ ಭಾರತಕ್ಕೆ ಪ್ರಯಾಣಿಸಬೇಕಾಗುತ್ತದೆ ಅಥವಾ ಅಂಕಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಐಸಿಸಿ ಸ್ಪಷ್ಟಪಡಿಸಿದ್ದು ಹಾಗೂ ಬಾಂಗ್ಲಾ ವೇಗಿ ಮುಸ್ತಾಫಿಜುರ್ ರಹಮಾನ್ರನ್ನು ಮುಂಬರುವ ಐಪಿಎಲ್ನಿಂದ ಹೊರಹಾಕಿದ್ದಕ್ಕೆ ಭಾರತ ವಿರುದ್ಧ ಆಕ್ರೋಶಗೊಂಡಿರುವ ಬಾಂಗ್ಲಾ, ಸುರಕ್ಷತೆ ಮತ್ತು ಭದ್ರತೆಯ ಕಾರಣ ನೀಡಿ ವಿಶ್ವಕಪ್ ಪಂದ್ಯಾವಳಿ ಆಡಲು ಭಾರತಕ್ಕೆ ಪ್ರಯಾಣಿಸುವುದಿಲ್ಲ ಎನ್ನಲಾಗಿದ್ದು, ತನ್ನ ಪಂದ್ಯಗಳನ್ನು ವಿಶ್ವಕಪ್ಗೆ ಜಂಟಿ ಆತಿಥ್ಯ ವಹಿಸಿಕೊಂಡಿರುವ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಕಳೆದ ಭಾನುವಾರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ಬಿಸಿಬಿ ಮನವಿ ಸಲ್ಲಿಸಿತ್ತು. ಆದರೆ ಬಾಂಗ್ಲಾದ ಈ ಮನವಿಯನ್ನು ಐಸಿಸಿ ತಿರಸ್ಕರಿಸಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಐಸಿಸಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ, ಟೂರ್ನಮೆಂಟ್ ವೇಳಾಪಟ್ಟಿ ಮತ್ತು ಸ್ಥಳಗಳು ಯಾವುದೇ ಕಳವಳಗಳನ್ನು ವ್ಯಕ್ತಪಡಿಸಿದ್ದರೂ ಬದಲಾಗದೆ ಉಳಿಯುತ್ತವೆ ಎಂದು ತಿಳಿಸಿದೆ.
ಭಾರತದಲ್ಲಿ ಪಂದ್ಯಗಳನ್ನು ಆಡಲು ನಿರಾಕರಿಸುವುದರಿಂದ ಅಂಕಗಳನ್ನು ಕಳೆದುಕೊಳ್ಳುವ ಸಾಧ್ಯತೆ ಸೇರಿದಂತೆ ಕ್ರೀಡಾ ಪರಿಣಾಮಗಳು ಉಂಟಾಗುತ್ತವೆ ಎಂದು ಜಾಗತಿಕ ಸಂಸ್ಥೆ ಬಿಸಿಬಿಗೆ ತಿಳಿಸಿದೆ ಎಂದು ತಿಳಿದುಬಂದಿದೆ.
ಆದಾಗೀಯೂ, ನಿರಾಕರಣೆಯನ್ನು ದೃಢೀಕರಿಸುವ ಯಾವುದೇ ಅಧಿಕೃತ ಸಂವಹನವನ್ನು ಅವರು ಇನ್ನೂ ಸ್ವೀಕರಿಸಿಲ್ಲ ಎಂದು ಬಿಸಿಬಿ ಮೂಲಗಳು ಸಮರ್ಥಿಸಿಕೊಂಡಿದ್ದು, ಭಾರತಕ್ಕೆ ತಿರುಗೇಟು ನೀಡುವ ಸಲುವಾಗಿ ಬಾಂಗ್ಲಾದೇಶವು ಮುಂಬರುವ ಐಪಿಎಲ್ ಋತುವಿನ ಪ್ರಸಾರವನ್ನು ದೇಶದಲ್ಲಿ ನಿಷೇಧಿಸುವ ಕ್ರಮಗಳನ್ನು ತೆಗೆದುಕೊಂಡಿದೆ.
ಇದಕ್ಕೂ ಮೊದಲು ಇಂಡಿಯಾ ಟುಡೇ ಜತೆ ಮಾತನಾಡಿದ ಫಾರೂಕ್ ಅಹ್ಮದ್, ಎರಡು ಕ್ರಿಕೆಟ್ ಮಂಡಳಿಗಳ ನಡುವಿನ ಸಂಬಂಧವನ್ನು ಹದಗೆಡಿಸುವಲ್ಲಿ ರಾಜಕೀಯವು ಮಹತ್ವದ ಪಾತ್ರವಹಿಸಿದೆ ಎಂದು ಹೇಳಿದ್ದರು.



