ಮಂಗಳೂರು (ದಕ್ಷಿಣ ಕನ್ನಡ) : ಜಾನುವಾರು ಹತ್ಯೆ ಪ್ರಕರಣದ ಆರೋಪಿಯ ಮನೆ/ ಅಕ್ರಮ ಕಸಾಯಿಖಾನೆಯನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಜಪ್ತಿ ಮಾಡಿದ್ದಾರೆ.
ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಪುದು ಗ್ರಾಮದ ಮಾರಿಪಳ್ಳ ನಿವಾಸಿಯಾದ ಹಸನಬ್ಬ ಎಂಬಾತನು ಗೋ ಕಳವು , ಗೋವಧೆಯಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವ ಆಸಾಮಿಯಾಗಿದ್ದು ಈತನ ಮೇಲೆ ಠಾಣಾ ಅಕ್ರ 123/2025 ಕಲಂ 303 ಬಿಎನ್ ಎಸ್ ಕಲಂ 4,7,12 ಗೋಸಂರಕ್ಷಣಾ ಕಾಯಿದೆ ಮತ್ತು 11(ಡಿ) ಗೋಹತ್ಯೆ ನಿಷೇಧ ಕಾಯಿದೆಯಡಿ ದಾಖಲಾದ ಪ್ರಕರಣದಲ್ಲಿ ದಸ್ತಗಿರಿ ಮಾಡಿ ಮಾನ್ಯ ಎಸಿಜೆ ಮತ್ತು ಜೆಎಮ್ ಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಹಾಗೂ ಈತನ ವಿರುದ್ದ 2017 ನೇ ಸಾಲಿನಲ್ಲಿ ಅಕ್ರ 65/2017 ಕಲಂ 379 ಐಪಿಸಿ ಮತ್ತು 4,5,11 ಗೋಸಂರಕ್ಷಣಾ ಕಾಯಿದೆ ಮತ್ತು 11(ಎಲ್) ಗೋಹತ್ಯೆ ನಿಷೇಧ ಕಾಯಿದೆ , 2008 ನೇ ಸಾಲಿನಲ್ಲಿ ಅಕ್ರ 88/2018 ಕಲಂ 379 ಐಪಿಸಿ ಮತ್ತು 4,5,11 ಗೋಸಂರಕ್ಷಣಾ ಕಾಯಿದೆ ಮತ್ತು 11(ಎಲ್) ಗೋಹತ್ಯೆ ನಿಷೇಧ ಕಾಯಿದೆಯಂತೆ ಪ್ರಕರಣಗಳು ದಾಖಲಾಗಿರುತ್ತದೆ. ಹಾಗೂ ಈತನು ಗೋ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಕಳವು ಮಾಡಿ ತಂದಂತಹ ಜಾನುವಾರುಗಳನ್ನು ಯಾವುದೇ ಪರವಾನಿಗೆ ಇಲ್ಲದೇ ಮನೆಯಲ್ಲಿಯೇ ಕಸಾಯಿಖಾನೆ ನಿರ್ಮಾಣ ಮಾಡಿಕೊಂಡು ವಧೆ ಮಾಡಿ ಮಾಂಸ ಮಾಡುತ್ತಿದ್ದು ಈತನನ್ನು ನಿಯಂತ್ರಿಸಲು ಈತನು ಮನೆಯಲ್ಲಿಯೇ ಅಕ್ರಮವಾಗಿ ನಿರ್ಮಾಣ ಮಾಡಿರುವ ಕಸಾಯಿಖಾನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿ ಮಂಗಳೂರು ಉಪವಿಭಾಗರವರಿಗೆ ವರದಿಯನ್ನು ಸಲ್ಲಿಸಲಾಗಿತ್ತು.

ಅದರಂತೆ ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿ ಮಂಗಳೂರು ಉಪವಿಭಾಗರವರು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ರ ಕಲಂ 8(4) 8(5) ರಡಿಯಲ್ಲಿ ದಿನಾಂಕ: 25/09/2025 ರಂದು ಪ್ರಕರಣ ಸಂಖ್ಯೆ ಎಂ.ಎ.ಜಿ/ಎಸ್ ಆರ್ .44/2025 ರಂತೆ ಠಾಣಾ ಅಕ್ರ 123/2025 ನೇ ದರಂತೆ ಹಸನಬ್ಬ ಈತನ ವಶದಲ್ಲಿರುವ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರಿಪಳ್ಳ ಪಾಡಿ ಎಂಬಲ್ಲಿರುವ ಮನೆನಂಬ್ರ 6-54 ಹಾಗೂ 6-54(1) ದ ಮನೆಯನ್ನು / ಅಕ್ರಮ ಕಸಾಯಿ ಕಾಣೆಯನ್ನು ಜಪ್ತು ಮಾಡಿ ಸರಕಾರದ ವಶಕ್ಕೆ ಪಡೆಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹ ಪ್ರಕರಣದಲ್ಲಿ ಮನೆ/ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಮಾಡಿರುವುದು ಇದು ಮೊದಲನೆಯದಾಗಿದೆ.