ಮೈಸೂರು: ಸ್ವಾತಂತ್ರ್ಯ ದಿನಾಚರಣೆ ಧರ್ಮ, ಜಾತಿ, ಭೇದವನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಆಚರಿಸುವ, ಸಂಭ್ರಮಿಸುವ ಹಬ್ಬವಾಗಿದೆ ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್. ಪ್ರಭಾ ಅರಸ್ ತಿಳಿಸಿದರು.
ಮೈಸೂರಿನ ಟ್ರಜ಼ರಿ ಬಡಾವಣೆಯಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ನಡೆದ ೭೯ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಬಂದು ೭೯ ವರ್ಷಗಳಲ್ಲಿ ಭಾರತ ವಿಶ್ವದಲ್ಲಿಯೇ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ. ದೇಶ, ಗಡಿ ವಿಚಾರ ಬಂದಾಗ ನಾವೆಲ್ಲರೂ ಒಂದೇ. ಅಂದು ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆಯಲು ಲಕ್ಷಾಂತರ ಜನರು, ಹೋರಾಟ ಮಾಡಿ ಪ್ರಾಣವನ್ನೇ ಕಳೆದುಕೊಂಡು ಹುತಾತ್ಮರಾಗಿದ್ದಾರೆ. ಅವರ ಸ್ಮರಣೆಯನ್ನು ನಾವು ಇಂದು ಮಾಡಬೇಕಾಗಿದೆ ಎಂದ ಅವರು ಎಲ್ಲರಿಗೂ ೭೯ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ತಿಳಿಸಿದರು.
ಆದಿವಾಸಿ ಅಧ್ಯಯನ ಕೇಂದ್ರದ ಮುಖ್ಯಸ್ಥರಾದ ಕೃಷ್ಣಮೂರ್ತಿ ಮಾತನಾಡಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಆದಿವಾಸಿಗಳಿಂದ ಪ್ರಾರಂಭವಾಗಿ ದೇಶಾದ್ಯಂತ ನಾಗರೀಕರಿಂದ ಹಿಡಿದು ಅನೇಕ ಮಹನೀಯರು ಹೋರಾಟ ಗೌರವ ಶ್ರಮದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ ಎಂದರು.
ಈ ಸಂದರ್ಭದಲ್ಲಿ ಲೆಕ್ಕಾಧಿಕಾರಿ ಬಿ.ಆರ್. ಭವ್ಯ, ಡಾ. ಮೋಹನ್, ಡಾ. ರವೀಶ್ಗಣಿ, ಗುಣಧರ್, ಡಾ. ರವಿಕುಮಾರ್, ಡಾ. ಮಂಜುನಾಥ್, ಹೇಮಚಂದ್ರ ಹಾಗೂ ಸಿಬ್ಬಂದಿ ಹಾಜರಿದ್ದರು.