ನವದೆಹಲಿ: ಲೋಕಸಭೆ ಚುನಾವಣೆಯ ಜನಾದೇಶವು ವಿಭಜನೆ ಮತ್ತು ದ್ವೇಷ ರಾಜಕೀಯವನ್ನು ನಿರ್ಣಾಯಕವಾಗಿ ನಿರಾಕರಿಸಿದೆ. ಇಂಡಿಯಾ ಮೈತ್ರಿಕೂಟವು ಸಂತ್ತಿನ ಒಳಗೆ ಮತ್ತು ಹೊರಗೆ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಶನಿವಾರ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಅವರು ಮಾತನಾಡಿದರು. ಪಕ್ಷವು ತನ್ನ ಪ್ರಬಲ್ಯವನ್ನು ಪಡೆಯಲು ಮರಳುತ್ತಿದೆ. ಆದರೂ, ಕೆಲವು ರಾಜ್ಯಗಳಲ್ಲಿ ತನ್ನ ಸಾಮರ್ಥ್ಯ ಮತ್ತು ನಿರೀಕ್ಷೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗಿಲ್ಲ. ಅಲ್ಲದೆ, ನಾವು ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಸರ್ಕಾರ ರಚಿಸಿದ್ದ ರಾಜ್ಯಗಳಲ್ಲಿಯೂ ಲೋಕಸಭಾ ಚುನಾವಣೆಯಲ್ಲಿ ಎಡವಿದ್ದೇವೆ? ಎಂದು ಪರಾಮರ್ಶೆ ಮಾಡಿದ್ದಾರೆ.
ಅಂತಹ ಪ್ರತಿಯೊಂದು ರಾಜ್ಯಗಳ ಬಗ್ಗೆ ಪ್ರತ್ಯೇಕ ಚರ್ಚೆಗಳನ್ನು ಶೀಘ್ರದಲ್ಲೇ ನಡೆಸಲಾಗುವುದು. ನಾವು ತುರ್ತು ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಆ ರಾಜ್ಯಗಳಲ್ಲಿ ನಮಗೆ ಅವಕಾಶಗಳಿವೆ. ಅದನ್ನು ನಾವು ನಮ್ಮ ಸ್ವಂತ ಲಾಭಕ್ಕಾಗಿ ಬಳಸದೆ, ಜನರ ಅನುಕೂಲಕ್ಕಾಗಿ ಬಳಸಿಕೊಳ್ಳಬೇಕು. ಎಲ್ಲ ರಾಜ್ಯಗಳಲ್ಲಿ ಚರ್ಚೆಗಳನ್ನು ನಾನು ಶೀಘ್ರದಲ್ಲೇ ನಡೆಸಲು ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.
ಪಕ್ಷ ಅಧಿಕಾರದಲ್ಲಿದ್ದರೂ ಇಲ್ಲದಿದ್ದರೂ ಜನರ ನಡುವೆ ೨೪ ಗಂಟೆ ೩೬೫ ದಿನವೂ ಕೆಲಸ ಮಾಡಬೇಕು. ಆಡಳಿತ ಪಕ್ಷದ ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವ ವಿರೋಧಿ ಧೋರಣೆಯ ಬಗ್ಗೆ ಜನರ ಮಾತನಾಡುತ್ತಿದ್ದಾರೆ. ಇದು ಕಳೆದ ೧೦ ವರ್ಷಗಳ ರಾಜಕೀಯದ ನಿರ್ಣಾಯಕ ನಿರಾಕರಣೆಯಾಗಿದೆ. ನಾವು ಜನರ ದನಿಯಾಗಿ ಮುಂದುವರೆಯಬೇಕು ಎಂದರು.
ಮಹಾರಾಷ್ಟ್ರದಲ್ಲಿ ನಾವು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇವೆ. ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ಸಮಾಜದ ಎಲ್ಲ ವರ್ಗಗಳ ಜನರು ಕಾಂಗ್ರೆಸ್ಅನ್ನು ಬೆಂಬಲಿಸಿದ್ದಾರೆ ಎಂದು ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.