ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರು ಹಳೆಯ ಸೇತುವೆ ಮೂಲಕ ಘನ ವಾಹನಗಳ ಸಂಚಾರ ನಿಷೇಧ ಹೇರಿ ಹಾಕಲಾಗಿದ್ದ ಕಬ್ಬಿಣದ ಕಮಾನ್ ನೊಳಗೆ ಪಿಕಪ್ ವಾಹನವೊಂದು ಸಿಲುಕಿಕೊಂಡ ಘಟನೆ ಇಂದು ನಡೆದಿದೆ. ಪಾಣೆಮಂಗಳೂರು ಉಕ್ಕಿನ ಸೇತುವೆ ಉಳಿಸುವ ಮತ್ತು ದುರ್ಬಲ ಸೇತುವೆ ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ನಿಷೇಧವನ್ನು ಜಿಲ್ಲಾಡಳಿತ ಅದೇಶ ಹೊರಡಿಸಿ, ಸುಮಾರು ವರ್ಷಗಳ ಬಳಿಕ ಸೇತುವೆಯ ಎರಡು ಭಾಗಗಳಲ್ಲಿ ಕಬ್ಬಿಣದ ಕಮಾನ್ ಆಳವಡಿಸಲಾಗಿತ್ತು.
ಅದಾದ ಬಳಿಕ ಕಬ್ಬಿಣದ ಕಮಾನ್ ಗಳನ್ನು ಮರಳು ವಾಹನ ಸಾಗಾಟ ಮಾಡುವ ವಾಹನಗಳು ತೆಗೆದು ಸಂಚಾರ ಮಾಡುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆ, ಅತ್ಯಂತ ಹೆಚ್ಚು ತೂಕದ ಕಬ್ಬಿಣದ ಕಂಬಗಳನ್ನು ಅಳವಡಿಸಿ ಅದರ ಮೇಲೆ ಅಷ್ಟೇ ತೂಕದ ಕಮಾನ್ ಗಳನ್ನು ಹಾಕಲಾಗಿತ್ತು.
ಆದರೆ ಕೆಲ ತಿಂಗಳ ಹಿಂದೆ ಬಿಸಿರೋಡಿನಿಂದ ಅತೀ ವೇಗದಿಂದ ಬಂದ ಮಸಾಲೆ ಲೈನ್ ಸೇಲ್ ವಾಹನವೊಂದು ಇದರಲ್ಲಿ ಸಿಲುಕಿಕೊಂಡಿತ್ತು. ಸಿಲುಕಿಕೊಂಡ ವಾಹನವನ್ನು ಹರಸಾಹಸ ಪಟ್ಟು ತೆಗೆಯಲಾಗಿತ್ತು.ಮತ್ತು ಕಮಾನ್ ಅರ್ಧ ವೃತ್ತಾಕಾರದಲ್ಲಿ ವಾಲಿಕೊಂಡಿತ್ತು.
ಇದೀಗ ಅದೇ ರೀತಿ ಮೀನು ಸಾಗಾಟದ ಪಿಕಪ್ ವಾಹನವೊಂದು ಬಂದು ಗುದ್ದಿದ ರಭಸಕ್ಕೆ ಘನಗಾತ್ರದ ಕಮಾನ್ ಉರುಳಿ ಕೆಳಗೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಘಟನೆಯಿಂದ ಒಂದು ಭಾಗದ ಕಮಾನ್ ತೆರವಾಗಿದೆ.