ಮೈಸೂರು : ದೇವರ ದೃಷ್ಟಿಯಲ್ಲಿ ಯಾವುದೇ ಧರ್ಮ, ಜಾತಿ ಭೇದಭಾವ ಇರುವುದಿಲ್ಲ, ಇದನ್ನೆಲ್ಲ ನಾವು ಮನುಷ್ಯರು ಸೃಷ್ಟಿ ಮಾಡಿಕೊಂಡಿದ್ದು. ಮನುಷ್ಯ ಮನುಷ್ಯನನ್ನು ದ್ವೇಷಿಸುವಂತಹ ಸ್ಥಿತಿ ಬಂದೊದಗಿದ್ದು, ಇದನ್ನು ಮೆಟ್ಟಿ ನಿಂತು ಎಲ್ಲರನ್ನು ಪ್ರೀತಿಸಿ, ಸಹಬಾಳ್ಮೆಯಿಂದ ಬಾಳುವ ವ್ಯವಸ್ಥೆ ಜಾರಿಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಹೆಚ್ ಡಿ ಕೋಟೆ ತಾಲ್ಲೂಕಿನ ಶಿರಮಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ನಿರ್ಮಿಸಿರುವ ಲಕ್ಷ್ಮಿದೇವಿ ಅಮ್ಮನವರ ದೇವಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಧರ್ಮ, ವರ್ಗ ತೊಲಗಿ ಮನುಷ್ಯ ಮನುಷ್ಯರನ್ನು ಪ್ರೀತಿಸಿದಾಗ ಮಾತ್ರ ಸಮಾನ ಸಮಾಜ ನಿರ್ಮಾಣ ಸಾಧ್ಯ ಎಂದರು.
ದೇವರು ದೇವಾಲಯಕ್ಕೆ ಸೀಮಿತವಾಗಿರುವುದಿಲ್ಲ, ಎಲ್ಲಾ ಕಡೆ ಇರುವ ದೇವರನ್ನು ನಾನು ನಂಬುತ್ತೇನೆ, ದೇವಾಲಯದಲ್ಲಿ ಮಾತ್ರ ದೇವರು ಇದ್ದಾನೆ ಎಂದು ನಾನು ನಂಬಿಲ್ಲ, ಪ್ರತಿಯೊಂದು ಕೆಲಸ ಆರಂಭಿಸುವಾಗ ನಾವು ದೇವರನ್ನು ನೆನೆಯುತ್ತೇವೆ, ಎಲ್ಲರಿಗೂ ಒಳಿತನ್ನು ಮಾಡುವಂತೆ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.
ಪ್ರೀತಿಯಿಂದ ಕಾಣುವ ಗ್ರಾಮ ಶಿರಮಳ್ಳಿ, ಈ ಗ್ರಾಮದ ಜನರು ನಾನು ಹೇಳಿದಂತೆ ಕೇಳುವ ಜನರಾಗಿದ್ದೀರಿ, ನಾನು ಯಾವ ಪಕ್ಷಕ್ಕೆ ಹೋದರೂ ನನ್ನನ್ನೇ ಬೆಂಬಲಿಸಿದ್ದಾರೆ, ಇಂತಹವರ ಬೆಂಬಲದಿಂದ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದೇನೆ, ಅಲ್ಲದೇ ಹೆಚ್ಚು ಬಾರಿ ಆಯವ್ಯಯ ಮಂಡಿಸಲು ಸಹ ನೀವೇ ಕಾರಣ ಎಂದರು.
ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ :
ಶಾಸಕ ಅನಿಲ್ ಚಿಕ್ಕಮಾದು ಈ ತಾಲ್ಲೂಕಿಗೆ ಏನೇ ಅಭಿವೃದ್ಧಿ ಕೆಲಸ ಕೇಳಿದರೂ ಸಹ ನಾನು ಮಂಜೂರು ಮಾಡುತ್ತೇನೆ, ಕ್ಷೇತ್ರದ ಅಭಿವೃದ್ಧಿಗೆ ನಾನೂ ಸಹ ಪಣತೊಡಲಿದ್ದೇನೆ ಎಂದರು.
ಶಾಸಕ ಅನಿಲ್ ಚಿಕ್ಕಮಾದು, ನಾನು ಶಾಸಕನಾಗಲು ಪ್ರಮುಖವಾಗಿ ಧೃವನಾರಾಯಣ್, ಸಿದ್ದರಾಮಯ್ಯ ಮತ್ತು ನನ್ನ ತಂದೆ ಚಿಕ್ಕಮಾದುರವರೇ ಕಾರಣ. ತಾಲ್ಲೂಕು ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಕಾರ್ಮಿಕ ಇಲಾಖೆಯ ಹಾಸ್ಟೆಲ್ ನ್ನು ತಾಲ್ಲೂಕಿಗೆ ಬಜೆಟ್ ನಲ್ಲಿ ಮಂಜೂರು ಮಾಡಿದ್ದು ಸುಮಾರು 35 ಕೋಟಿ ಹಣ ಬಿಡುಗಡೆ ಮಾಡಿದ್ದಾರೆ ಎಂದರು.



