ಚಾಮರಾಜನಗರ: ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂಥ್ ಕ್ಲಬ್ ವತಿಯಿಂದ ನಗರದ ಜೈ ಹಿಂದ್ ಕಟ್ಟೆಯಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸುವ ಮೂಲಕ ಭಾರತದ ಸಹಸ್ರಾರು ವಿಜ್ಞಾನಿಗಳಿಗೆ ಅಭಿನಂದನೆಗಳನ್ನು ಹಾಗೂ ಧನ್ಯವಾದಗಳನ್ನು ರಾಷ್ಟ್ರ ಘೋಷಣೆಯಾದ ಜೈ ಹಿಂದ್ ಘೋಷಣೆಯ ಮೂಲಕ ಸಮರ್ಪಿಸಲಾಯಿತು.
ರಾಷ್ಟ್ರೀಯ ಬಾಹ್ಯಾಕಾಶ ದಿನದ ಮಹತ್ವದ ಕುರಿತು ಮಾತನಾಡಿದ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು, ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಎನ್ ಋಗ್ವೇದಿ ಆಗಸ್ಟ್ 23 , 2024 ರಂದು ಭಾರತದ ಹೆಮ್ಮೆಯ ಪ್ರಧಾನಿಗಳಾದ ನರೇಂದ್ರ ಮೋದಿಯವರು ಭಾರತದಲ್ಲಿ ಬಾಹ್ಯಾಕಾಶ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಮತ್ತು ಪ್ರೋತ್ಸಾಹ ದೃಷ್ಟಿಯಿಂದ ಚಂದ್ರಯಾನ ವಿಕ್ರಂ ಯಶಸ್ವಿಯಾದ ಹಿನ್ನೆಲೆಯಲ್ಲಿ ಆಗಸ್ಟ್ 23 ರನ್ನು ಭಾರತೀಯರ ಬಾಹ್ಯಾಕಾಶ ದಿನವನ್ನಾಗಿ ಆಚರಿಸುವ ಕರೆಯನ್ನು ನೀಡಿದರು. ದೇಶದ ಯುವಕರು ಮತ್ತು ವಿದ್ಯಾರ್ಥಿಗಳು ಬಾಹ್ಯಾಕಾಶ ತಂತ್ರಜ್ಞಾನದ ವಿಶೇಷ ಅಧ್ಯಯನ ಹಾಗೂ ಸಂಶೋಧನೆಗಳ ಮೂಲಕ ಇಡೀ ಪ್ರಪಂಚಕ್ಕೆ ಬೃಹತ್ ಅಭಿವೃದ್ಧಿಯ ದೃಷ್ಟಿಕೋನದ ಜ್ಞಾನದ ಬೆಳಕನ್ನು ವಿಶ್ವಕ್ಕೆ ಹರಡಬೇಕಾಗಿದೆ.
ಭಾರತವನ್ನು ಜಗದ್ಗುರುವಾಗಿ ರೂಪಿಸಲು ಬಾಹ್ಯಾಕಾಶ ತಂತ್ರಜ್ಞಾನ ಮತ್ತಷ್ಟು ಸಹಕಾರಿಯಾಗಲಿದೆ. ದೇಶದ ಯುವಕರು ವಿದ್ಯಾರ್ಥಿಗಳು ಬಾಹ್ಯಾಕಾಶದ ಬಗ್ಗೆ ವಿಶೇಷ ಕುತೂಹಲ ,ಆಸಕ್ತಿ ಹಾಗೂ ಜ್ಞಾನದ ಅರಿವನ್ನು ಹೆಚ್ಚಿಸಿಕೊಳ್ಳಬೇಕು. ತಮ್ಮ ವ್ಯಾಸಂಗದ ಸಂದರ್ಭದಲ್ಲಿ ವಿಜ್ಞಾನದ ಮಹತ್ವದ ಬಗ್ಗೆ ಪರಿಣಾಮಕಾರಿಯಾಗಿ ಅರ್ಥಮಾಡಿಕೊಳ್ಳುವ ಮೂಲಕ ರಾಷ್ಟ್ರವನ್ನು ಮುನ್ನಡೆಸೋಣ. ವಿಜ್ಞಾನ ,ತಂತ್ರಜ್ಞಾನ, ಧರ್ಮ ಸಂಸ್ಕೃತಿ ,ಪರಂಪರೆಯ ಭಾರತ ದೇಶಕ್ಕೆ ಮತ್ತಷ್ಟು ಶಕ್ತಿಯುತವಾದ ದೃಢವಾದ ಬಲವನ್ನು ಯುವಶಕ್ತಿ ನೀಡೋಣ . ರಾಷ್ಟ್ರಪ್ರಜ್ಞೆಯೊಂದೇ ಇವೆಲ್ಲದಕ್ಕೂ ಪರಿಹಾರವಾಗಲಿದೆ. ರಾಷ್ಟ್ರೀಯ ಚಿಂತನೆ, ರಾಷ್ಟ್ರೀಯ ಪ್ರಜ್ಞೆ, ಭಾರತದ ಬಗ್ಗೆ ವಿಶೇಷವಾದ ಗೌರವವನ್ನು ಬೆಳೆಸಿಕೊಳ್ಳುವ ಮೂಲಕ ವಿಜ್ಞಾನದ ಬೆಳವಣಿಗೆಗೆ ಸಹಕಾರಿಯಾಗೋಣ. ಬಾಹ್ಯಾಕಾಶ ಕ್ಷೇತ್ರದಲ್ಲಿ, ವಿಜ್ಞಾನ ಕ್ಷೇತ್ರದಲ್ಲಿ ಹಗಲಿರುಳು ದುಡಿಯುತ್ತಿರುವ ಸಾವಿರಾರು ವಿಜ್ಞಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸೋಣ ಎಂದರು.
ಕಾರ್ಯಕ್ರಮದಲ್ಲಿ ಜೈ ಹಿಂದ್ ಪ್ರತಿಷ್ಠಾನದ ರವಿ, ಬಿಕೆ ಆರಾಧ್ಯ, ಶರಣ್ಯ, ಜಾನ್ಸಿ ಮಕ್ಕಳ ಪರಿಷತ್ತಿನ ಅಧ್ಯಕ್ಷರಾದ ಶ್ರಾವ್ಯಋಗ್ವೇದಿ ,ಸಿಂಚನ ರಘುನಾಥ್,ಸಾನಿಕ ರವಿ ನಂದಕುಮಾರ್ ಉಪಸ್ಥಿತರಿದ್ದರು.