ಹೊಸದಿಲ್ಲಿ : ದೆಹಲಿಯ ಪ್ರತಿಷ್ಠಿತ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಡರಂಗ ವಿದ್ಯಾರ್ಥಿ ಸಂಘಟನೆಗಳು ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಪ್ರತಿಸ್ಪರ್ಧಿ ಆರ್ಎಸ್ಎಸ್ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಗೆ ತೀವ್ರ ಮುಖಭಂಗವಾಗಿದೆ.
ಆಲ್ ಇಂಡಿಯಾ ಸ್ಟೂಡೆಂಟ್ ಅಸೋಸಿಯೇಶನ್ (ಎಐಎಸ್ಎ)ನ ಧನಂಜಯ್ ಅವರು ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ (ಜೆಎನ್ಯುಎಸ್ಯು)ದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಪ್ರತಿಸ್ಪರ್ಧಿ ಎಬಿವಿಪಿಯ ಉಮೇಶ್ ಚಂದ್ರ ಅಜ್ಮೀರಾ ಅವರಿಗಿಂತ ೯೨೨ ಹೆಚ್ಚುವರಿ ಮತಗಳನ್ನು ಪಡೆದಿದ್ದಾರೆ. ಧನಂಜಯ್ ಅವರು ಒಟ್ಟು ೨,೫೯೮ ಮತಗಳನ್ನು ಪಡೆದರೆ, ಉಮೇಶ್ ಚಂದ್ರ ಅಜ್ಮೀರಾ ಅವರು ೧,೬೭೬ ಮತಗಳನ್ನು ಗಳಿಸಿದ್ದಾರೆ. `ಯುನೈಟೆಡ್ ಲೆಫ್ಟ್’ ಎಂಬ ಒಕ್ಕೂಟದಡಿಯಲ್ಲಿ ಎಡ ವಿದ್ಯಾರ್ಥಿ ಸಂಘಟನೆಗಳು ಚುನಾವಣೆ ಎದುರಿಸಿದ್ದವು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ನ ಅವಿಜಿತ್ ಘೋಷ್ ಆಯ್ಕೆಯಾಗಿದ್ದಾರೆ.
ಅವಿಜಿತ್ ಅವರು ೨,೪೦೯ ಮತಗಳನ್ನು ಪಡೆದಿದ್ದು, ಪ್ರತಿಸ್ಪರ್ಧಿ ಎಬಿವಿಪಿಯ ದೀಪಿಕಾ ಶರ್ಮಾ ಕೇವಲ ೯೨೭ ಮತಗಳನ್ನು ಪಡೆದಿದ್ದಾರೆ. ಮತದಾನಕ್ಕೆ ಗಂಟೆಗಳ ಮೊದಲು ಎಸ್ಎಫ್ಐನ ಅಭ್ಯರ್ಥಿ ಅನರ್ಹಗೊಂಡ ನಂತರ ಯುನೈಟೆಡ್ ಲೆಫ್ಟ್ ಬೆಂಬಲಿಸಿದ ಬಿಎಪಿಎಸ್ಎ ಅಭ್ಯರ್ಥಿ ಪ್ರಿಯಾಂಶಿ ಆರ್ಯ ೨,೮೮೭ ಮತಗಳೊಂದಿಗೆ ಪ್ರಧಾನ ಕಾರ್ಯದರ್ಶಿ ಸ್ಥಾನವನ್ನು ಅಲಂಕರಿಸಿದ್ದಾರೆ. ಎಐಎಸ್ಎಫ್ನ ಎಂಡಿ ಸಾಜಿದ್ ೫೦೮ ಮತಗಳ ಅಂತರದಿಂದ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಸಾಜಿದ್ ೨,೫೭೪ ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಎಬಿವಿಪಿಯ ಗೋವಿಂದ ಡಾಂಗಿ ೨,೦೬೬ ಮತಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಚುನಾವಣೆಯಲ್ಲಿ ಗೆಲುವು ದಾಖಲಿಸುತ್ತಿದ್ದಂತೆ ಎಡ ರಂಗದ ವಿದ್ಯಾರ್ಥಿಗಳು ಮುಖಕ್ಕೆ ಕೆಂಪು ಬಣ್ಣ ಹಚ್ಚಿ, ಪರಸ್ಪರ ಕೆಂಪು ಗುಲಾಬಿ ವಿನಿಮಯ ಮಾಡಿಕೊಂಡು, `ಲಾಲ್ ಸಲಾಂ’ ಘೋಷಣೆ ಕೂಗುತ್ತಾ ಸಂಭ್ರಮಾಚರಣೆ ನಡೆಸಿದರು.
ಎಡರಂಗದಿಂದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಎಸ್ಎಫ್ಐನ ಸ್ವಾತಿಸಿಂಗ್ ನಾಮಪತ್ರ ಸಲ್ಲಿಸಿದ್ದರು. ಆದರೆ, ಮತದಾನಕ್ಕೂ ಕೆಲವೇ ಗಂಟೆಗಳ ಮುನ್ನ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ಈ ಹಿನ್ನೆಲೆ ಸ್ವಾತಿಸಿಂಗ್ ೩೨ ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು ನಾಲ್ಕು ವರ್ಷಗಳ ನಂತರ ಜೆಎನ್ಯು ವಿದ್ಯಾರ್ಥಿ ಸಂಘದ ಚುನಾವಣೆ ನಡೆದಿದೆ. ಈ ಬಾರಿ ಅತ್ಯಧಿಕ, ಅಂದರೆ ಶೇ. ೭೩ರಷ್ಟು ಮತದಾನವಾಗಿತ್ತು. ವಿವಿಯ ಸುಮಾರು ೭,೭೫೧ ವಿದ್ಯಾರ್ಥಿಗಳು ಮತದಾನ ಮಾಡಿದ್ದರು.