ಮಂಗಳೂರು (ದಕ್ಷಿಣ ಕನ್ನಡ): ಪತ್ರಿಕೋದ್ಯಮದ ಹೃದಯ ಬಡಿತವೇ ನಿರ್ಭೀತ ವರದಿಗಾರಿಕೆ. ನಿರ್ಭೀತ ವರದಿಗಾರಿಕೆ ಇಲ್ಲದ ಪತ್ರಿಕೋದ್ಯಮ ಅರ್ಥಹೀನ ಎಂದು ಮಂಗಳೂರು ಪೋಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಹೇಳಿದರು.
ಮಂಗಳೂರು ನಗರದ ಪ್ರೆಸ್ಕ್ಲಬ್ನಲ್ಲಿ ದಕ್ಷಿಣ ಕನ್ನಡ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ಪತ್ರಕರ್ತ ವಿಜಯ ಕೋಟ್ಯಾನ್ರಿಗೆ ಪ್ರಸಕ್ತ ಸಾಲಿನ ಬ್ರಾಂಡ್ ಮಂಗಳೂರು ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ರಷ್ಯಾದ ಪತ್ರಕರ್ತೆಯಾಗಿದ್ದ ಅನ್ನಾ ಪೋಲಿಟ್ಕೋವಸ್ಕಾಯರ ನಿರ್ಭೀತ ವರದಿಗಾರಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಸುಧೀರ್ ರೆಡ್ಡಿ, ಭಾರತದಲ್ಲಿಯೂ ಅಂತಹ ಪತ್ರಕರ್ತರಿದ್ದಾರೆ. ತಾವು ಮಾಡುವ ಕೆಲಸದಲ್ಲಿ ನೈಜ ಉದ್ದೇಶ ಇದ್ದಾಗ ಧೈರ್ಯ ತಾನಾಗಿಯೇ ಬರುತ್ತದೆ. ಯಾವುದಕ್ಕೂ ಭಯ ಪಡುವ ಅಗತ್ಯ ಇರುವುದಿಲ್ಲ ಎಂದು ಪತ್ರಕರ್ತರಿಗೆ ಕಿವಿಮಾತು ಹೇಳಿದರು.
ಬಹಳ ವರ್ಷಗಳ ಹಿಂದೆ ರುವಾಂಡದಲ್ಲಿ ನರಮೇಧ ನಡೆದಿತ್ತು. ಬಳಿಕ ಅಲ್ಲಿ ಸಮುದಾಯಗಳು ಪರಸ್ಪರ ಪ್ರತ್ಯೇಕಗೊಂಡಿದ್ದವು. ಒಬ್ಬರಿಗೊಬ್ಬರು ಮಾತುಕತೆಯೇ ಇರಲಿಲ್ಲ. ಆದರೆ ಅಲ್ಲಿನ ರೇಡಿಯೋ, ಮಾಧ್ಯಮ ಸುದ್ದಿಗಳು ಅಲ್ಲಿ ನಡೆಯುತ್ತಿದ್ದ ಒಳ್ಳೆಯತನವನ್ನು ಎತ್ತಿ ತೋರಿಸಿದವು. ನಿಧಾನಗತಿಯಲ್ಲಿ ಸಮುದಾಯಗಳ ನಡುವಿನ ಅನುಮಾನ ದೂರವಾಗಿ ಅಲ್ಲಿ ದುಷ್ಕರ್ಮಿಗಳನ್ನು ಬೇರ್ಪಡಿಸುವ ಕಾರ್ಯ ಆಗಿದೆ. ಅದೇ ಪ್ರಯತ್ನ ಇಲ್ಲಿಯೂ ಮಾಡಬಹುದು. ಆ ಧೈರ್ಯ, ಬದ್ಧತೆ ನಮಗೆ ಬೇಕಾಗಿದೆ.
ಇಂತಹ ಪ್ರದೇಶದಲ್ಲಿ ನಾವು ಸಾಮಾನ್ಯವಾಗಿ ವರದಿಗಾರಿಕೆ ಮಾಡಬೇಕಾದರೆ ಏನು ಬೇಕು ಎಂಬುದನ್ನು ನಾವು ಅರಿಯಬೇಕು. ವರದಿಯನ್ನು ತಲುಪಿಸುವ ವೇಗಕ್ಕಿಂತ ನಿಖರತೆ ಮುಖ್ಯ. ಬಾಯಿಗೆ ಬಂದದ್ದನ್ನು ಹೇಳಿ ಬಿಟ್ಟು ಅದರಿಂದ ಇನ್ನೊಂದು ಅನ್ಯಾಯ ಆಗಲು ಅವಕಾಶ ನೀಡುವ ಬದಲು ಬರೆಯುವ ಸುದ್ದಿಯ ನಿಖರತೆ ಮುಖ್ಯವಾಗಿರುತ್ತದೆ. ಯಾವುದೇ ಸಮಸ್ಯೆಗಳ ಸಂದರ್ಭ ಸಮಾಜದಲ್ಲಿ ಸಮತೋಲನ ಕಾಯ್ದುಕೊಳ್ಳುವುದಕ್ಕಿಂತಲೂ ಸತ್ಯವನ್ನು ಎತ್ತಿ ತೋರಿಸುವುದು ಪ್ರಮುಖವಾಗಬೇಕು. ಸಮಾಜದಲ್ಲಿ ಸಮತೋಲನ ಕಾಯ್ದುಕೊಳ್ಳುವ ಉದ್ದೇಶದಿಂದ ಆರೋಪಿ ಮತ್ತು ಸಂತ್ರಸ್ತರನ್ನು ಒಂದೇ ಆಗಿ ಪರಿಗಣಿಸಲಾಗದು. ಸತ್ಯದ ಬಗ್ಗೆ ಬರೆಯುವಾಗ ಸಮಸ್ಯೆ ಖಂಡಿತಾ ಬರುತ್ತದೆ. ಆದರೆ ಸತ್ಯ ಬರೆಯುವಾಗ ಯಾವುದೇ ರೀತಿಯ ಯಾವುದೇ ಭಯ ಬೇಡ. ಜತೆಗೆ ಸಹಾನುಭೂತಿ ಬರವಣಿಗೆಯಲ್ಲಿ ಇದ್ದಾಗ ಯಾರಿಗೂ ಸಮಸ್ಯೆ ಬರುವುದಿಲ್ಲ ಎಂದರು.