ಚಾಮರಾಜನಗರ : ಕನ್ನಡಿಗ ರಾಷ್ಟ್ರ ಕವಿಗಳಾದ ಗೋವಿಂದ ಪೈ., ಕುವೆಂಪು, ಜಿ.ಎಸ್.ಶಿವರುದ್ರಪ್ಪ ರವರ ಸಾಹಿತ್ಯ ಕೊಡುಗೆಗಳನ್ನು ಯುವ ಸಮುದಾಯ ಅಧ್ಯಯನ ಮಾಡಬೇಕು. ಮೂವರು ರಾಷ್ಟ್ರ ಕವಿಗಳು ಕನ್ನಡ ಸಾಹಿತ್ಯ, ಸಂಸ್ಕೃತಿ ಪರಂಪರೆಯನ್ನು ವಿಶ್ವಕ್ಕೆ ತಲುಪಿಸಿದ ಮಹಾನ್ ಶ್ರೇಷ್ಠರಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ್.ಎನ್ ಋಗ್ವೇದಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ರಾಷ್ಟ್ರಕವಿಗಳಾದ ಗೋವಿಂದ ಪೈ, ಕುವೆಂಪು, ಜಿ.ಎಸ್.ಶಿವರುದ್ರಪ್ಪನವರ ಕೊಡುಗೆಗಳ ಕುರಿತು ಮಾತನಾಡುತ್ತಾ ಗೋವಿಂದ ಪೈ ಕವಿಗಳು, ಸಂಶೋಧಕರು, ಬಹುಭಾಷಾ ಪಂಡಿತರು, ನಾಟಕಕಾರರು, ಕಾವ್ಯ ವಿಮರ್ಶಕರಾಗಿದ್ದರು. ಕನ್ನಡದ ಪ್ರಾಸರಹಿತ ಪದ್ಯ ರಚನೆಗೆ ಹೊಸ ಹಾದಿಯನ್ನು ತೋರಿಸಿದ ಮಹಾನ್ ವ್ಯಕ್ತಿ. ಕುವೆಂಪು ಮತ್ತು ಶಿವರುದ್ರಪ್ಪನವರು ಕನ್ನಡದ ಸಾರಸ್ವತ ಲೋಕದ ಮಹಾ ಪ್ರತಿಭೆ.
ಶಿವರುದ್ರಪ್ಪನವರ ಭಾವಗೀತೆಗಳು ಕನ್ನಡಿಗರ ಹೃದಯದಲ್ಲಿ ಸದಾ ಕಾಲ ಧ್ವನಿಸುತ್ತಿದೆ ಎಂದರು.
ಬಳಿಕ ಬರಹಗಾರ ಎಸ್.ಲಕ್ಷ್ಮೀನರಸಿಂಹರವರು ಮಾತನಾಡಿ, ಗೋವಿಂದ ಪೈ, ಕುವೆಂಪು, ಶಿವರುದ್ರಪ್ಪ ರವರ ಸಾಹಿತ್ಯದ ಕೊಡುಗೆಯನ್ನು ಸ್ಮರಿಸಿಕೊಳ್ಳುವುದೇ ಒಂದು ಪುಣ್ಯ. ಜಿಎಸ್ ಎಸ್ ರವರು ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆಯನ್ನು ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯದ ಶ್ರೇಷ್ಠ ಚಿಂತನೆಗಳು ಮತ್ತು ಮಹತ್ವವನ್ನು ಕನ್ನಡಕ್ಕೆ ನೀಡಿದವರು. ಅವರ ಸಾಮಗನ, ದೇವಶಿಲ್ಪ, ಚೆಲುವು ಒಲವು, ಎದೆ ತುಂಬಿ ಹಾಡಿದನು, ದೀಪದ ಹೆಜ್ಜೆ ಮುಂತಾದವು ಕನ್ನಡಿಗರಲ್ಲಿ ಸದಾ ಇರುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಬಿ.ಕೆ ಆರಾಧ್ಯ, ರಾಷ್ಟ್ರಕವಿ ಕುವೆಂಪು ಅವರು ವಿಶ್ವಮಾನವರಾಗಿ ಮಾನವ ಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿ ತಮ್ಮ ಸಾಹಿತ್ಯದ ಮೂಲಕ ಕನ್ನಡಿಗರನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋದವರು. ರಾಮಾಯಣ ದರ್ಶನಂ ಕೃತಿ ಹಲವಾರು ಮಜಲುಗಳಲ್ಲಿ ಭಿನ್ನತೆಯನ್ನು ಕಾಣಬಹುದು. ಕನ್ನಡ ಸಾಹಿತ್ಯ ಪರಿಷತ್ತು ರಾಷ್ಟ್ರ ಕವಿಗಳ ಸ್ಮರಿಸುವ ಮೂಲಕ ಉತ್ತಮ ಕಾರ್ಯ ಮಾಡಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರಪ್ರಸಾದ್ ಶಿವರುದ್ರಪ್ಪನವರ ಹಾಗೂ ಕುವೆಂಪು ರವರ ಗೀತೆಗಳು ಹಾಡಿದರು ಹಾಗೂ ಶಿವಲಿಂಗ ಮೂರ್ತಿ ರವರು ಕನ್ನಡ ಗೀತೆಗಳನ್ನು ಹಾಡಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸರಸ್ವತಿ, ಲೋಕೇಶ್ ಕುಮಾರ್, ವಿಕ್ರಮ, ಮಹದೇವ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.



