ಕೆ.ಆರ್.ನಗರ: ಕೆ.ಆರ್.ನಗರ ಪಟ್ಟಣದ ಕಂಠೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆಯಾಗಿ ಸುನೀತಾ ರಮೇಶ್ ಮತ್ತು ಉಪಾಧ್ಯಕ್ಷೆಯಾಗಿ ಗಾಯತ್ರಿ ದೊರೆಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇವರಿಬ್ಬರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆಯ ಮಾರಾಟ ವಿಭಾಗದ ಸತೀಶ್ ಇವರ ಆಯ್ಕೆಯನ್ನು ಪ್ರಕಟಿಸಿದರು.
ಸತತ ಮೂರನೇ ಬಾರಿ ಅಧ್ಯಕ್ಷೆಯಾಗಿ ಆಯ್ಕೆಯಾದ ಸುನೀತಾರಮೇಶ್ ಮಾತನಾಡಿ ತಮ್ಮನ್ನು ಚುನಾಯಿಸಿದ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದ್ದಲ್ಲದೆ ಮುಂದಿನ ದಿನಗಳಲ್ಲಿ ಸಂಘದ ಏಳಿಗೆಗೆ ಸರ್ವರ ಸಹಕಾರದಿಂದ ಉತ್ತಮವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಚುನಾವಣಾ ಸಭೆಯಲ್ಲಿ ನಿರ್ದೇಶಕಿಯರಾದ ವರಲಕ್ಷ್ಮಿ, ಸರ್ವಮಂಗಳ, ಸುಂದ್ರಮ್ಮ, ಮಂಗಳ, ನೇತ್ರಾವತಿ, ಲಕ್ಷ್ಮಿ, ರಾಣಿ, ಸಂಘದ ಕಾರ್ಯದರ್ಶಿ ದ್ರಾಕ್ಷಾಯಿಣಿ ಉಪಸ್ಥಿತರಿದ್ದರು.
ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಯನ್ನು ತಾ.ಪಂ. ಮಾಜಿ ಅಧ್ಯಕ್ಷ ಚಂದ್ರಶೇಖರ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಪ್ರದೀಪ್ ಕೃಷ್ಣೇಗೌಡ, ವಕೀಲ ಕೆ.ಸಿ.ಹರೀಶ್, ಯುವ ಮುಖಂಡ ಎಸ್.ಎಸ್.ಹೇಮಂತ್, ಮುಖಂಡರಾದ ಮಾದೇಗೌಡ, ಪ್ರಭಾಕರ್, ಸಮಂತ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್ ಮತ್ತಿತರರು ಅಭಿನಂದಿಸಿದರು.