ಮೈಸೂರು: ರಾಜ್ಯದಲ್ಲಿ ಹೃದಯಘಾತದಿಂದಾಗಿ ಮರಣ ಸಂಖ್ಯೆ ಹೆಚ್ಚಾಗುತ್ತಿವೆ , ಅದರಲ್ಲೂ ಯುವ ಪೀಳಿಗೆ ಹೃದಯ ಸಂಬಂಧಿ ಕಾಯಿಲೆಯಿಂದ ಮರಣ ಹೊಂದುತ್ತಿರುವುದು ರಾಜ್ಯದ ಜನತೆ ಬೆಚ್ಚಿಬೀಳುವ ಪರಿಸ್ಥಿತಿ ಎದುರಾಗಿದೆ, ಹೀಗಾಗಿ ಮೈಸೂರು ಜಿಲ್ಲೆ ಹಾಗೂ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೃದಯಘಾತ ಸಂಬಂಧಿತ ತಪಾಸಣೆ ವ್ಯವಸ್ಥೆ ಮಾಡಬೇಕೆಂದು ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಕರ್ನಾಟಕ ಹಿತರಕ್ಷಣ ವೇದಿಕೆಯ ಅಧ್ಯಕ್ಷರಾದ ವಿನಯ್ ಕುಮಾರ್ ರವರು ತಹಶೀಲ್ದಾರರಾದ ರೇಖಾ ರವರಿಗೆ ಮನವಿ ಪತ್ರ ನೀಡಿದರು.
ನಂತರ ಮಾತನಾಡಿದ ಅವರು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಸಿಜಿ, ಇಕೋ, ರಕ್ತ ತಪಾಸಣೆ ಸೇರಿ ಹೃದಯಕ್ಕೆ ಸಂಬಂಧಿಸಿದ ಎಲ್ಲ ಪರೀಕ್ಷೆ ಮಾಡಿಸಿ ಕೊಳ್ಳಲು ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿದರು.
ಜಿಲ್ಲಾದ್ಯಂತ ಜನರು ಜಯದೇವ ಹೃದ್ರೋಗ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿ ಚಿಕಿತ್ಸೆ ದೊರೆಯುತ್ತಿಲ್ಲ. ಹೀಗಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು,
ಜಿಲ್ಲಾಧಿಕಾರಿಗಳು, ಆರೋಗ್ಯ ಸಚಿವರು ಕೂಡಲೇ ಸಭೆ ಕರೆದು ನಗರ, ಗ್ರಾಮೀಣ, ತಾಲೂಕು ವಾರ್ಡ್ಗಳಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ಹೃದಯಕ್ಕೆ ಸಂಬಂಧಿತ ತಪಾಸಣೆಯ ಸೌಲಭ್ಯ ಒದಗಿಸಲು ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
ಈಗಾಗಲೇ ತರಬೇತಿ ಪಡೆದ ನರ್ಸ್ಗಳು, ವೈದ್ಯರು ಆರೋಗ್ಯ ಸಿಬ್ಬಂದಿ ಇರುವುದರಿಂದ ಅವರನ್ನು ಆಯಾ ಹುದ್ದೆಗಳಿಗೆ ಶೀಘ್ರವಾಗಿ ಭರ್ತಿ ಮಾಡಬೇಕು, ರಾಜ್ಯದ ಜನತೆಯು ಹೃದಯಘಾತದಿಂದ ಪಾರಾಗಲು ರಾಜ್ಯ ಸರ್ಕಾರ ಸೂಕ್ತ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ವೇದಿಕೆ ವತಿಯಿಂದ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಸಿ ಎಸ್ ಚಂದ್ರಶೇಖರ್, ಉಮೇಶ್ ವಲ್ಲಿನಾಥ್ ಆರ್, ಶ್ರೀನಿವಾಸ್ ಎಸ್ ಎನ್ ರಾಜೇಶ್, ರವಿಚಂದ್ರ ಹಾಗೂ ಇನ್ನಿತರರು ಹಾಜರಿದ್ದರು.