ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಏ.೨,೩,೪ ರಂದು ನಡೆಯಲಿರುವ ಜಾತ್ರೆಗೆ ಪೂರ್ವಭಾವಿಯಾಗಿ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಿಪಿಐ ಶ್ರೀಕಾಂತ್ ನೇತೃತ್ವದಲ್ಲಿ ಶನಿವಾರ ಶಾಂತಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀಕಾಂತ್ ಮಾತನಾಡಿ, ಈ ಗ್ರಾಮದಲ್ಲಿ ೧೩ ಕೋಮಿನ ಜನರಿದ್ದಾರೆ. ಎಲ್ಲರೂ ಸೇರಿ ಆಚರಿಸುವ ದೊಡ್ಡ ಹಬ್ಬ ಇದಾಗಿದೆ. ಇದನ್ನು ಆಚರಿಸುವ ವೇಳೆ ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಶಾಂತಿಯಿಂದ ಎಲ್ಲಾ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿಕೊಳ್ಳಿ, ಜೊತೆಗೆ ಗ್ರಾಮದಲ್ಲಿ ಎಲ್ಲರೂ ಅನ್ಯೂನ್ಯವಾಗಿದ್ದು ಇದಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸಿ ಎಂದು ಎಲ್ಲರಿಗೂ ಮನವಿ ಮಾಡಿದರು. ಇದಕ್ಕೆ ಬೇಕಾಗುವ ಎಲ್ಲಾ ನೆರವನ್ನೂ ನಮ್ಮ ಇಲಾಖೆಯ ವತಿಯಿಂದ ನೀಡಲಾಗುವುದು ಎಂದರು. ಪಿಎಸ್ಐ ಮಹಾದೇವ್ ಸೇರಿದಂತೆ ಗ್ರಾಮದ ವಿವಿಧ ಕೋಮಿನ ಮುಖಂಡರು ಹಾಗೂ ಅನೇಕ ಗ್ರಾಮಸ್ಥರು ಹಾಜರಿದ್ದರು.