ನವದೆಹಲಿ : ಲೋಕಸಭೆ ಚುನಾವಣೆ ಮುಗಿಯುವವರೆಗೆ ಇಂಡಿಯಾ ಬಣವು ತನ್ನ ಪ್ರಧಾನಿ ಅಭ್ಯರ್ಥಿ ಯಾರೆಂದು ಘೋಷಿಸುವುದಿಲ್ಲ ಎಂದು ಹೇಳಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಚ್ಚರಿಯ ಹೇಳಿಕೆ ನೀಡಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಧಾನಿ ಅಭ್ಯರ್ಥಿಯಾಗಿ ಪ್ರಸ್ತಾಪಿದ್ದಾರೆ.
ಎಂಡಿಎಂಕೆ ನಾಯಕ ವೈಕೊ ಈ ಬಗ್ಗೆ ಮಾಹಿತಿ ನೀಡಿದ್ದು, ಮಮತಾ ಬ್ಯಾನರ್ಜಿ ಮತ್ತು ಅರವಿಂದ್ ಕೇಜ್ರಿವಾಲ್ ಇಬ್ಬರು ನಾಯಕರು ಪ್ರಧಾನಿ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸಿದ್ದು, ಈ ಪ್ರಸ್ತಾಪವನ್ನು ಖರ್ಗೆ ನಯವಾಗಿ ನಿರಾಕರಿಸಿ ಮೊದಲು ಲೋಕಸಭೆ ಗೆಲ್ಲುವುದು ಮುಖ್ಯ ನಂತರ ಎಲ್ಲವನ್ನೂ ನಿರ್ಧರಿಸಬಹುದು ಎಂದು ಹೇಳಿದರು ಎಂದು ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಟಿಎಂಸಿ ಸಂಸದರನ್ನು ಭೇಟಿಯಾಗಲು ದೆಹಲಿಗೆ ಆಗಮಿಸಿರುವ ಮಮತಾ ಬ್ಯಾನರ್ಜಿ, ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಿದ್ದರು. ಸೀಟು ಹಂಚಿಕೆ ಮತ್ತು ಜಂಟಿ ಸಮಾವೇಶಗಳು ಇಂಡಿಯಾ ಸಭೆಯ ಅಜೆಂಡಾ ಆಗಿತ್ತು ಎನ್ನಲಾಗಿದೆ. `ಈ ವಿಷಯಗಳ ಕುರಿತು ಆದಷ್ಟು ಬೇಗ ಒಮ್ಮತದ ನಿರ್ಧಾರಕ್ಕೆ ಬರುವುದು ಇಂಡಿಯಾ ಬ್ಲಾಕ್ನ ಮುಂದಿರುವ ಪ್ರಮುಖ ಸವಾಲುಗಳಲ್ಲಿ ಒಂದಾಗಿದೆ.೨೦೨೪ರ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಕುರಿತು ತಂತ್ರಗಳು ಮತ್ತು ಪ್ರಧಾನಿ ಅಭ್ಯರ್ಥಿ ಸಂಭಾವ್ಯ ಹೆಸರುಗಳನ್ನು ಚರ್ಚಿಸಲಾಯಿತು ಎಂದು ತಿಳಿದುಬಂದಿದೆ.
ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ‘ಮೊದಲು ನಾವು ಗೆಲ್ಲಬೇಕು ಮತ್ತು ಬಹುಮತ ಪಡೆಯಬೇಕು, ನಂತರ ಸಂಸದರು ಪ್ರಜಾಸತ್ತಾತ್ಮಕವಾಗಿ ನಿರ್ಧರಿಸುತ್ತಾರೆ ಎಂದು ಖರ್ಗೆ ಹೇಳಿದರು ಎನ್ನಲಾಗಿದೆ.
ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ೨೮ ವಿರೋಧ ಪಕ್ಷಗಳ ನಾಯಕರು ಭಾಗವಹಿಸಿದ್ದರು. ಸಭೆಯಲ್ಲಿ ದೇಶದ ಮೊದಲ ದಲಿತ ಪ್ರಧಾನಿಯಾಗಲು ತಮ್ಮ ಹೆಸರನ್ನು ಪ್ರಸ್ತಾಪಿಸಿದ ನಂತರ ಮಾತನಾಡಿದ ಖರ್ಗೆ, ‘ಮೊದಲು ಗೆಲ್ಲೋಣ, ನಂತರ ನೋಡೋಣ. ನಾನು ದೀನ ದಲಿತರಿಗಾಗಿ ಕೆಲಸ ಮಾಡುತ್ತೇನೆ, ಏನನ್ನೂ ಬಯಸುವುದಿಲ್ಲ’ ಎಂದರು.