ಯಳಂದೂರು: ಕಿನಕಹಳ್ಳಿ-ಕಟ್ನವಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ. ರಂಗಸ್ವಾಮಿ, ಉಪಾಧ್ಯಕ್ಷರಾಗಿ ಜಿ. ಜಯಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈಚೆಗೆ ಈ ಸಂಘದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಒಟ್ಟು ೧೨ ಮಂದಿ ನಿರ್ದೇಶಕರು ಇರುವ ಈ ಸಂಘದಲ್ಲಿ ಬಿ. ರಂಗಸ್ವಾಮಿ ಉಪಾಧ್ಯಕ್ಷ ಸ್ಥಾನಕ್ಕೆ ಜಿ. ಜಯಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಇವರ ಆಯ್ಕೆಯನ್ನು ಚುನಾವಣಾಧಿಕಾರಿ ಸುಭಾಷಿಣಿ ಅಧಿಕೃತವಾಗಿ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಬಿ.ರಂಗಸ್ವಾಮಿ ಮಾತನಾಡಿ, ನಮ್ಮ ಸಹಕಾರ ಸಂಘದಲ್ಲಿ ಒಟ್ಟು ೭೦ ಕ್ಕೂ ಹೆಚ್ಚು ಸದಸ್ಯರಿದ್ದಾರೆ. ಪ್ರತಿನಿತ್ಯ ಇಲ್ಲಿ ೬೦೦ ಲೀ. ಹಾಲು ಉತ್ಪಾದನೆಯಾಗುತ್ತದೆ. ಸದಸ್ಯರ ಸಂಖ್ಯೆ ಹಾಗೂ ಹಾಲು ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ನಾನು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ. ಇದರೊಂದಿಗೆ ಸರ್ಕಾರದಿಂದ ರಾಸು ಖರೀದಿಗೆ, ಮೇವು ಖರೀದಿಗೆ ಹೈನುಗಾರರಿಗೆ ಸಿಗುವ ಸಬ್ಸಿಡಿಯನ್ನು ಕೊಡಿಸುವಲ್ಲಿ ಪ್ರಾಮಾಣಿಕವಾಗಿ ಯತ್ನಿಸುತ್ತೇನೆ. ರಾಸುಗಳಿಗೆ ವಿಮೆ ಮಾಡಿಸುವಲ್ಲಿ ಹೈನುಗಾರಿಗೆ ಮಾಹಿತಿ ನೀಡಿ, ಅವರ ಕಷ್ಟಗಳಿಗೆ ಸ್ಪಂಧಿಸಿ ನಮ್ಮ ಸಂಘವನ್ನು ಅಧಿಕ ಲಾಭದತ್ತ ಕೊಂಡೊಯ್ಯಲು ನಾನು ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡುತ್ತೇನೆ. ನನಗೆ ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲರ ವಿಶ್ವಾಸದೊಂದಿಗೆ ಅಧಿಕಾರವನ್ನು ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.
ಉಪಾಧ್ಯಕ್ಷ ಜಿ. ಜಯಪ್ಪ ನಿರ್ದೇಶಕರಾದ ಎನ್. ಕುಮಾರ್, ರಾಚಪ್ಪಾಜಿ, ನಿಂಗಶೆಟ್ಟಿ, ಕೆ.ಜಿ. ಶಿವಣ್ಣ, ಅಂಕಶೆಟ್ಟಿ, ಕೆ.ಬಿ. ಮಹದೇವಸ್ವಾಮಿ, ಭಾಗ್ಯಮ್ಮ, ಲಕ್ಷ್ಮಮ್ಮ, ನಟರಾಜು, ಕೆ.ಎಸ್. ಶಿವಣ್ಣ ಕಾರ್ಯದರ್ಶಿಸಿದ್ದರಾಜು ಸೇರಿದಂತೆ ಅನೇಕರು ಇದ್ದರು.