Tuesday, November 4, 2025
Google search engine

Homeರಾಜ್ಯಸುದ್ದಿಜಾಲಕಿತ್ತೂರು ಉತ್ಸವ-2025: ಚನ್ನಮ್ಮನ ಸಾಹಸಗಾಥೆಯ ಅನಾವರಣ.

ಕಿತ್ತೂರು ಉತ್ಸವ-2025: ಚನ್ನಮ್ಮನ ಸಾಹಸಗಾಥೆಯ ಅನಾವರಣ.

ಚನ್ನಮ್ಮನ ಹೋರಾಟ ನಮಗೆ ಆದರ್ಶವಾಗಲಿ: ಸಚಿವ ಸತೀಶ ಜಾರಕಿಹೊಳಿ.

ವರದಿ :ಸ್ಟೀಫನ್ ಜೇಮ್ಸ್ .

ಬೆಳಗಾವಿ.ಅ.23: ಕಿತ್ತೂರು ಚನ್ನಮ್ಮನವರ ಹೋರಾಟ ಹಾಗೂ ಆದರ್ಶವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕಿದೆ. ಚನ್ನಮ್ಮನ ಹೋರಾಟ, ಸಾಹಸಗಾಥೆ ದೆಹಲಿ ತಲುಪಬೇಕಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯತತ್ಪರರಾಗೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು‌ ಕರೆ ನೀಡಿದರು.

ಕಿತ್ತೂರಿನ ಕೋಟೆ ಆವರಣದ ಕಿತ್ತೂರು ರಾಣಿ ಚನ್ನಮ್ಮ ವೇದಿಕೆಯಲ್ಲಿ ಗುರುವಾರ (ಅ.23) ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ‌ ಸಹಯೋಗದಲ್ಲಿ ಜರುಗಿದ 201ನೇ ವರ್ಷದ ಕಿತ್ತೂರು ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಂಗಾರಪ್ಪನವರ ಕಾಲದಲ್ಲಿ ಚಿಕ್ಕದಾಗಿ ಆರಂಭವಾದ ಕಿತ್ತೂರು ಉತ್ಸವ ಈಗ ನಾಡಿನ ಗಮನ ಸೆಳೆಯುತ್ತಿದೆ. ಚನ್ನಮ್ಮನ ಹೋರಾಟ ಆದರ್ಶಗಳನ್ನು ಅಳವಡಿಸಿಕೊಂಡು, ಚನ್ನಮ್ಮನ ಹೋರಾಟ ದಿಲ್ಲಿಯ ವರೆಗೆ ಕೇಳಬೇಕು ಆ ರೀತಿ‌ ಕಾರ್ಯಕ್ರಮ ಆಯೋಜನೆಯಾಗುತ್ತಿದೆ.

ಉತ್ಸವದ ಜೊತೆಗೆ ಅಭಿವೃದ್ಧಿ ಕಾರ್ಯಗಳು ಆಗಬೇಕು. ನಮ್ಮ ಸರಕಾರ ಬಂದ ಮೇಲೆ ಕಿತ್ತೂರು‌ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಲೊಕೋಪಯೋಗಿ ಇಲಾಖೆಯಿಂದ‌ ಪ್ರತಿ ವರ್ಷ ಕಿತ್ತೂರಿನ ಅಭಿವೃದ್ಧಿ ಕೆಲಸಗಳಿಗೆ ಐದು‌ ಕೋಟಿ ರೂ.ಗಳ‌ ಅನುದಾನ ನೀಡಲಾಗುತ್ತಿದೆ. ಮೂರನೇ ವರ್ಷವೂ ಅನುದಾನ ನೀಡಲಾಗುವುದು. ಕಿತ್ತೂರಿನ‌ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. .

ಈ ಕಾರ್ಯಕ್ರಮದ ಮೂಲಕ‌ ಅನೇಕ ಸ್ಥಳೀಯ ಕಲಾವಿದರಿಗೆ ಉತ್ತಮ ವೇದಿಕೆ ಕಲ್ಪಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು. ಜಿಲ್ಲೆಯ ಪ್ರತಿಭಾವಂತ ಕಲಾವಿದರ ಉತ್ಸವದ ವೇದಿಕೆ ಸದ್ಬಳಕೆ‌ ಮಾಡಿಕೊಳ್ಳಬೇಕು. ಉತ್ಸವದ ಯಶಸ್ವಿಗೆ ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಿದ್ದು, ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಮೂರು ದಿನಗಳ ಕಾಲ ಉತ್ಸವ ಯಶಸ್ವಿಯಾಗಲಿ ಎಂದು ಸಚಿವರಾದ ಸತೀಶ‌ ಜಾರಕಿಹೊಳಿ ಅವರು ಹಾರೈಸಿದರು.

ಸಂಸದರಾದ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ ಅವರು ಮಾತನಾಡಿ, ಚನ್ನಮ್ಮ, ರಾಣಿ ಅಬ್ಬಕ್ಕ, ಬೆಳವಡಿ ಮಲ್ಲಮ್ಮ ಸೇರಿದಂತೆ ನಾಡಿನ ಅನೇಕ ಮಹಿಳೆಯರ ಹೋರಾಟದ ಭವ್ಯ ಇತಿಹಾಸವನ್ನು ನಾವು ಸದಾ ಸ್ಮರಣೆಯಲ್ಲಿಟ್ಟುಕೊಳ್ಳಬೇಕು ಎಂದರು.
ಚನ್ನಮ್ಮನವರ ಹೋರಾಟ, ಆಡಳಿತ ನಮಗೆ ಪ್ರೇರಣೆ ಹಾಗೂ ಮಾರ್ಗದರ್ಶಿಯಾಗಿದೆ. ಸ್ವತಂತ್ರ‌ಭಾರತದ ನಿರ್ಮಾಣದಲ್ಲಿ ಮಹಿಳಾ ಹೋರಾಟಗಾರ್ತಿಯರ ಕೊಡುಗೆ ಅಪಾರ.

200 ವರ್ಷಗಳ‌ ಹಿಂದೆ ಜರುಗಿದ ಯುದ್ಧವನ್ನು ನಾವೆಲ್ಲ‌ ಸ್ಮರಿಸಬೇಕು. ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ಚನ್ನಮ್ಮನ ನಾವು ಸ್ಮರಿಸಬೇಕು. ನಮ್ಮ‌ ನಾಡನ್ನು ಕಟ್ಟಲು‌ ಮಹಿಳೆಯರು ಸದಾ ಮುಂದಾಗಿರುತ್ತಾರೆ. ನಮ್ಮ‌ ನಾಡಿನ‌ ಬಗ್ಗೆ ನಾವು ಹೆಮ್ಮೆ‌ಪಡಬೇಕು. ಪುರುಷ ಪ್ರಧಾನ‌ ಸಮಾಜದಲ್ಲಿ ಅನೇಕ‌ ಮಹಿಳೆಯರು‌ ನಾಡನ್ನು ಕಟ್ಟಲು ತಮ್ಮ ಕೊಡುಗೆಯನ್ನು ನೀಡಿರುವುದನ್ನು ನಾವು ಇತಿಹಾಸದ ಮೂಲಕ ತಿಳಿಯ ಬಹುದಾಗಿದೆ.
ಸರ್ವ ವಿದ್ಯೆಯಲ್ಲಿ‌ ಚನ್ನಮ್ಮ ಪ್ರಾವೀಣ್ಯತೆಯನ್ನು ಹೊಂದಿದ್ದಳು ಅದೇ ರೀತಿ ಇಂದಿನ ಮಹಿಳೆಯರು ಚನ್ನಮ್ಮನ‌ ಸ್ಪೂರ್ತಿಯೊಂದಿಗೆ ಮುನ್ನಡೆಯಲು ಕರೆ ನೀಡಿದರು.

ನಮ್ಮ ನಾಡಿನ ಅನೇಕ ವೀರರು ತ್ಯಾಗ ಬಲಿದಾನದ‌ ಮೂಲಕ ಬೆಳೆಸಿದ ಈ‌ ನಾಡನ್ನು ಬೆಳೆಸುವುದು ನಮ್ಮೆಲ್ಲರ‌ ಜವಾಬ್ದಾರಿಯಾಗಿದೆ. ಹಿಂದಿನ ನಾಯಕರು ಇಂದಿನ ನಾಯಕರು ಪ್ರಜೆಗಳ‌ ಹಿತ‌ ಕಾಯುವ ಕಾರ್ಯ‌ ಮಾಡಬೇಕು. ದೇಶದ ಏಕತೆ,‌ಅಖಂಡತೆ ಕಾಪಾಡಿಕೊಳ್ಳುವ ಸಂಕಲ್ಪ ತೊಟ್ಟು ದೇಶಾಭಿಮಾನ ಹೊಂದಬೇಕು.
ಭಾರತ ಎಂದಿಗೂ‌ ಇತರರ ಮೇಲೆ ಆಕ್ರಮಣ ಮಾಡಿಲ್ಲ. ಹಿಂದಿನ‌ ಕಾಲದ ಮಾದರಿ ಆಡಳಿತ, ದೇಶರಕ್ಷಣೆಯ ಹೋರಾಟವನ್ನು ಆದರ್ಶವಾಗಿಟ್ಟುಕೊಂಡು ದೇಶ ರಕ್ಷಣೆಯ ಸಂಕಲ್ಪ ಮಾಡಬೇಕು.
ನಮ್ಮ ಶಕ್ತಿ ಮರೆತರೆ ವಿದೇಶಿ ಶಕ್ತಿಗಳು ದಾಳಿ ಮಾಡುವುದನ್ನು ಕಾಣುತ್ತಿದ್ದೇವೆ. ಆದ್ದರಿಂದ ದೇಶ ಮೊದಲು ಎಂಬ ಸಂಕಲ್ಪದೊಂದಿಗೆ ಮುಂದುವರಿಯಬೇಕಿದೆ.
ಸ್ವದೇಶಿ ಚಿಂತನೆ ಜಾಗೃತಿಗೊಳಿಸಬೇಕಿದ್ದು, ಸ್ವದೇಶಿ ವಸ್ತುಗಳನ್ನು ಖರೀದಿಸುವ ಮೂಲಕ ದೇಶ ಬಲಪಡಿಸಬೇಕಿದೆ.
ಕಿತ್ತೂರಿನ ಅಭಿವೃದ್ಧಿಗೆ ಬದ್ಧರಾಗಿದ್ದು, ಒಬ್ಬ ಸಂಸದರಾಗಿ ಸದಾ ಸಿದ್ಧನಾಗಿರುತ್ತೇನೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ವಿಧಾನ‌ ಪರಿಷತ್ ಶಾಸಕರಾದ ಹಣಮಂತ ನಿರಾಣಿ ಅವರು ಮಾತನಾಡಿ, ಚನ್ನಮ್ಮನ ಇತಿಹಾಸವನ್ನು ಸ್ಮರಿಸುವ ಉದ್ದೇಶದೊಂದಿಗೆ ಈ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಮಹಿಳೆಯರು ಮನೆಯಿಂದ‌ ಹೊರ ಬರದಂತಹ‌ ಕಾಲದಲ್ಲಿ ರಾಣಿ ಚನ್ನಮ್ಮ ಆಂಗ್ಲರ‌ ವಿರುದ್ಧ ಹೊರಾಡುವದರ ಮೂಲಕ ಇಡೀ ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ. ಚನ್ನಮ್ಮನ ಪರಾಕ್ರಮ ನಮೆಲ್ಲರಿಗೆ ಪ್ರೇರಣೆಯಾಗಿದೆ. ಚನ್ನಮ್ಮನ ಕಥೆಯನ್ನು‌ ಮುಂದಿನ ಪೀಳಿಗೆಗೆ ತಿಳಿಯ ಪಡಿಸುವ ಕಾರ್ಯವಾಗಬೇಕು. ಕಿತ್ತೂರು ಅಭಿವೃದ್ಧಿ ಪ್ರಾಧಕಾರಕ್ಕೆ‌ ಇನ್ನೂ ಹೆಚ್ಚಿನ‌ ಅನುದಾನ ನೀಡಬೇಕು ಎಂದರು.

ವಿಧಾನ‌ ಪರಿಷತ್ ಶಾಸಕರಾದ ಚನ್ನರಾಜ್ ಹಟ್ಟಿಹೊಳಿ ಮಾತನಾಡಿ ಚನ್ನಮ್ಮಾಜಿ ಅವರು ಬ್ರಿಟಿಷರ ವಿರುದ್ಧ‌ ಸ್ವಾಭಿಮಾನದ ಹೋರಾಟವನ್ನು ಇಂದಿನ ಪೀಳಿಗೆಗೆ ತಿಳಿಯಪಡಿಸುವ ಕಾರ್ಯವನ್ನು ಸರಕಾರದಿಂದ ಮಾಡಲಾಗುತ್ತಿದೆ. ಚನ್ನಮ್ಮನ ಕುರಿತು‌ ಇನ್ನೂ ಹೆಚ್ಚಿನ‌ ಸಂಶೋಧನೆಗಳು ಆಗಬೇಕು ಎಂದು ಆಶಯ ವ್ಯಕ್ತ ಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಿತ್ತೂರು ವಿಧಾನ ಸಭಾ ಮತಕ್ಷೇತ್ರದ ಶಾಸಕರಾದ ಬಾಬಾಸಾಹೇಬ ಪಾಟೀಲ ಅವರು ಮಾತನಾಡಿ, ಚನ್ನಮ್ಮನ‌ ಇತಿಹಾಸವನ್ನು ಹೊಸ ಪೀಳಿಗೆಗೆ ಅರ್ಥವಾಗುವ ರೀತಿ ತಿಳಿಸುವ ಕಾರ್ಯವಾಗಬೇಕು.‌ ಕಿತ್ತೂರು ಸ್ವಾಭಿಮಾನದ ನಾಡಾಗಿದೆ. ಕಿತ್ತೂರಿನ ಇತಿಹಾಸವನ್ನು ಅರಿಯ ಬೇಕಾದರೆ ಅಭಿವೃದ್ದಿ ಕಾರ್ಯಗಳು ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅನುದಾನ‌ ನೀಡುತ್ತಿದ್ದು ಈ ಅನುದಾನವನ್ನು ಸದುಪಯೋಗ ಮಾಡಿಕೊಳ್ಳುವದರ ಮೂಲಕ ಕಿತ್ತೂರು ಕೋಟೆ ಅಭಿವೃದ್ಧಿ ಕಾರ್ಯಗಳು‌ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಲಿಂಗಾಯತ ಪಂಚಮಸಾಲಿ ಜಗದ್ಗುರುಗಳಾದ ಬಸವ ಜಯ ಮೃತ್ಯುಂಜಯ ಸ್ವಾಮಿಜಿಗಳು ಮಾತನಾಡಿ, ಬೈಲಹೊಂಗಲದ‌ ಚನ್ನಮ್ಮನ‌ ಸಮಾಧಿಯನ್ನು ರಾಷ್ಟ್ರಿಯ ಸ್ಮಾರಕವಾಗಿ ಹಾಗೂ ಅಕ್ಟೋಬರ್ 23ನ್ನು ಸ್ವಾಭಿಮಾನ‌‌ ದಿನವನ್ನಾಗಿ ಘೋಷಿಸಲು ಮನವಿ ಮಾಡಿದರು.

ನಿಜಗುಣಾನಂದ ತೋಂಟದಾರ್ಯ ಮಹಾಸ್ವಾಮಿಗಳು, ಅಶೀರ್ವಚನ ನೀಡಿದರು. ಚನ್ನಮ್ಮನ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು, ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು, ಬಸವಾನಂದ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಉಪ್ಪಾರ ಅಭಿವೃದ್ಧಿ ನಿಗಮದ‌ ಅಧ್ಯಕ್ಷರಾದ ಭರಮಣ್ಣ ಉಪ್ಪಾರ, ಕಿತ್ತೂರು ಪಟ್ಟಣ ಪಂಚಾಯತ ಅಧ್ಯಕ್ಷರಾದ ಜಯಸಿದ್ರಾಮ ಮಾರಿಹಾಳ, ವಾ.ಕ.ಸಾ.ಸಂಸ್ಥೆ ಉಪಾಧ್ಯಕ್ಷರಾದ ಸುನೀಲ‌ ಹನುಮಣ್ಣವರ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ‌ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ‌ ಗುಳೇದ, ಜಿಲ್ಲಾ‌ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹಿಲ‌ ಶಿಂಧೆ, ಕನ್ನಡ‌ ಮತ್ತು ಸಂಸ್ಕೃತಿ‌ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಬೈಲಹೊಂಗಲ ಉಪ ವಿಭಾಗಾಧಿಕಾರಿ ಪ್ರವೀಣ ಜೈನ್ ಅವರು ಸ್ವಾಗತಿಸಿದರು. ರಾಜೇಶ್ವರಿ ಹಾಗೂ ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು.


RELATED ARTICLES
- Advertisment -
Google search engine

Most Popular