ರಾಮನಗರ: ದೇಶವನ್ನು ರಕ್ಷಿಸುವಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರ ಪಾತ್ರ ಅಪಾರವಾದದು ಎಂದು ಜಾನಪದ ವಿದ್ವಾಂಸರಾದ ಡಾ.ಭೈರೇಗೌಡ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಹಲವಾರು ಮಹನೀಯರು ಬ್ರಿಟೀಷರ ವಿರುದ್ಧ ಹೋರಾಡಿದರು ಅದರಲ್ಲಿ ಪ್ರಮುಖವಾದವರು ಕಿತ್ತೂರು ರಾಣಿ ಚೆನ್ನಮ್ಮನವರು. ಬ್ರಿಟೀಷರ ಆಳ್ವಿಕೆಯ ಕಿತ್ತೂರು ಸಂಸ್ಥಾನದ ಏಕೈಕ ರಕ್ಷಣೆಯಾಗಿದ್ದವರು ಕಿತ್ತೂರು ರಾಣಿ ಚೆನ್ನಮ್ಮನವರು ಎಂದು ತಿಳಿಸಿದರು.
ಬ್ರಿಟೀಷರು ಇಡೀ ರಾಜ್ಯವನ್ನು ಹಾಗೂ ಕಿತ್ತೂರು ಸಂಸ್ಥಾನವನ್ನು ಆಕ್ರಮಿಸಿಕೊಂಡಾಗ ಕಿತ್ತೂರು ರಾಣಿ ಚೆನ್ನಮ್ಮನವರು ವೀರಾವೇಶದಿಂದ ಹೋರಾಟ ಮಾಡಿ, ಕಿತ್ತೂರು ಸಂಸ್ಥಾನವನ್ನು ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.ಕಿತ್ತೂರು ಸಂಸ್ಥಾನವನ್ನು ಬಿಡಿಸಿಕೊಳ್ಳಲು ಕೆಚ್ಚೆದೆಯಿಂದ ಹೋರಾಡಿದ ಮಹಾತಾಯಿ ಕಿತ್ತೂರು ರಾಣಿ ಚೆನ್ನಮ್ಮನವರು ಎಂದು ತಿಳಿಸಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ರಮ್ಯ ಅವರು ಮಾತನಾಡಿ, ಕನ್ನಡ ನಾಡಿನಲ್ಲಿ ಎಲ್ಲರೂ ಹೆಮ್ಮೆ ಪಡುವ ಒಬ್ಬ ಸ್ತ್ರೀ, ಹೋರಾಟಗಾರ್ತಿ, ಸ್ವತಂತ್ರ ಭಾರತದಲ್ಲಿ ಎಲ್ಲಾ ಪ್ರಜೆಗಳ ಮನಸ್ಸಿನಲ್ಲಿ ಬರುವ ಮೊದಲೇ ಹೆಸರೇ ಕಿತ್ತೂರು ರಾಣಿ ಚೆನ್ನಮ್ಮನವರದು ಎಂದು ತಿಳಿಸಿದರು.
ಉತ್ತರ ಕರ್ನಾಟಕದಲ್ಲಿ ಕಿತ್ತೂರು ಉತ್ಸವನ್ನು ಅತ್ಯಂತ ವಿಜೃಂಭಣೆಯಿಂದ ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಕಿತ್ತೂರು ಉತ್ಸವ ನಡೆಯುತ್ತಿರುವುದು ಸಂತೋಷದ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಬಾಬು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗವೇಣಿ, ಕಲಾವಿದರಾದ ಹೊನ್ನಗಾನಹಳ್ಳಿ ಸಿದ್ದರಾಜು, ಡಾ.ಬ್ಯಾಡರಹಳ್ಳಿ ಶಿವಕುಮಾರ್, ಲೋಕೇಶ್ ಹಾಗೂ ಕುಂಬಾಪುರ ಬಾಬು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.