ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನ ಯಲಹಂಕ ವ್ಯಾಪ್ತಿಯ ಕೋಗಿಲು ಲೇಔಟ್ನಲ್ಲಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ನಿವಾಸಗಳನ್ನು ಒತ್ತುವರಿ ಮಾಡಿತ್ತು. ಈ ವಿಚಾರ ಸಾಕಷ್ಟು ಸುದ್ದಿಯಾಗುತ್ತಿದ್ದಂತೆ ಅಲ್ಲಿನ ನಿವಾಸಿಗಳಿಗೆ ಪರ್ಯಾಯವಾಗಿ ಬೈಯಪ್ಪನಹಳ್ಳಿಯಲ್ಲಿ ನಿವಾಸ ಕಲ್ಪಿಸಲು ಸರ್ಕಾರ ಮುಂದಾಗಿದೆ. ಆದರೆ ಈ ವಿಚಾರಕ್ಕೆ ವಿಪಕ್ಷಗಳಿಂದ ವಿರೋಧ ಕೇಳಿ ಬರುತ್ತಿದೆ.
ಇದೀಗ ಈ ಕುರಿತು ಸರ್ಕಾರದ ಪರವಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ಬ್ಯಾಟಿಂಗ್ ಮಾಡಿದ್ದು, ಸರ್ಕಾರದ ತೆರವು ಕಾರ್ಯಚರಣೆಯನ್ನು ಸಮರ್ಥಿಸಿಕೊಂಡಿರುವ ಶಶಿ ತರೂರ್ ಕಾನೂನು ಪ್ರಕಾರವೇ ಜಾಗವನ್ನು ತೆರವು ಮಾಡಲಾಗಿದೆ ಮತ್ತು ಅಲ್ಲಿ ವಾಸವಿದ್ದವರಿಗೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಅವರು, ಖಾಲಿ ಜಾಗ ಸರ್ಕಾರದ್ದು, ಅಲ್ಲಿ ಅಕ್ರಮವಾಗಿ ಮನೆಗಳನ್ನು ಕಟ್ಟಿದ್ದರು. ಅಲ್ಲದೆ, ಆ ಜಾಗ ಕಸದ ಗದ್ದೆಯಾಗಿತ್ತು. ಅಲ್ಲಿ ವಿಷಕಾರಿ ತ್ಯಾಜ್ಯ ನೀರು ಸೇರಿರುವುದರಿಂದ ಅಲ್ಲಿ ಜನ ವಾಸಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಸರ್ಕಾರ ಕಾನೂನು ಪ್ರಕಾರವೇ ತೆರವು ಕಾರ್ಯಾಚರಣೆ ನಡೆಸಿದೆ. ತೆರವು ಕಾರ್ಯಾಚರಣೆಗೂ ಮುನ್ನ ಅಲ್ಲಿ ವಾಸವಿದ್ದವರಿಗೆ ಮಾಹಿತಿ ನೀಡಲಾಗಿತ್ತು ಹಾಗಾಗಿ ಸಂತ್ರಸ್ತ ಜನರು ಬಡವರು ಎಂಬ ಆಧಾರದ ಮೇಲೆ ಮಾತ್ರ ಈ ವಿಷಯವನ್ನು ರಾಜಕೀಯವಾಗಿ ಬಿಂಬಿಸುವುದು ನ್ಯಾಯವಲ್ಲ ಎಂದು ಹೇಳಿದ್ದಾರೆ.
ಇನ್ನೂ ಸರ್ಕಾರ ಪರ್ಯಾಯ ನಿವಾಸ ಒದಗಿಸುವ ಕುರಿತು ಮಾತನಾಡಿ, ಸರ್ಕಾರವು ತಾತ್ಕಾಲಿಕ ವಸತಿ ಒದಗಿಸಲು ನಿರ್ಧರಿಸಿದ್ದು, ಐದರಿಂದ ಆರು ತಿಂಗಳಲ್ಲಿ ಖಾಯಂ ಮನೆಗಳನ್ನು ಕಟ್ಟಿಕೊಡುವುದಾಗಿ ಭರವಸೆ ನೀಡಿದೆ. ಈ ಸಮಸ್ಯೆ ಬಗೆಹರಿಸಲು ಒಂದು ದಾರಿ ಸಿಕ್ಕಿರುವಾಗ, ಈ ವಿಷಯವನ್ನು ಅನಗತ್ಯವಾಗಿ ದೊಡ್ಡದು ಮಾಡುವ ಅಗತ್ಯವಿಲ್ಲ.
ಇದೇ ವೇಳೆ, ಸರ್ಕಾರದ ತೆರವು ಪ್ರಕ್ರಿಯೆಯಲ್ಲಿ ಕೆಲವು ನ್ಯೂನ್ಯತೆಗಳಿರಬಹುದು, ಅದನ್ನು ಹೇಗೆ ಮಾಡಿದರು ಎಂಬ ಬಗ್ಗೆ ಭಿನ್ನಾಭಿಪ್ರಾಯಗಳಿರಬಹುದು. ಆದರೆ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಲಾಗಿದೆ ಎಂದು ತರೂರ್ ಹೇಳಿದ್ದಾರೆ.
ಕರ್ನಾಟಕ ಸರ್ಕಾರವು ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸಿ ಈ ಕ್ರಮ ಕೈಗೊಂಡಿದೆ. ತೆರವು ಕಾರ್ಯಾಚರಣೆಗೂ ಮುನ್ನ ನೋಟಿಸ್ ನೀಡಲಾಗಿತ್ತು. ಕೆಲವು ಸಂದರ್ಭಗಳಲ್ಲಿ, ತೆರವುಗೂ ಮುನ್ನ ಹಲವು ಬಾರಿ ನೋಟಿಸ್ ನೀಡಲಾಗಿತ್ತು ಎಂಬ ಮಾಹಿತಿಯಿದೆ ಎಂದಿರುವ ತರೂರ್ ನಾನಿನ್ನೂ ಕರ್ನಾಟಕಕ್ಕೆ ಭೇಟಿ ನೀಡಿಲ್ಲ ಹಾಗಾಗಿ ನಾನು ಖಚಿತವಾದ ಅಭಿಪ್ರಾಯ ತಿಳಿಸಲು ಸಾಧ್ಯವಿಲ್ಲ ಎಂದಿದ್ದಾರೆ.



