ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿಯಾದ ಕೆಆರ್ಎಸ್ ಅಣೆಕಟ್ಟೆ ಈ ವರ್ಷ ಜೂನ್ ತಿಂಗಳಲ್ಲಿ ಪೂರ್ಣವಾಗಿ ಭರ್ತಿಯಾಗಿದ್ದು, ಇತಿಹಾಸದಲ್ಲೇ ಇದೇ ಮೊದಲು. ಈ ಮಹತ್ವದ ಸಂದರ್ಭದಲ್ಲಿ, ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾವೇರಿ ಬಾಗಿನ ಅರ್ಪಿಸಿ, ಜೂನ್ನಲ್ಲಿ ಬಾಗಿನ ಅರ್ಪಿಸಿದ ಮೊದಲ ಸಿಎಂ ಎಂಬ ದಾಖಲೆ ಬರೆಯಲಿದ್ದಾರೆ. ಈ ಹಿನ್ನೆಲೆ ಕಾವೇರಿ ನೀರಾವರಿ ನಿಗಮ ಭರದ ಸಿದ್ಧತೆ ನಡೆಸುತ್ತಿದ್ದು, ಅಣೆಕಟ್ಟೆಗೆ ಸುಣ್ಣ ಬಣ್ಣ ಹಾಕಲಾಗುತ್ತಿದೆ.
ಡ್ಯಾಂ ಮೇಲ್ಭಾಗದಲ್ಲಿ ಕನ್ನಡ ಬಾವುಟಗಳು ರಾರಾಜಿಸುತ್ತಿವೆ. ಬೆಳಗ್ಗೆ 11:30ರ ಅಭಿಜಿತ್ ಮೂಹೂರ್ತದಲ್ಲಿ ಬಾಗಿನ ಅರ್ಪಣೆ ನಡೆಯಲಿದೆ. ವೈದಿಕ ಭಾನುಪ್ರಕಾಶ್ ಶರ್ಮ ಅವರ ನೇತೃತ್ವದಲ್ಲಿ ಪೂಜಾ ವಿಧಿ ನೆರವೇರಲಿದೆ. 40 ಬಾಗಿನ ಜೋಡಿಗಳು ಸಿದ್ಧಪಡಿಸಲಾಗಿದ್ದು, ಮೊರದಲ್ಲಿ ನವಧಾನ್ಯ, ಸೀರೆ, ಅರಿಶಿಣ-ಕುಂಕುಮ, ಬಳೆ ಇತ್ಯಾದಿಗಳನ್ನು ಇಟ್ಟು ಬಾಗಿನ ತಯಾರಿಸಲಾಗಿದೆ. ಕಾರ್ಯಕ್ರಮದ ನಂತರ ಸಿಎಂ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ.