ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಹಲವು ರಾಜಕೀಯ ಕಾರಣಗಳಿಂದ ನಾನು ಮತ್ತು ಕೆ.ಆರ್.ಪೇಟೆ ಮಾಜಿ ಶಾಸಕ ಕೆ.ಸಿ.ನಾರಾಯಣಗೌಡ ಅವರು ಈ ಹಿಂದೆ ಜೆಡಿಎಸ್ನಿಂದ ದೂರವಾಗಿದ್ದೆವು ಆದರೆ ಈಗ ದೇಶದ ಹಿತದೃಷ್ಟಿ ಮತ್ತು ಅಭಿವೃದ್ದಿ ಕೆಲಸಗಳಿಗೋಸ್ಕರ ಚುನಾವಣೆಯಲ್ಲಿ ಮುಕ್ತ ಮನಸ್ಸಿನಿಂದ ಪ್ರಚಾರ ಮಾಡುತ್ತಿದ್ದು ಎಲ್ಲರೂ ನಮ್ಮ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರ ಗೆಲುವಿಗೆ ದುಡಿಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.
ತಾಲೂಕಿನ ಮಾರಗೌಡನಹಳ್ಳಿ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಜಂಟಿಯಾಗಿ ಆರಂಭಿಸಿದ ಚುನಾವಣಾ ಪ್ರಚಾರ ಕಾರ್ಯಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದ ನಂತರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಎರಡು ಬಾರಿ ಮುಖ್ಯಮಂತ್ರಿಗಳಾಗಿ ಅಪಾರ ಅನುಭವ ಹೊಂದಿರುವ ಹೆಚ್ಡಿಕೆ ಅವರು ಸಂಸತ್ತಿಗೆ ಪ್ರವೇಶ ಮಾಡಬೇಕು ಎಂದರು.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಎನ್ಡಿಎ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸ್ಪರ್ದಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಹುಮತಗಳಿಂದ ಚುನಾಯಿತರಾದರೆ ಕ್ಷೇತ್ರದ ಜತೆಗೆ ರಾಜ್ಯದ ಅಭಿವೃದ್ದಿಗೂ ಹೆಚ್ಚು ಸಹಕಾರಿಯಾಗಲಿದೆ, ಪ್ರಧಾನಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದ ಹೆಚ್.ಡಿ.ದೇವೇಗೌಡರ ಪುತ್ರರಾಗಿರುವ ಹೆಚ್.ಡಿ.ಕುಮಾರಸ್ವಾಮಿ ರವರು ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ದೆ ಮಾಡಿರುವುದು ನಮ್ಮೆಲ್ಲರಿಗೂ ಸಂತಸದ ವಿಚಾರವಾಗಿದ್ದು ಅವರನ್ನು ಅತ್ಯಧೀಕ ಬಹುಮತಗಳಿಂದ ಗೆಲ್ಲಿಸುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಹೆಚ್.ಡಿ.ದೇವೇಗೌಡರು ಪ್ರಧಾನ ಮಂತ್ರಿಗಳಾಗಿ ೨೮ ವರ್ಷ ಕಳೆದರು ಭಾರತದ ರಾಜಕಾರಣದಲ್ಲಿ ಇಂದಿಗೂ ಹೆಚ್ಚು ಪ್ರಸ್ತುತರಾಗಿದ್ದು ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಸಮಸ್ಯೆಗಳು ಕಾಣಿಸಿಕೊಂಡಾಗ ಪ್ರಧಾನಮಂತ್ರಿಗಳಾದ ನರೇಂದ್ರಮೋದಿಯವರೇ ಮಾಜಿ ಪ್ರಧಾನಿಗಳ ಸಲಹೆ ಮತ್ತು ಸೂಚನೆ ಪಡೆಯುತ್ತಿದ್ದು ಅಂತಹವರ ಪುತ್ರ ಸಂಸತ್ ಪ್ರವೇಶ ಮಾಡಬೇಕಾದ ಅನಿವಾರ್ಯತೆ ಹೆಚ್ಚಾಗಿದೆ ಈ ವಿಚಾರವನ್ನು ಮತದಾರರು ಗಂಬೀರವಾಗಿ ಪರಿಗಣಿಸಬೇಕು ಎಂದರು.
ನಾನು ರಾಜಕೀಯವಾಗಿ ಮೂಲೆ ಗುಂಪಾಗಿದ್ದ ಸಂದರ್ಭದಲ್ಲಿ ನಾಯಕ ಸಮಾಜದ ಅಗ್ರಗಣ್ಯ ಮುಖಂಡರಾದ ಮಾಜಿ ಶಾಸಕ ದಿ.ಎಸ್.ಚಿಕ್ಕಮಾಧುರವರು ನನ್ನನ್ನು ದೇವೇಗೌಡರ ಬಳಿಗೆ ಕರೆದುಕೊಂಡು ಹೋದ ನಂತರ ಅವರು ಹೆಚ್ಚು ಅನುಭವಿರುವ ನೀನು ಮನೆಯಲ್ಲಿ ಕೂರದೆ ಜನಸೇವೆ ಮಾಡು ಎಂದು ಹುಣಸೂರು ಶಾಸಕರನ್ನಾಗಿ ಮಾಡುವುದರ ಜತೆಗೆ ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದರೂ ಈಗ ಆ ಋಣ ತೀರಿಸಿಕೊಳ್ಳುವ ಸಮಯ ಬಂದಿದ್ದು ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸಂಸದರನ್ನಾಗಿ ಮಾಡಿ ನನ್ನ ಋಣಭಾರ ಇಳಿಸಿಕೊಳ್ಳುತ್ತೇನೆ ಎಂದರು.

ಮಾಜಿ ಸಚಿವರಾದ ಸಾ.ರಾ.ಮಹೇಶ್, ಕೆ.ಸಿ.ನಾರಾಯಣಗೌಡ, ಜಿ.ಪಂ. ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಮೈಮುಲ್ ಮಾಜಿ ಅಧ್ಯಕ್ಷ ಎ.ಟಿ.ಸೋಮಶೇಖರ್, ಜಿಲ್ಲಾ ಗ್ರಾಮಾಂತರ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ದ್ರಾಕ್ಷಾಯಿಣಿ, ತಾಲೂಕು ಜೆಡಿಎಸ್ ಅಧ್ಯಕ್ಷ ಹೆಚ್.ಸಿ.ಕುಮಾರ್,ವಕ್ತಾರ ಕೆ.ಎಲ್ ರಮೇಶ್ ,ಪ್ರಧಾನ ಕಾರ್ಯದರ್ಶಿ ಲಾಲನಹಳ್ಳಿಮಹೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹೊಸಹಳ್ಳಿವೆಂಕಟೇಶ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಅರ್ಜುನಹಳ್ಳಿಗಣೇಶ್, ಎಂ.ಎಸ್.ಹರಿಚಿದಂಬರ, ತಾ.ಪಂ. ಮಾಜಿ ಅಧ್ಯಕ್ಷ ನಾಗಣ್ಣ, ಜೆಡಿಎಸ್ ಮುಖಂಡರಾದ ಎಂ.ಎಸ್.ಕಿಶೋರ್, ಕಾಂತರಾಜು, ಬಾಲಾಜಿಗಣೇಶ್, ಕಗ್ಗೆರೆಸುನೀಲ್, ವಡ್ಡರಕೊಪ್ಪಲು ಶ್ರೀಧರ್, ಕೃಷ್ಣಶೆಟ್ಟಿ, ಸಿ.ಜೆ.ಆನಂದ, ಭೇರ್ಯಅಭಿ, ಮಹದೇವಪ್ಪ, ಹೆಚ್.ಪಿ.ಹರೀಶ್, ರಾಧಾಕೃಷ್ಣ, ಧನಂಜಯ, ಸತೀಗೌಡ,ಮುದುಗುಪ್ಪೆ ಮೋಹನ್,ಬಿಜೆಪಿ ಮುಖಂಡ ಹೊಸೂರು ಅನಿಲ್ ಕುಮಾರ್ ಮತ್ತಿತರರು ಹಾಜರಿದ್ದರು