ಬೆಂಗಳೂರು: ಮೈತ್ರಿ ಒಕ್ಕಲಿಗ ನಾಯಕರ ಶಕ್ತಿಪ್ರದರ್ಶನಕ್ಕೂ ಮುನ್ನ ಇಂದು ದೋಸ್ತಿ ನಾಯಕರ ದಂಡು ಆದಿಚುಂಚನಗಿರಿ ಮಠಕ್ಕೆ ತೆರಳಿದೆ. ಹೆಚ್.ಡಿ ಕುಮಾರಸ್ವಾಮಿ, ಆರ್.ಅಶೋಕ್, ಸಿ.ಟಿ ರವಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಅಶ್ವಥ್ ನಾರಾಯಣ್, ಪಿಸಿ ಮೋಹನ್, ಯದುವೀರ್ ಒಡೆಯರ್, ನಿಖಿಲ್, ಬೆಂಗಳೂರು ಗ್ರಾ, ಅಭ್ಯರ್ಥಿ ಸಿಎನ್ ಮಂಜುನಾಥ್ ಸೇರಿದಂತೆ ಹಲವರು ಮಠಕ್ಕೆ ಭೇಟಿ ಕೊಟ್ಟು ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ಮೊದಲ ಹಂತದ ಚುನಾವಣಾ ಅಭ್ಯರ್ಥಿಗಳು ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದೇವೆ. ಬೆಂಗಳೂರು ನಗರದ ೪ ಅಭ್ಯರ್ಥಿಗಳು, ಮೈಸೂರಿನ ಅಭ್ಯರ್ಥಿ, ಕೋಲಾರದ ಅಭ್ಯರ್ಥಿ, ತುಮಕೂರು, ಮಂಡ್ಯದ ನಾನು ಎಲ್ಲಾ ಜೊತೆಗೂಡಿ ಆಶೀರ್ವಾದ ಪಡೆದಿದ್ದೇವೆ. ವರ್ಷದ ಮೊದಲ ದಿನ ಗುರುಗಳ ಆಶೀರ್ವಾದ ಪಡೆಯೋದು ನಮ್ಮ ಕರ್ತವ್ಯ. ಬಳಿಕ ನಾವೆಲ್ಲ ಒಟ್ಟಾಗಿ ಹೊಸತೊಡಕು ಆಚರಣೆ ಮಾಡುತ್ತೇವೆ ಎಂದರು.
ಆರ್.ಅಶೋಕ್ ಮಾತನಾಡಿ, ಇಂದು ಶ್ರೀಗಳ ಆರ್ಶೀವಾದ ಪಡೆಯುವುದಕ್ಕೆ ಮೈತ್ರಿ ನಾಯಕರು ಬಂದಿದ್ದೇವೆ. ಶ್ರೀಗಳ ಆರ್ಶೀವಾದ, ಅವರ ಬೆಂಬಲದೊಂದಿಗೆ ಚುನಾವಣೆ ಪ್ರಚಾರಕ್ಕೆ ಹೋಗ್ತೀವಿ ಎಂದರು. ಇದೇ ವೇಳೆ ಬಿಡದಿ ತೋಟದಲ್ಲಿ ಹೊಸತೊಡಕು ವಿಚಾರಕ್ಕೆ ಪ್ರತಿಕ್ರಿಯಿಸಿ, ಇನ್ನು ಹೋಗುವುದು ನಿರ್ಧಾರ ಆಗಿಲ್ಲ. ಒಂದೊಳ್ಳೆ ಸಂದೇಶ ಹೋಗಬೇಕಿದೆ. ಎಲ್ಲಾ ಸಮುದಾಯದವರು, ಬಿಜೆಪಿಗೆ, ಮೋದಿಗೆ ಮತ ಹಾಕಬೇಕೆಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಇಲ್ಲಿ ಆರ್ಶೀವಾದ ಪಡೆದರೆ ಇನ್ನಷ್ಟು ಬೆಂಬಲ ಸಿಗುತ್ತದೆ ಎಂದು ಹೇಳಿದರು.