ಚಾಮರಾಜನಗರ: ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ಸಂಬಂಧ ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಪರವಾನಗಿ ಪಡೆದ (ಬಂದೂಕು) ಶಸ್ತ್ರಾಸ್ತ್ರಗಳನ್ನು ಠೇವಣಿ ಮಾಡಲು ಸ್ಕ್ರೀನಿಂಗ್ ಸಮಿತಿ ರಚಿಸಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಆದೇಶಿಸಿದ್ದಾರೆ.
ಜಿಲ್ಲಾಧಿಕಾರಿಯವರು ಸ್ಕ್ರೀನಿಂಗ್ ಸಮಿತಿಯ ಅಧ್ಯಕ್ಷರಾಗಿದ್ದು, ಪೊಲೀಸ್ ಅಧೀಕ್ಷಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಹೆಚ್ಚುವರಿ ಜಿಲ್ಲಾಧಿಕಾರಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೊಳ್ಳೇಗಾಲ ಉಪವಿಭಾಗಾಧಿಕಾರಿ, ಜಿಲ್ಲಾ ಶಸ್ತ್ರಗಾರದ ಉಪ ಅಧೀಕ್ಷಕರು, ಚಾಮರಾಜನಗರ ಉಪ ವಿಭಾಗದ ಅಧೀಕ್ಷಕರು, ಕೊಳ್ಳೇಗಾಲ ಉಪ ವಿಭಾಗದ ಅಧೀಕ್ಷಕರು ಮತ್ತು ಚಾಮರಾಜನಗರ, ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ, ಹನೂರು ತಾಲೂಕುಗಳ ತಹಶೀಲ್ದಾರರು ಸಮಿತಿಯ ಸದಸ್ಯರಾಗಿದ್ದಾರೆ.
ಬ್ಯಾಂಕ್ ಭದ್ರತೆಗಾಗಿ ಹಾಗೂ ಕ್ರೀಡಾ ಉದ್ದೇಶಕ್ಕಾಗಿ ಪಡೆದಿರುವ ಬಂದೂಕುಗಳನ್ನು ಹೊರತುಪಡಿಸಿ ಚುನಾವಣಾ ಮುಕ್ತಾಯವಾಗುವವರೆಗೆ ಪರವಾನಗಿ ಹೊಂದಿರುವ ಆಯುಧ (ಬಂದೂಕು)ಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡಬೇಕು. ಠೇವಣಿಯಿಂದ ವಿನಾಯಿತಿ ಪಡೆಯಲು ಸಂಬಂಧಪಟ್ಟ ಠಾಣೆಯ ಅರಕ್ಷಕ ನಿರೀಕ್ಷಕರಲ್ಲಿ ಮನವಿ ಸಲ್ಲಿಸಿ ವಿನಾಯಿತಿ ಪಡೆದುಕೊಳ್ಳಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.