ಬೆಳಗಾವಿ/ಬಾಗಲಕೋಟೆ/ಬಳ್ಳಾರಿ: ರಾಜ್ಯದ ಏಳು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಇಂದು ಬೆಳಿಗ್ಗೆ ಏಕಾಏಕಿ ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿಗಳಿಗೆ ಬಿಸಿಮುಟ್ಟಿಸಿದೆ. ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ದಾವಣಗೆರೆ, ಉಡುಪಿ, ಗದಗ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಈ ದಾಳಿ ನಡೆದಿದೆ.
ಬೆಳಗಾವಿಯ ದೇವರಾಜ ಅರಸು ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಸಿದ್ದಲಿಂಗಪ್ಪ, ಬಾಗಲಕೋಟೆಯ ಲೆಕ್ಕಪತ್ರ ವಿಭಾಗದ ಎಫ್ಡಿಎ ಶೈಲ ಸುಭಾಷ್ ತತ್ರಾಣಿ, ಬಳ್ಳಾರಿಯ ಕಾರ್ಯಪಾಲಕ ಎಂಜಿನಿಯರ್ ಅಮೀನ್ ಮುಕ್ತಾರ್, ದಾವಣಗೆರೆಯ ಶಿಗ್ಗಾಂವಿ ಪಿಡಿಓ ರಾಮಕೃಷ್ಣ, ಉಡುಪಿ ಕಾರ್ಕಳದ ಮೆಸ್ಕಾಂ ಅಕೌಂಟೆಂಟ್ ಗಿರೀಶ್ ರಾವ್, ಗದಗದ ಯೋಜನಾಧಿಕಾರಿ ಗಂಗಾಧರ ಮತ್ತು ಧಾರವಾಡ ಪಿಡಬ್ಲುಡಿಯ ಮುಖ್ಯ ಇಂಜಿನಿಯರ್ ಹೆಚ್. ಸುರೇಶ್ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದೆ.
ಗದಗದಲ್ಲಿ ಗಂಗಾಧರ ಶಿರೋಳ ಅವರ ಮನೆ, ಕಚೇರಿ ಮತ್ತು ಸಂಬಂಧಿಕರ ಮನೆ ಸೇರಿ ಆರು ಸ್ಥಳಗಳಲ್ಲಿ ದಾಳಿ ನಡೆಯಿತು. ಚಿನ್ನಾಭರಣ, ಬೆಳ್ಳಿ, ವಾಹನ, ಆಸ್ತಿ ದಾಖಲೆಗಳು ಪತ್ತೆಯಾಗಿವೆ. ಕಲಬುರಗಿಯಲ್ಲಿಯೂ ಬಳ್ಳಾರಿ ಪಿಡಬ್ಲುಡಿ ಅಧಿಕಾರಿ ಅಮೀನ್ ಮುಕ್ತಾರ್ ಮನೆ ಹಾಗೂ ಅವರ ಸಹೋದರನ ಅಪಾರ್ಟ್ಮೆಂಟ್ ಮೇಲೆ ದಾಳಿ ನಡೆದಿದೆ.
ಬಾಗಲಕೋಟೆ ಅಮೀನಗಢದಲ್ಲಿ ಎಫ್ಡಿಎ ತತ್ರಾಣಿ ಮನೆ ಹಾಗೂ ಆಭರಣ ಮಳಿಗೆಯ ಮೇಲೂ ದಾಳಿ ನಡೆದಿದ್ದು, ಮಹತ್ವದ ದಾಖಲೆಗಳು ಲಭಿಸಿವೆ. ಹಾವೇರಿಯ ಬಾಡ ಗ್ರಾಮ ಪಂಚಾಯತಿಯಲ್ಲಿ ಪಿಡಿಓ ರಾಮಕೃಷ್ಣಪ್ಪ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ನಡೆದಿದೆ.
ಇದೆ ರೀತಿ ಬಳ್ಳಾರಿ, ಉಡುಪಿ, ದಾವಣಗೆರೆ ಜಿಲ್ಲೆಗಳಲ್ಲೂ ದಾಳಿ ನಡೆದಿದ್ದು, ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿರುವ ಬಗ್ಗೆ ಲೋಕಾಯುಕ್ತ ಮೂಲಗಳು ತಿಳಿಸಿವೆ.