ಬೆಂಗಳೂರು : ಸದ್ಯಕ್ಕೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಎದುರಾಗಿರೋ ಎಲ್ಪಿಜಿ ಅಭಾವ ಕೂಡ ದೂರವಾಗಿಲ್ಲದೆ ಇರುವುದರಿಂದ ಆಟೋ ಚಾಲಕರು ಸಂಕಷ್ಟ ಎದುರಿಸುವಂತಾಗಿದೆ.
ಸಮಸ್ಯೆ ಹೆಚ್ಚಾಗುತ್ತಿದ್ದರು ಕೂಡಾ ಸರ್ಕಾರ ಇಲ್ಲಿ ತನಕ ಆಟೋ ಚಾಲಕರ ವಿಚಾರವಾಗಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಆಟೋ ಸಂಘಟನೆಗಳು ಸಭೆ ಮಾಡಿ ಹೋರಾಟದ ಹಾದಿ ಹಿಡಿಯಲು ನಿರ್ಧರಿಸಿವೆ. ಸದ್ಯ ಉಪಚುನಾವಣೆ ಪ್ರಚಾರ ಮುಗಿಸಿ ನಾಳೆ ಸಿಎಂ, ಡಿಸಿಎಂ ಸೇರಿದಂತೆ ಸಚಿವರೆಲ್ಲರು ವಾಪಸ್ ಆಗಲಿದ್ದಾರೆ.
ಪ್ರಮುಖವಾಗಿ ಆಟೋ ಸಂಘಟನೆಗಳು ಸಿಎಂ, ಡಿಸಿಎಂ, ಸಾರಿಗೆ ಸಚಿವರು, ಆಹಾರ ಸಚಿವರು, ಶಿಕ್ಷಣ ಸಚಿವರ ಭೇಟಿಗೆ ನಿರ್ಧಾರ ಮಾಡಿದ್ದು, ಆರ್ಥಿಕ ಹೊಡೆತ ಸಂಬಂಧ ಮನವಿ ಮಾಡಿ, ಆರ್ಥಿಕ ಸಹಾಯಕ್ಕೆ ಮನವಿ ಮಾಡಲು ನಿರ್ಧಾರಿಸಲಾಗಿದೆ. ಜೊತೆಗೆ ಮಕ್ಕಳ ಸ್ಕೂಲ್ ಫೀಸ್ ಪಾವತಿಗೆ 2 ತಿಂಗಳ ಸಮಯಾವಕಾಶ ನೀಡುವಂತೆ ಮನವಿ ಮಾಡಲಿದ್ದಾರೆ.
ಸದ್ಯ ಇದೇ ವಾರದಲ್ಲಿ ಸರ್ಕಾರದ ಜನಪ್ರತಿನಿಧಿಗಳ ಭೇಟಿಗೆ ಆಟೋ ಸಂಘಟನೆಗಳು ನಿರ್ಧಾರ ಮಾಡಿದ್ದು, ಒಂದೊಮ್ಮೆ ಈ ವಾರದಲ್ಲಿ ಸಮಸ್ಯೆ ಸಂಬಂಧ ಸರ್ಕಾರ ಭೇಟಿಗೆ ಅವಕಾಶ ಮಾಡಿಕೊಡದಿದ್ದರೆ ರಾಜ್ಯವ್ಯಾಪಿ ಸಚಿವರ ಮನೆಗಳಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡುತ್ತಿದ್ದಾರೆ. ಅಲ್ಲದೇ ಆಟೋ ಟ್ಯಾಕ್ಸಿ ಬಂದ್ ಮಾಡುವ ಎಚ್ಚರಿಕೆ ಕೂಡ ನೀಡಿದ್ದಾರೆ.



